ETV Bharat / city

ಪರಿಷತ್ ಚುನಾವಣೆ: ಇಂದು ಮತದಾನ, ಮತದಾರರ ತೋರು ಹಾಗೂ ಮಧ್ಯದ ಬೆರಳಿಗೆ ಶಾಹಿ

author img

By

Published : Jun 13, 2022, 7:29 AM IST

ಪರಿಷತ್ ಚುನಾವಣೆ
ಪರಿಷತ್ ಚುನಾವಣೆ

ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ಇಂದು ಮತದಾನ. ಜೂನ್ 15 ರಂದು ಫಲಿತಾಂಶ ಹೊರಬರಲಿದೆ.

ಬೆಂಗಳೂರು: ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ. ವಾಯವ್ಯ, ದಕ್ಷಿಣ ಪದವೀಧರರ ಕ್ಷೇತ್ರ ಹಾಗೂ ವಾಯವ್ಯ, ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ರಾಜ್ಯದ 11 ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ. ಒಟ್ಟು 417 ಮತಗಟ್ಟೆಗಳನ್ನು ತೆರೆಯಲಾಗಿದ್ದು, 49 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬುಧವಾರ (ಜೂನ್‌ 15) ರಂದು ಫಲಿತಾಂಶ ಹೊರಬರಲಿದೆ.

ದಕ್ಷಿಣ ‍ಪದವೀಧರ ಕ್ಷೇತ್ರ: ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ದಕ್ಷಿಣ ‍ಪದವೀಧರ ಕ್ಷೇತ್ರದಲ್ಲಿ ಬಿಜೆ‍ಪಿಯಿಂದ ಮೈ.ವಿ. ರವಿಶಂಕರ್‌, ಜೆಡಿಎಸ್‌ನ ಹೆಚ್‌.ಕೆ. ರಾಮು, ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ, ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌, ಪಕ್ಷೇತರ ಪ್ರಸನ್ನ ಎನ್‌. ಗೌಡ ಸೇರಿದಂತೆ 19 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರ: ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನ ಬಸವರಾಜ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ ಸೇರಿದಂತೆ 7 ಅಭ್ಯರ್ಥಿಗಳು ಕಣದಲ್ಲಿದ್ದು, 17,973 ಶಿಕ್ಷಕರು ಮತದಾನದ ಹಕ್ಕು ಹೊಂದಿದ್ದಾರೆ.

ವಾಯವ್ಯ ಪದವೀಧರ ಕ್ಷೇತ್ರ: ಬಾಗಲಕೋಟೆ, ವಿಜಯಪುರ, ಬೆಳಗಾವಿ ವ್ಯಾಪ್ತಿಯ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹಣಮಂತ ನಿರಾಣಿ, ಕಾಂಗ್ರೆಸ್​​ನ ಸುನೀಲ ಸಂಕ ಸೇರಿದಂತೆ 11 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ, ಇಲ್ಲಿ 99,598 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ವಾಯವ್ಯ ಶಿಕ್ಷಕರ ಕ್ಷೇತ್ರ: ಇದೇ ಜಿಲ್ಲೆಗಳ ವ್ಯಾಪ್ತಿಯ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಅರುಣ ಶಹಾಪುರ, ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ, ಜೆಡಿಎಸ್‌ನ ಚಂದ್ರಶೇಖರ ಲೋಣಿ, ಪಕ್ಷೇತರರಾದ ಎನ್‌.ಬಿ. ಬನ್ನೂರ ಸೇರಿ 12 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಒಟ್ಟು 25,388 ಮತದಾರರಿದ್ದಾರೆ.

ಬೆಳಗ್ಗೆ 9 ರಿಂದ ಸಂಜೆ 5ರವೆರೆಗೆ ಮತದಾನಕ್ಕೆ ಅವಕಾಶವಿದೆ. ಒಂದೇ ಮತಗಟ್ಟೆಯಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಅವಕಾಶವಿದೆ. ಅರ್ಹ‌ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು‌ ಮಾಡಲಾಗಿದೆ.

ಯಾವ ಬೆರಳಿಗೆ ಶಾಹಿ?: ಪದವೀಧರ ಮತಕ್ಷೇತ್ರದ ಮತದಾರರ ಬಲಗೈ ತೋರುಬೆರಳಿಗೆ ಶಾಹಿ ಹಾಕಲಿದ್ದು, ಶಿಕ್ಷಕರ ಮತಕ್ಷೇತ್ರದ ಮತದಾರರ ಬಲಗೈಯ ನಡುವಿನ ಬೆರಳಿಗೆ ಶಾಹಿ ಹಾಕಲಿದ್ದಾರೆ. ಮತ ಎಣಿಕೆ‌ ಕೇಂದ್ರಗಳಲ್ಲಿ ಮೊಬೈಲ್, ಶಾಹಿ ಪೆನ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಪ್ರಸ್ತುತ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮೂಲಕ ಮತದಾನ ನಡೆಯಲಿದೆ. ಮೊದಲನೇ ಪ್ರಾಶಸ್ತ್ಯ ನೀಡಿದಲ್ಲಿ ಮಾತ್ರ ಮತದಾನ ಸಿಂಧುವಾಗಲಿದೆ. ಉಳಿದ ಪ್ರಾಶಸ್ತ್ಯದ ಮತಗಳು ಐಚ್ಛಿಕ.

(ಇದನ್ನೂ ಓದಿ: ರಾಜಕಾರಣದ ಅದೃಷ್ಟ ಆಟ.. ವಿಧಾನ ಪರಿಷತ್ ಟಿಕೆಟ್ ಸಿಗದ ಅಭ್ಯರ್ಥಿಗಳಿಗೆ ಒಲಿದ ರಾಜ್ಯಸಭೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.