ಬೆಂಗಳೂರು: ಗಾಂಧೀಜಿ ಸ್ವಚ್ಛತೆ ಬಗ್ಗೆ ಹೇಳಿದ್ದರು. ಮನಮೋಹನ್ ಸಿಂಗ್ ನಿರ್ಮಲಭಾರತ ಅಂದರು. ಮೋದಿ ಸ್ವಚ್ಛತಾ ಅಭಿಯಾನ ಅಂದರೂ ಜನ ಸ್ವಚ್ಛತೆಯ ಬಗ್ಗೆ ಒಮ್ಮೊಮ್ಮೆ ನಿಷ್ಕಾಳಜಿ ತೋರೋದೆ ಹೆಚ್ಚು. ಆದರೆ, ಕೊರೊನಾ ಬಂದ ಮೇಲೆ ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಮ್ಗಳಲ್ಲಿ ಸ್ವಚ್ಛತೆ ಜತೆಗೆ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ಹಾಗೂ ವಿಲೇವಾರಿಗೆ ಹೆಚ್ಚಿನ ಜಾಗೃತೆ ವಹಿಸಲಾಗುತ್ತಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜತೆಗೆ ಅದರಿಂದಾಗಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವೂ ಹೆಚ್ಚಾಗ್ತಿದೆ. ಇದರ ವಿಲೇವಾರಿ ಬಲು ದೊಡ್ಡ ಸವಾಲು ಕೂಡ ಹೌದು. ಆದರೆ, ಆರೋಗ್ಯ ಇಲಾಖೆ ಸ್ವಚ್ಛತೆಗೆ ಹೆಚ್ಚು ಗಮನ ಕೊಡ್ತಿದೆ. ಕೊರೊನಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾರಣ ಕೋವಿಡ್ ತ್ಯಾಜ್ಯ ವಿಲೇವಾರಿಗೆ ಬೆಂಗಳೂರು, ರಾಯಚೂರು, ವಿಜಯಪುರ ಮತ್ತು ತುಮಕೂರು ಮಹಾನಗರ ಪಾಲಿಕೆಗಳು ಹೆಚ್ಚು ಗಮನ ಕೊಡ್ತಿವೆ.
ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಬಳಕೆಯಾದ ಪಿಪಿಇ ಕಿಟ್ ಕಂಡ್ರೂ ನಮಗೆಲ್ಲಿ ವೈರಸ್ ತಗಲುತ್ತೋ ಎಂದು ಜನ ಆತಂಕಕ್ಕೊಳಗಾಗುತ್ತಿದ್ದಾರೆ. ಈ ಕುರಿತು ಅದೆಷ್ಟೋ ಆರೋಪಗಳು ಕೇಳಿ ಬಂದಿದ್ದವು. ಆದರೆ, ಜಿಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ರೋಗಿಗಳ ಹಾಗೂ ವೈದ್ಯರು ಬಳಸಿದ ತ್ಯಾಜವನ್ನ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ. ಬಳಸಿದ ಉಪಕರಣಗಳನ್ನು ಬೀದಿಯಲ್ಲಿ ಬಿಸಾಡದೆ ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ನಗರದ ಹೊರವಲಯಗಳಲ್ಲಿ ಸುಡಲಾಗುತ್ತಿದೆ ಅಂತಿದೆ ಆರೋಗ್ಯ ಇಲಾಖೆ.
ಬೆಂಗಳೂರಿನಲ್ಲಿ ಪ್ರತಿ ವಾರ್ಡ್ಗಳ ಕಸದ ರಾಶಿ ಹಾಕುವ ಜಾಗಗಳನ್ನು ದಿನಕ್ಕೊಂದರಂತೇ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಕಸ ಹಾಕದಂತೆ ಜನಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಪೌರ ಕಾರ್ಮಿಕರಿಗೆ ಮಾಸ್ಕ್, ಗ್ಲೌಸ್ ಕಾಲಕಾಲಕ್ಕೆ ವಿತರಿಸುತ್ತಿಲ್ಲ ಎಂಬ ಆರೋಪಗಳೂ ಇವೆ. ತುಮಕೂರು ಪಾಲಿಕೆ ವ್ಯಾಪ್ತಿಯಲ್ಲಿ ಕಂಟೋನ್ಮೆಂಟ್ ಏರಿಯಾದಿಂದ ಒಂದೂವರೆ ಟನ್ನಷ್ಟು ಕಸ ಸಂಗ್ರಹವಾಗುತ್ತಿದೆ. ಗುತ್ತಿಗೆದಾರರು ವ್ಯವಸ್ಥಿತವಾಗಿ 42 ಗಂಟೆಯೊಳಗೆ ಅದರ ನಿರ್ವಹಣೆ ಮಾಡುತ್ತಿದ್ದಾರೆ.
ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡದಿದ್ದಲ್ಲಿ ನೋಟಿಸ್ ನೀಡುವ ಜತೆಗೆ ಹೆಚ್ಚುವರಿ ದಂಡವೂ ಬೀಳಲಿದೆ. ಈ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನಾ ಪತ್ರ ಹೊರಡಿಸಿದೆ. ರೋಗಿಗಳು, ವೈದ್ಯರು ಮತ್ತು ಕೊರೊನಾ ಸೋಂಕಿತರ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಒಂದು ವೇಳೆ ಸರಿಯಾಗಿ ವಿಲೇವಾರಿ ಮಾಡದಿದ್ದರೆ ಮತ್ತಷ್ಟು ಸೋಂಕು ಹರಡುವಿಕೆ ಸಾಧ್ಯತೆಯೂ ಇದೆ. ಹಾಗಾಗಿ ಹೆಚ್ಚಿನ ಎಚ್ಚರಿಕೆವಹಿಸಬೇಕಂತಾರೆ ತಜ್ಞರು.