ETV Bharat / city

ಸಿದ್ದರಾಮಯ್ಯ ಮನೆಗೆ ಪಿಎಸ್ಐ ಪರೀಕ್ಷೆ ಬರೆದ ಅಭ್ಯರ್ಥಿಗಳ ಭೇಟಿ.. ಪ್ರಾಮಾಣಿಕರ ರಕ್ಷಣೆಗೆ ಮನವಿ

author img

By

Published : May 28, 2022, 12:36 PM IST

ಪ್ರಾಮಾಣಿಕರಿಗೆ ಸೇವೆ ಮಾಡಲು ಅವಕಾಶ ಸಿಗಲಿ ಎಂದು ಹಲವು ನಾಯಕರನ್ನು ಭೇಟಿಯಾಗಿ ಮನವೊಲಿಸಿ ತಮ್ಮ ಪರ ವಾದ ಮಂಡಿಸುವಂತೆ ಮನವಿ ಮಾಡುತ್ತಿರುವ ಪಿಎಸ್​ಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಇಂದು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ.

PSI Candidates have visited Siddaramayya House
ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ ಪಿಎಸ್​ಐ ಪರೀಕ್ಷೆ ಬರೆದ ಅಭ್ಯರ್ಥಿಗಳು

ಬೆಂಗಳೂರು: ಇತ್ತೀಚೆಗೆ ಪಿಎಸ್ಐ ಅಭ್ಯರ್ಥಿಗಳ ಆಯ್ಕೆಗೆ ನಡೆದ ಪರೀಕ್ಷೆಯಲ್ಲಿ ಭಾಗಿಯಾಗಿದ್ದ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ರಾಜ್ಯ ಸರ್ಕಾರ ನಡೆಸಿದ ಪಿಎಸ್ಐ ಪರೀಕ್ಷೆ ಸಾಕಷ್ಟು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಗೃಹ ಸಚಿವರು ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಲು ಪ್ರತಿಪಕ್ಷ ನಾಯಕನನ್ನು ಭೇಟಿ ಮಾಡಿದ್ದಾರೆ.

ಪ್ರಾಮಾಣಿಕವಾಗಿ ಸಾಕಷ್ಟು ಮಂದಿ ಪರೀಕ್ಷೆ ಬರೆದಿದ್ದು, ಅವರ ಭವಿಷ್ಯ ಡೋಲಾಯಮಾನವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಪ್ರಾಮಾಣಿಕರಿಗೆ ಸೇವೆಗೆ ಅವಕಾಶ ಸಿಗಲಿ ಎಂದು ಹಲವು ನಾಯಕರನ್ನು ಭೇಟಿಯಾಗಿ ಮನವೊಲಿಸಿ ತಮ್ಮ ಪರ ವಾದ ಮಂಡಿಸುವಂತೆ ಮನವಿ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ಇಂದು ಕೆಲ ಅಭ್ಯರ್ಥಿಗಳು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು.

ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿದ ಪಿಎಸ್​ಐ ಪರೀಕ್ಷೆ ಬರೆದ ಅಭ್ಯರ್ಥಿಗಳು

ಪ್ರತಿಭಟನೆ ಹಿನ್ನೆಲೆ ಭೇಟಿ: ಇಂದು ಪಿಎಸ್ಐ ಅಭ್ಯರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಆರಂಭಿಸುವುದಕ್ಕೂ ಮುನ್ನ 15ರಿಂದ 20 ಮಂದಿ ಅಭ್ಯರ್ಥಿಗಳ ತಂಡ ಮನವಿ ಪತ್ರದೊಂದಿಗೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿತ್ತು. ಇದೇ ತಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಎರಡು ಕಾರುಗಳಲ್ಲಿ ಆಗಮಿಸಿರುವ ಅಭ್ಯರ್ಥಿಗಳು ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ್ದು, ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ವಿವಿಧ ರಾಜ್ಯ ನಾಯಕರನ್ನು ಭೇಟಿಯಾಗಿ ತಮ್ಮ ಮನವಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಅನಿವಾರ್ಯವಾಗಿ ಇಂದು ಪ್ರತಿಭಟನೆಗೆ ಮುಂದಾಗಿದ್ದು, ತುಮಕೂರಿನಲ್ಲಿ ನಡೆಯುವ ಕುರುಬ ಸಮುದಾಯದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಲಿರುವ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.

ಎಂಇಎಸ್ ಪುಂಡರನ್ನು ಸರ್ಕಾರ ಬಲಿ ಹಾಕಲಿ: ತುಮಕೂರಿಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಪುಂಡಾಟ ನಡೆಸಿದ್ದಾರೆ. ಸರ್ಕಾರ ಇರೋದು ಇಂತಹವರನ್ನು ಬಲಿ ಹಾಕೋಕೆ. ಪುಂಡಾಟಿಕೆ ಮಾಡಿದ್ರೆ ಬಲಿ ಹಾಕಬೇಕು. ಸರ್ಕಾರ ಸಾಫ್ಟ್​ ಆಗಿದ್ರೆ ಈ ತರಹ ಘಟನೆ ಆಗುತ್ತೆ. ಕಠಿಣ ಕ್ರಮ ತೆಗೆದುಕೊಂಡ್ರೆ ಇಂತಹ ಘಟನೆ ಆಗಲ್ಲ. ಇಲ್ಲದಿದ್ರೆ ಪದೇ ಪದೆ ಇಂತಹ ಘಟನೆಗಳು ಆಗುತ್ತವೆ. ಬಿಜೆಪಿಯವರು ಎಂಇಎಸ್ ಜೊತೆ ಯಾಕೆ ಇಷ್ಟೊಂದು ಮೃದುಧೋರಣೆ ತೋರಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದರು.

ರಾಜ್ಯಸಭೆ ಚುನಾವಣೆಗೆ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಯಾವುದೇ ಚರ್ಚೆ ಆಗಿಲ್ಲ. ರಾಜ್ಯ ನಾಯಕರಾಗಲಿ ಪಕ್ಷದ ಹೈಕಮಾಂಡ್ ನಾಯಕರಾಗಲಿ ಈ ಬಗ್ಗೆ ಚರ್ಚಿಸಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮೊದಲು ಆರ್ಯರಾ, ದ್ರಾವಿಡರಾ ಅನ್ನೋದನ್ನು ಹೇಳಲಿ: ಸಿಎಂ ಬೊಮ್ಮಾಯಿ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.