ಬೆಂಗಳೂರು: ಹಿಂದೂ ಮುಖಂಡರ ಹತ್ಯೆ ಹಾಗೂ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ ಆರೋಪದಡಿ ಇತ್ತೀಚೆಗಷ್ಟೇ ನಗರ ಪೊಲೀಸರು ಬಂಧಿಸಿದ್ದ ಶಂಕಿತ ಉಗ್ರರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಳಿ ಮಾಡಿದೆ.
ಬೆಂಗಳೂರು, ಕೋಲಾರ ಸೇರಿ ರಾಜ್ಯದ 15 ಕಡೆ ಎನ್ಐಎ ದಾಳಿ ನಡೆಸಿದೆ. ಐಸಿಸ್ (ಇಸ್ಲಾಮಿಕ್ ಸ್ಟೇಟ್) ಲಿಂಕ್ ಹೊಂದಿದ್ದ ಮೆಹಬೂಬ್ ಪಾಷಾ, ಮಹಮ್ಮದ್ ಮನ್ಸೂರ್, ಸಲೀಂಖಾನ್, ಜಬಿವುಲ್ಲಾ, ಸೈಯದ್ ಅಜಮತ್ಗೆ ಸೇರಿದ ಮನೆಗಳ ಮೇಲೆ ದಾಳಿ ಶೋಧ ನಡೆಸಿದೆ.
9 ಮೊಬೈಲ್ಗಳು, 5 ಸಿಮ್ ಕಾರ್ಡ್, ಹಾರ್ಡ್ ಡಿಸ್ಕ್, ಸಿಡಿ, ಡಿವಿಡಿ, ಆಟೋ ರಿಕ್ಷಾ ಹಾಗೂ ಮಹತ್ವದ ದಾಖಲೆಗಳು ವಶಕ್ಕೆ ಪಡೆದುಕೊಂಡಿದೆ. ಹಿಂದೆ ಈ ಐವರು ಶಂಕಿತರನ್ನು ಸಿಸಿಬಿ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಎನ್ಐಎ ತನಿಖೆಗೆ ಪ್ರಕರಣ ವರ್ಗವಾಗಿತ್ತು. ಈ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ಎನ್ಐಎ ತನಿಖೆ ಕೈಗೊಂಡಿತ್ತು.
ಬೆಂಗಳೂರಿನಲ್ಲಿ ISIS ಬೇರು ಸ್ಥಾಪಿಸಲು ಶಂಕಿತ ಉಗ್ರರು ಪ್ಲಾನ್ ಮಾಡಿದ್ದರು. ಹಿಂದೂ ನಾಯಕರ ಹತ್ಯೆಗೆ ಸ್ಕೆಚ್ ರೂಪಿಸಿದ್ದಾಗಿ ಎನ್ ಐಎ ತನಿಖೆ ವೇಳೆ ಪತ್ತೆಯಾಗಿತ್ತು. ಅದಕ್ಕಾಗಿ ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಸಭೆ ನಡೆಸಿದ್ದರು.