ETV Bharat / city

ಮುಷ್ಕರದ ಹಿಂದಿದೆಯಾ 'ಕೈ' ಚಳಕ: ಸಾರಿಗೆ ನೌಕರರ ಪರ ಹೋರಾಟ

author img

By

Published : Dec 12, 2020, 8:10 PM IST

ಭಾರಿ ಪ್ರಮಾಣದ ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸಾಧ್ಯ ಇರುವ ಸ್ಥಿತಿಯಲ್ಲಿ ಸಾರಿಗೆ ನೌಕರರನ್ನು ಹೋರಾಟಕ್ಕೆ ಇಳಿದಿರುವ ಹಿಂದೆ ಪ್ರತಿಪಕ್ಷದ ಬೆಂಬಲ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

protest-on-behalf-of-transport-employees
ಸಾರಿಗೆ ನೌಕರರ ಪರ ಹೋರಾಟ

ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿರುವ ಸಾರಿಗೆ ಸಂಸ್ಥೆಗಳ ನೌಕರರ ಹೋರಾಟದ ಹಿಂದೆ ಪರೋಕ್ಷವಾಗಿ ಕಾಂಗ್ರೆಸ್ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಕೆಲವು ವರ್ಷಗಳಿಂದ ತಮ್ಮ ಹೋರಾಟ ನಡೆಸಿಕೊಂಡು ಬಂದಿರುವ ಸಾರಿಗೆ ನೌಕರರು ಕಳೆದ ಮೂರು ದಿನಗಳಿಂದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸರ್ಕಾರದ ವೈಫಲ್ಯ ಎತ್ತಿತೋರಿಸುವ ಉದ್ದೇಶಕ್ಕೆ ಕಾಂಗ್ರೆಸ್ ರಾಜ್ಯ ನಾಯಕರು ಹೋರಾಟಕ್ಕೆ ಬಲ ತುಂಬುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

20 ವರ್ಷಗಳಿಂದಿಚೆಗೆ ಅತಿ ಹೆಚ್ಚು ಸಮಯ ಸಾರಿಗೆ ಸಚಿವರಾಗಿದ್ದವರು ಕಾಂಗ್ರೆಸ್​​ನವರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕು ಗ್ರಾಮಗಳ ಪೈಕಿ ಲಾಭದಲ್ಲಿ ಇದ್ದ ಕೆಎಸ್ಆರ್​​ಟಿಸಿ ಹಾಗೂ ಬಿಎಂಟಿಸಿ ಕೂಡ ನಷ್ಟಕ್ಕೆ ಒಳಗಾಗಿದೆ. ಈ ಸಂದರ್ಭದಲ್ಲಿ ಕಳೆದ ಎರಡು ದಿನಗಳಿಂದ ಸಂಚಾರ ನಿಲ್ಲಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಮುಗಿದ ನಂತರವೂ ನೌಕರರ ಹೋರಾಟ ಮುಂದುವರೆದಿರುವ ಹಿಂದೆ ಕಾಂಗ್ರೆಸ್ ನಾಯಕರ ಉತ್ತೇಜನ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಲಾಕ್​ಡೌನ್​ ಸಂದರ್ಭದಲ್ಲಿ ಬೆಂಗಳೂರಿನಿಂದ ರಾಜ್ಯ ಹಾಗೂ ರಾಷ್ಟ್ರದ ವಿವಿಧೆಡೆ ತೆರಳುವ ಕಾರ್ಮಿಕರಿಗೆ ಸೂಕ್ತ ವಾಹನ ಸೌಲಭ್ಯ ಕಲ್ಪಿಸಿಲ್ಲ ಎಂದು ಕಾಂಗ್ರೆಸ್ ಹೋರಾಟ ಆರಂಭಿಸಿತ್ತು. ಅಲ್ಲಿಂದ ನಿರಂತರವಾಗಿ ಸರ್ಕಾರದ ವಿರುದ್ಧ ಅವಕಾಶ ಸಿಕ್ಕ ಕಡೆಯೆಲ್ಲಾ ದೊಡ್ಡ ಮಟ್ಟದ ಹೋರಾಟ ಮಾಡುತ್ತಾ ಬಂದಿದೆ. ಅಲ್ಲದೇ, ಸರ್ಕಾರದ ವಿರುದ್ಧ ಹೋರಾಡುತ್ತಿರುವವರಿಗೆ ಉತ್ತೇಜನ ನೀಡುವ ಹಾಗೂ ಹೋರಾಟಕ್ಕೆ ಬೆಂಬಲ ಸೂಚಿಸಿ ಪಾಲ್ಗೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ.

ಇದನ್ನೂ ಓದಿ...ಸಾರಿಗೆ ನೌಕರರ ಮನವಿ ಆಲಿಸಲು ಸಿಎಂ, ಸಚಿವರು ನಾಪತ್ತೆ: ಡಿಕೆಶಿ

ಇಂದು ಪ್ರಚೋದಿಸಿದ ಡಿಕೆಶಿ: ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಹೋರಾಟದ ಹಿಂದಿರುವ ಶಕ್ತಿ ಕಾಂಗ್ರೆಸ್ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮ್ಯಾನೇಜ್​​ಮೆಂಟ್ ಜೊತೆಗೆ ಇಬ್ಬರು ಸಿಬ್ಬಂದಿಯನ್ನು ನೇಮಿಸುತ್ತೇವೆ. ನಿಮ್ಮ‌ ಪರವಾಗಿ ಮಾತನಾಡುವವರನ್ನು‌ ನೇಮಕ ಮಾಡುತ್ತೇವೆ. ಒಬ್ಬರು ಪ್ರತಿನಿಧಿಬೇಕು. ಸರ್ಕಾರ ಇದೆಯೋ ಇಲ್ಲವೋ? ಹಳೆಯ ಯೂನಿಯನ್​​ಗಳು ಬೇಡ. ಸರ್ಕಾರ ಎಲ್ಲೋ ಎಡವಿದೆ. ಹಾಗಾಗಿಯೇ ಧರಣಿಗಳು ನಡೆಯುತ್ತಿವೆ ಎಂದು ಪ್ರಚೋದಕ ಮಾತುಗಳನ್ನಾಡಿದ್ದಾರೆ.

ಇವರು ಮಾಡಿದ ಅನುಕೂಲ ಏನು: ಈ ಹಿಂದೆ ಸಾರಿಗೆ ಸಚಿವರಾಗಿ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ ಹಾಗೂ ಎಚ್​​.ಎಂ.ರೇವಣ್ಣ ಜೊತೆ ಚೆಲುವರಾಯಸ್ವಾಮಿ (ಜೆಡಿಎಸ್ ಸರ್ಕಾರ ಇದ್ದಾಗ ಸಾರಿಗೆ ಸಚಿವರಾಗಿದ್ದರೂ ಪ್ರಸ್ತುತ ಕಾಂಗ್ರೆಸ್​​ನಲ್ಲಿ ಪ್ರಮುಖ ನಾಯಕರು) ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಈ ಸಂದರ್ಭ ನೌಕರರ ಅನುಕೂಲಕ್ಕಾಗಿ ಕೈಗೊಂಡ ಕ್ರಮಗಳಾದರೂ ಏನು? ಈಗ ಸಾರಿಗೆ ನೌಕರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದಾಗಿ ಹೇಳಿಕೊಳ್ಳಲು ಇವರಿಗೆ ಯಾವ ನೈತಿಕತೆ ಇದೆ? ಎಂದು ಕಂದಾಯ ಸಚಿವ ಆರ್​​.ಅಶೋಕ್​ ಪ್ರಶ್ನಿಸಿದ್ದಾರೆ.

ನಾನು ಸಚಿವನಾಗಿದ್ದ ಸಂದರ್ಭ ಹೊಸದಾಗಿ 10 ಟಿಟಿಎಂಸಿ ನಿರ್ಮಾಣ, ಬಸ್​​ಗಳ ಖರೀದಿ ಇತ್ಯಾದಿ ಪ್ರಮುಖ ತೀರ್ಮಾನಗಳನ್ನು ಕೈಗೊಂಡು ಆಚರಣೆಗೆ ತಂದಿದ್ದೆ. ಸಾರಿಗೆ ಸಂಸ್ಥೆಯನ್ನು ಲಾಭಕ್ಕೆ ತರುವಲ್ಲಿ ಪ್ರಯತ್ನಿಸಿದ್ದೆವು. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ಸಾಕಷ್ಟು ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅನಗತ್ಯವಾಗಿ ಕಾಂಗ್ರೆಸ್ ಕೆಲ ನಾಯಕರನ್ನು ಎತ್ತಿಕಟ್ಟಿ ಸರ್ಕಾರವನ್ನು ದೂಷಿಸುವ ಕಾರ್ಯ ಮಾಡುತ್ತಿದೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಬೆಂಬಲ ಆರೋಪ: ಸದ್ಯ ನಡೆಯುತ್ತಿರುವ ಸರ್ಕಾರಿ ನೌಕರರ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ, ಡಿ.ಕೆ.ಶಿವಕುಮಾರ್ ಹೊರತುಪಡಿಸಿದರೆ, ಯಾವೊಬ್ಬ ನಾಯಕರು ಪ್ರತಿಭಟನೆ ಸ್ಥಳದತ್ತ ಸುಳಿಯಲಿಲ್ಲ. ನೌಕರರ ಸಮಸ್ಯೆ ಆಲಿಸಿ ಸರ್ಕಾರದ ಗಮನ ಸೆಳೆಯುವ ಜವಾಬ್ದಾರಿಯುತ ಕೆಲಸವನ್ನು ಪ್ರತಿಪಕ್ಷ ನಾಯಕರು ಮಾಡಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಸುದೀರ್ಘ ಅವಧಿಗೆ ಸಾರಿಗೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ ಅವರಾಗಲಿ ಸಾರಿಗೆ ನೌಕರರ ಪರ ಈವರೆಗೂ ತುಟಿ ಬಿಚ್ಚಿಲ್ಲ. ಆದಾಗ್ಯೂ ಕೆಲ ಕಾಂಗ್ರೆಸ್ ನಾಯಕರು ನಡೆ ಹಾಗೂ ಮುಂಬರುವ ದಿನದಲ್ಲಿ ಅಧಿಕಾರ ಹಿಡಿಯುವ ಅತ್ಯುತ್ಸಾಹದ ಹಿಂದೆ ಈ ಪ್ರತಿಭಟನೆಯ ಕುಮ್ಮಕ್ಕು ಇದೆ ಎಂಬ ಮಾತು ಕೇಳಿ ಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.