ಬೆಂಗಳೂರು : ಶ್ವಾಸಕೋಶದ ಮೂಲಕ ದೇಹ ಸೇರುವ ಯಾವುದೇ ವೈರಸ್ಸನ್ನು ಮೂರು ಗಂಟೆಗಳಿಗೂ ಮೀರಿ ಪ್ರತಿಬಂಧಿಸಬಲ್ಲ ಕೋವಿರಕ್ಷಾವನ್ನು ಇಂದು ನಗರದಲ್ಲಿ ಬಿಡುಗಡೆಗೊಳಿಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ನೂತನ್ ಲ್ಯಾಬ್ಸ್ ಕಂಪನಿ ಕೋವಿರಕ್ಷಾವನ್ನು ಸಂಶೋಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ನೂತನ್ ಲ್ಯಾಬ್ಸ್ ಸಂಸ್ಥಾಪಕರಾದ ನೂತನ್, ದೇಹದ ಹೊರಭಾಗಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಲೇಪಿಸಿದರೆ ಸಾಕು. ಶ್ವಾಸಕೋಶದ ಮೂಲಕ ದೇಹ ಸೇರುವ ಯಾವುದೇ ವೈರಸ್ಸನ್ನು ಮೂರು ಗಂಟೆಗಳಿಗೂ ಮೀರಿ ಪ್ರತಿಬಂಧಿಸಬಲ್ಲ ಕೋವಿರಕ್ಷಾ ಆಗಿದೆ ಎಂದು ಹೇಳಿದ್ದಾರೆ.
ಸಂಶೋಧಕ ನೂತನ್ ಅವರು ಹೇಳುವ ಪ್ರಕಾರ, ಕಳೆದ 3 ತಿಂಗಳಲ್ಲಿ ಕರ್ನಾಟಕದ 10,000ಕ್ಕೂ ಹೆಚ್ಚು ಜನರಲ್ಲಿ ಕೋವಿರಕ್ಷಾವನ್ನು ಪರೀಕ್ಷಿಸಲಾಗಿದೆ. ಎಲ್ಲ ಕಡೆಯೂ ಕೋವಿಡ್ ಸೋಂಕು ಮುಕ್ತಗೊಂಡ ಸಕಾರಾತ್ಮಕ ಫಲಿತಾಂಶವೇ ಸಿಕ್ಕಿದೆ. ರಾಜ್ಯ ಸರ್ಕಾರದ ಆಯುಷ್ ಇಲಾಖೆಯ ಅನುಮೋದನೆಯೂ ಈ ಉತ್ಪನ್ನಕ್ಕೆ ಇದೆ. ಕೇಂದ್ರದ ಆಯುಷ್ ಇಲಾಖೆಗೂ ಅನುಮೋದನೆಗೆ ಅರ್ಜಿ ಸಲ್ಲಿಸಿರುವುದಾಗಿ ನೂತನ್ ಅವರು ತಿಳಿಸಿದ್ದಾರೆ.
ನಾವು ಈಗಾಗಲೇ ಉತ್ಪಾದನೆಗೆ ವ್ಯವಸ್ಥೆ ಮಾಡಿದ್ದೇವೆ ಮತ್ತು ಉತ್ಪಾದನಾ ಪ್ರಮಾಣ ಹೆಚ್ಚಿಸಲು ಹೂಡಿಕೆ ಪಾಲುದಾರರ ಅವಶ್ಯಕತೆಯಿದೆ. ಈ ಉತ್ಪನ್ನವು ಸಾಕಷ್ಟು ಬೇಗನೇ ಜಗತ್ತಿನ ಎಲ್ಲ ಭಾಗಗಳಿಗೂ ತಲುಪಬೇಕು. ಕೋವಿಡ್ ವಿಭಿನ್ನ ರೂಪಗಳೊಂದಿಗೆ ಇನ್ನೂ ಕೆಲಕಾಲ ಇರುತ್ತದೆ. ಜೊತೆಗೆ ಹೊಸ ವೈರಸ್ ರೂಪಾಂತರಗೊಳ್ಳುತ್ತಿದೆ ಎಂದು ತಜ್ಞರು ಈಗಾಗಲೇ ಹೇಳಿದ್ದಾರೆ.
ಸರ್ಕಾರಗಳ ಆರೋಗ್ಯ ಇಲಾಖೆ ಮತ್ತು ಔಷಧ ಪೂರೈಕೆ ವ್ಯವಸ್ಥೆಯ ಆರ್ಥಿಕ ಸಹಾಯದಿಂದ, ನಾವು ಕೋವಿಡ್ ಸೋಂಕು ಹರಡುವಿಕೆಯನ್ನು ತಗ್ಗಿಸಲು ಜನ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇವೆ ಸಲ್ಲಿಸಬಹುದು’ ಎಂದು ಅವರು ಹೇಳಿದರು. ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ಇದನ್ನು ಭಾರತದಲ್ಲೇ ತಯಾರಿಸಿದ ಉತ್ಪನ್ನವಾಗಿ (ಮೇಕ್ ಇನ್ ಇಂಡಿಯಾ ಉತ್ಪನ್ನ) ತಯಾರಿಸಲು ನಾವು ಬಯಸುತ್ತೇವೆ ಎಂದರು.
ಇದನ್ನೂ ಓದಿ: ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅವಧಿ ಕಡಿತ ; ಎನ್ಹೆಚ್ಎಂನಿಂದ ಆದೇಶ
ರೋಗ ಪ್ರತಿರೋಧ ಮತ್ತು ಚಿಕಿತ್ಸೆಗೂ ಬಳಕೆ
ಕೋವಿರಕ್ಷಾವನ್ನು ಮುಂಜಾಗೃತಾ ಕ್ರಮವಾಗಿಯೂ ಬಳಸಬಹುದು. ಒಂದು ವೇಳೆ ಸೋಂಕು ತಗುಲಿದ್ದಲ್ಲಿ ಚಿಕಿತ್ಸೆಗಾಗಿಯೂ ಬಳಸಬಹುದು. ಆಧುನಿಕ ವಿಜ್ಞಾನ ಮತ್ತು ಭಾರತೀಯ ಪರಂಪರೆಯ ಔಷಧ ಪದ್ಧತಿಯ ಸಿದ್ಧಾಂತವನ್ನು ಅನ್ವಯಿಸಿಕೊಂಡು ಈ ಉತ್ಪನ್ನವನ್ನು ಆವಿಷ್ಕರಿಸಿದ್ದೇವೆ. ಕೋವಿಡ್ ಹಾಗೂ ಅದರ ನಂತರದ ಎಲ್ಲ ಸಮಸ್ಯೆಗಳಿಗೂ ಕೋವಿರಕ್ಷಾ ರಕ್ಷಾ ಕವಚವಾಗಿದೆ’ ಎಂದು ನೂತನ್ ಹೇಳಿದ್ದಾರೆ.
ಕೋವಿರಕ್ಷಾದಲ್ಲೇನಿದೆ?
‘ಬೆಳ್ಳಿಯು ಪ್ರಭಾವಶಾಲಿಯಾದ ಯಾವುದೇ ಸೂಕ್ಷ್ಮಾಣುಜೀವಿಯನ್ನು ಪ್ರತಿಬಂಧಿಸುವ ಸಾಮರ್ಥ್ಯ ಹೊಂದಿದೆ. ಇದು ಯಾವುದೇ ವೈರಸ್ಸನ್ನು ತಡೆಯಬಲ್ಲುದು. ಅದಕ್ಕಾಗಿಯೇ ನಮ್ಮ ಪರಂಪರೆಯಲ್ಲಿ ಬೆಳ್ಳಿ ಬಳಕೆ ಹೆಚ್ಚು ಇದ್ದುದ್ದನ್ನು ಕಾಣಬಹುದು. ನಾವು ನೈಸರ್ಗಿಕ ವಸ್ತುಗಳಿಗೆ ಮತ್ತು ಆಧುನಿಕ ನ್ಯಾನೊ ತಂತ್ರಜ್ಞಾನದ ಸ್ಪರ್ಶನೀಡಿ ಎರಡರ ಸಮ್ಮಿಲನವಾಗಿರುವ ಕೋವಿರಕ್ಷಾವನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಸಾಂಪ್ರದಾಯಿಕ ಜ್ಞಾನವು ಕೋವಿಡ್–19 ಮತ್ತು ಇತರ ವೈರಸ್ ರೂಪಾಂತರಗಳ ಹರಡುವಿಕೆಯನ್ನು ತಗ್ಗಿಸಲು ಮತ್ತು ಪರಿಹರಿಸಲು ಸಹಕಾರಿ’ ಎಂದು ನೂತನ್ ಲ್ಯಾಬ್ಸ್ ಸಂಸ್ಥಾಪಕರು ಹೇಳಿದರು.
ನೇರ ಖರೀದಿಯ ಉತ್ಪನ್ನ (ಒಟಿಸಿ)
ಕೋವಿರಕ್ಷಾದಲ್ಲಿ ನಾವು ಅನೇಕ ಸ್ವಾಮ್ಯದ ಸಂಯೋಜನೆಗಳನ್ನು ಹೊಂದಿದ್ದೇವೆ. ಅದನ್ನು ಯಾವುದೇ ಶಿಫಾರಸ್ಸಿನ ಅಗತ್ಯವಿಲ್ಲದೇ ನೇರವಾಗಿ (ಒಟಿಸಿ) ಖರೀದಿಸಬಹುದಾದ ಉತ್ಪನ್ನವಾಗಿ ಉತ್ಪಾದಿಸಿ ಕೊಡುತ್ತೇವೆ ಎಂದು ನೂತನ್ ಅವರು ಮಾಹಿತಿ ನೀಡಿದ್ದಾರೆ. ‘ಕೊರೊನಾ ಸೋಂಕು ಸಾಮಾನ್ಯವಾಗಿ ಮಕ್ಕಳಿಂದ ಹಿರಿಯರಿಗೆ ವೇಗವಾಗಿ ಹರಡುತ್ತದೆ ಎಂದು ಹೇಳಲಾಗುತ್ತದೆ. 3ನೇ ಅಲೆ ಆರಂಭವಾಗುವ ಮೊದಲು, ನಾವೆಲ್ಲರೂ ಅದನ್ನು ನಿರ್ವಹಿಸಲು ಸಿದ್ಧರಾಗಿರಬೇಕು. ಆದ್ದರಿಂದ ಕೋವಿರಕ್ಷಾವನ್ನು ಮಕ್ಕಳಿಗೂ ಹಚ್ಚಬಹುದು. ಆದ್ದರಿಂದ ಎಲ್ಲ ವಯಸ್ಸಿನವರಿಗೂ ಅಗತ್ಯ ಉತ್ಪನ್ನವಾಗಿರುವುದರಿಂದ ಇದು ಮನೆಯಲ್ಲಿ ಇರಲೇಬೇಕಾದ ಉತ್ಪನ್ನ ಎಂದು ವಿಶ್ವಾಸದಿಂದ ಹೇಳುತ್ತೇವೆ. ರೋಗ ಗುಣಪಡಿಸುವುದಕ್ಕಿಂತ ತಡೆಗಟ್ಟುವುದು ಉತ್ತಮ ಮಾರ್ಗ ಎಂದಿದ್ದಾರೆ.
ಸರಳ ಬಳಕೆ
ಕೋವಿರಕ್ಷಾದ ಬಳಕೆ ಅತ್ಯಂತ ಸರಳ. ಕೈ, ಮೂಗು, ಗಂಟಲು ಮತ್ತು ಮಾಸ್ಕ್ನ ಹೊರಭಾಗದಲ್ಲಿ ಸ್ವಲ್ಪ ಲೇಪಿಸಿದರೂ ತುಂಬಾ ಪರಿಣಾಮಕಾರಿ. ಕನಿಷ್ಠ 3 ಗಂಟೆಗಳಿಗೂ ಹೆಚ್ಚು ಕಾಲ ನಿಮ್ಮನ್ನು ವೈರಸ್ನಿಂದ ರಕ್ಷಿಸುತ್ತದೆ. ಆದ್ದರಿಂದ ಮನೆಯಿಂದ ಹೊರಗೆ ಓಡಾಡುವಾಗ ಇದನ್ನು ಬಳಸಬೇಕು. ಒಂದು ಶೀಷೆಯ ದ್ರಾವಣವನ್ನು 200ಕ್ಕೂ ಹೆಚ್ಚು
ಬಾರಿ ಬಳಸಬಹುದಾಗಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆಗೆ ದೇಶದಲ್ಲಿ ಮೊದಲ ಸಾವು
ಉತ್ಪನ್ನ ವೆಚ್ಚದ ಕುರಿತು ಮಾತನಾಡಿದ ವೇಣು ಶರ್ಮಾ, ಸದ್ಯ ಕಚ್ಚಾ ವಸ್ತುಗಳನ್ನು ತರಿಸುವುದು ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಒಂದು ಸಣ್ಣ ಕನಿಷ್ಠ ಪ್ರಮಾಣಕ್ಕೆ, ವೆಚ್ಚವು ಹೆಚ್ಚಾಗುತ್ತದೆ. ಉತ್ಪಾದನಾ ವೆಚ್ಚ ಹಾಗೂ ತೆರಿಗೆಗಳು ಸೇರಿ ಉತ್ಪನ್ನದ ದರ ₹ 300ರಷ್ಟಾಗುತ್ತದೆ. ಆದರೆ ಉತ್ಪಾದನಾ ಪ್ರಮಾಣ ಹೆಚ್ಚಿದಂತೆ ದರ ಶೇ 20ರಿಂದ 30ರಷ್ಟು
ಕಡಿಮೆ ಆಗಲಿದೆ’ ಎಂದು ಅವರು ಹೇಳಿದರು.
ಈ ಉತ್ಪನ್ನವು ಕೋವಿಡ್ -19 ಸೋಂಕುಗಳ ಹರಡುವಿಕೆಯನ್ನು ರಕ್ಷಿಸಲು ಲಸಿಕೆ ಅಭಿಯಾನದ ಮಾದರಿಯಲ್ಲೇ ಸಾಗಲಿದೆ. ಇಡೀ ಪರಿಸ್ಥಿತಿಯನ್ನು ಬದಲಾಯಿಸುವ ಉತ್ಪನ್ನವಾಗಲಿದೆ ಎಂಬ ವಿಶ್ವಾಸವಿದೆ. ಮುಂದಿನ 3 ತಿಂಗಳಲ್ಲಿ ನಾವು ಭಾರತದಾದ್ಯಂತ ಮತ್ತು ವಿಶ್ವಾದ್ಯಂತ ತಲುಪಲು ನಮ್ಮ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ‘ ಎಂದು ನೂತನ್
ಹೇಳಿದ್ದಾರೆ.