ETV Bharat / city

2024ರ ಪ್ಯಾರಿಸ್ ಒಲಿಂಪಿಕ್ಸ್​ಗೆ ರಾಜ್ಯದ 75 ಕ್ರೀಡಾಪಟುಗಳು: ಸಚಿವ ನಾರಾಯಣಗೌಡ ಭರವಸೆ

author img

By

Published : Aug 21, 2021, 4:08 AM IST

ಮುಂದಿನ ಒಲಿಂಪಿಕ್ಸ್​ಗಾಗಿ ವೈಜ್ಞಾನಿಕವಾಗಿ ಕ್ರೀಡಾ ಪ್ರತಿಭಾನ್ವೇಷಣೆ ಮಾಡಲಾಗುವುದು. ತರಬೇತಿ ಶಿಬಿರಗಳು, ಕ್ರೀಡಾಕೂಟಗಳ ಮೂಲಕ ಅವರ ಸಾಮರ್ಥ್ಯ ಗುರುತಿಸಲಾಗುವುದು ಎಂದು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

Minister kc Narayangowda on Paris Olympics preparations
2024ರ ಪ್ಯಾರಿಸ್ ಒಲಿಂಪಿಕ್ಸ್​ಗೆ ರಾಜ್ಯದ 75 ಕ್ರೀಡಾಪಟುಗಳು: ಸಚಿವ ನಾರಾಯಣಗೌಡ ಭರವಸೆ

ಬೆಂಗಳೂರು: ಟೋಕಿಯೋ ಒಲಿಂಪಿಕ್‍ನಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆ ಆಶಾದಾಯಕವಾಗಿದೆ. ಶ್ರೇಷ್ಟ ಪ್ರದರ್ಶನದ ಮೂಲಕ ಅವರು ಸ್ಫೂರ್ತಿ ತುಂಬಿದ್ದಾರೆ. ಒಲಿಂಪಿಕ್‍ನ ಪದಕ ಪಟ್ಟಿಯಲ್ಲಿ ಅಗ್ರ 10 ಸ್ಥಾನದೊಳಗೆ ನಮ್ಮ ದೇಶವು ಇರಬೇಕು. ಅದಕ್ಕೆ ಈಗಿನಿಂದಲೇ ಸಿದ್ದತೆ ಆಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಅಮೃತ ಕ್ರೀಡಾ ದತ್ತು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.

ಕೇಂದ್ರ ಸರ್ಕಾರ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡುವುದಕ್ಕಾಗಿ ಖೇಲೋ ಇಂಡಿಯಾ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರವೂ ಕ್ರೀಡೆಗೆ ಉತ್ತೇಜನ ನೀಡುವುದರ ಜೊತೆಗೆ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಅಮೃತ ಕ್ರೀಡಾ ದತ್ತು ಯೋಜನೆಯನ್ನು ಜಾರಿಗೆ ತಂದಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್​ ಅನ್ನು ಗಮನದಲ್ಲಿರಿಸಿಕೊಂಡೇ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪದಕ ವಿಜೇತ ಸಾಮರ್ಥ್ಯವುಳ್ಳ 75 ಕ್ರೀಡಾಪಟುಗಳನ್ನು ಆಯ್ಕೆಮಾಡಿ, ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದಿದ್ದಾರೆ.

ಬಹು ಆಯಾಮಗಳಿಂದ ಕ್ರೀಡಾ ಪಟುಗಳ ಆಯ್ಕೆ: ವೈಜ್ಞಾನಿಕವಾಗಿ ಕ್ರೀಡಾ ಪ್ರತಿಭಾನ್ವೇಷಣೆ ಮಾಡಲಾಗುವುದು. ತರಬೇತಿ ಶಿಬಿರಗಳು, ಕ್ರೀಡಾಕೂಟಗಳ ಮೂಲಕ ಅವರ ಸಾಮರ್ಥ್ಯ ಗುರುತಿಸಲಾಗುವುದು. ಭಾರತೀಯ ಒಲಿಂಪಿಕ್ಸ್​ ಸಂಸ್ಥೆಯಲ್ಲಿ ನೋಂದಾಯಿಸಿದ ಹಾಗೂ ಕರ್ನಾಟಕ ರಾಜ್ಯದ ಸಂಘ ಸಂಸ್ಥೆಗಳು ಪೋಷಿಸಿರುವ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಪೈಕಿ ಶ್ರೇಷ್ಟರನ್ನು ಆಯ್ಕೆ ಮಾಡಲಾಗುತ್ತದೆ. ಉನ್ನತ ಅಧಿಕಾರ ಸಮಿತಿ ರಚಿಸಿ ಕ್ರೀಡಾ ಪ್ರತಿಭೆಗಳ ಪಟ್ಟಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಉನ್ನತ ಅಧಿಕಾರ ಸಮಿತಿ: ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವನಾದ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ‌. ಕರ್ನಾಟಕ ಒಲಿಂಪಿಕ್ಸ್​ ಸಂಸ್ಥೆಯ ಅಧ್ಯಕ್ಷರು ಸಮಿತಿಯ ಉಪಾಧ್ಯಕ್ಷರಾಗಲಿದ್ದಾರೆ. ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸದಸ್ಯರಾಗಲಿದ್ದು, ಆಯುಕ್ತರು, ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕ್ರೀಡಾ ವಿಜ್ಞಾನ ಕೇಂದ್ರದಿಂದ ತಜ್ಞರು, ಅರ್ಜುನ ಪ್ರಶಸ್ತಿ ವಿಜೇತ ಖ್ಯಾತ ಹಾಕಿ ಆಟಗಾರ ವಿ.ಆರ್. ರಘುನಾಥ್, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಖ್ಯಾತ ಈಜುಪಟು ನಿಹಾರ್ ಅಮಿನ್, ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಸಮಿತಿಯ ಸದಸ್ಯರಾಗಿದ್ದಾರೆ ಎಂದು ನಾರಾಯಣಗೌಡ ಮಾಹಿತಿ ನೀಡಿದ್ದಾರೆ.

ಉನ್ನತ ಅಧಿಕಾರ ಸಮಿತಿ ಆಯ್ಕೆ ಮಾಡಿದ ಕ್ರೀಡಾಪಟುಗಳು ಖೇಲೋ ಇಂಡಿಯಾ ಯೋಜನೆಯಡಿ ಮಾನ್ಯತೆ ಪಡೆದ ಪ್ರತಿಷ್ಟಿತ ಅಕಾಡೆಮಿಗಳಲ್ಲಿ ಗುಣಮಟ್ಟದ ತರಬೇತಿ ಪಡೆದು ಉತ್ತಮ ಸಾಧನೆ ಮಾಡಲು ಅನುಕೂಲವಾಗಲೆಂದು ರಾಜ್ಯ ಸರ್ಕಾರ ಪ್ರತಿ ಕ್ರೀಡಾಪಟುವಿಗೆ ವಾರ್ಷಿಕ ಗರಿಷ್ಠ ರೂ. 5 ಲಕ್ಷದವರೆಗೆ ಪ್ರೋತ್ಸಾಹಧನ ನೀಡಲಿದೆ. ಇದಲ್ಲದೆ ಆಕಾಂಕ್ಷಾ ಪೋರ್ಟಲ್ ಮೂಲಕ ಸಿಎಸ್‍ಆರ್ ನಿಧಿಯನ್ನು ಅಮೃತ ಕ್ರೀಡಾ ದತ್ತು ಯೋಜನೆಗೆ ಬಳಸುವುದಕ್ಕೂ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ರಾಜ್ಯಸರ್ಕಾರ ನೀಡುತ್ತಿದೆ. ಪ್ಯಾರಿಸ್ ಒಲಿಂಪಿಕ್‍ಗೆ ರಾಜ್ಯದಿಂದ ಅತಿ ಹೆಚ್ಚು ಕ್ರೀಡಾಪಟುಗಳು ಆಯ್ಕೆಯಾಗಬೇಕು. ಅ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸಿದ್ದತೆ ಮಾಡಲಾಗಿದೆ. ಕ್ರೀಡಾಪಟುಗಳು ಪರಿಶ್ರಮ ಹಾಗೂ ಶೃದ್ಧೆಯಿಂದ ಸಾಧನೆಯಲ್ಲಿ ತೊಡಗಬೇಕು. 2024ರ ಪ್ಯಾರಿಸ್ ಒಲಿಂಪಿಕ್ಸ್​​ ಪದಕ ಪಟ್ಟಿಯ ಅಗ್ರ 10 ಸ್ಥಾನದಲ್ಲಿ ಭಾರತವೂ ಇರಬೇಕು. ಅದರಲ್ಲಿ ಅತಿ ಹೆಚ್ಚು ಪದಕ ಗಳಿಸಿದ ಕ್ರೀಡಾಪಟುಗಳು ನಮ್ಮ ರಾಜ್ಯದವರಾಗಿರಬೇಕು ಎಂಬ ಆಶಯದಲ್ಲಿ ಅಮೃತ ಕ್ರೀಡಾ ದತ್ತು ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದು ಕ್ರೀಡಾ ಸಚಿವ ಡಾ.ನಾರಾಯಣಗೌಡ ಹೇಳಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಪ್ರಿಯತಮೆಯ ಕೊಲ್ಲಲು ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.