ಬೆಂಗಳೂರು: ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಆರೋಗ್ಯಕರ ಮಾವು, ಹಲಸು, ಸಿರಿಧಾನ್ಯ ಹಾಗೂ ತರಕಾರಿಗಳ ಕೃಷಿ ಮೇಳವನ್ನು ಬೆಂಗಳೂರಿನ ಹೊರವಲಯದಲ್ಲಿ ಆಯೋಜಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬಾಯಲ್ಲಿ ನೀರುರಿಸುವಂತೆ ಘಮಘಮಿಸುತ್ತಿರುವ ವಿವಿಧ ಬಗೆಯ ಮಾವಿನ ಹಣ್ಣುಗಳು, ಚಿನ್ನದಂತೆ ಹೊಳೆಯುತ್ತಿರುವ ಹಲಸಿನ ತೊಳೆಗಳು, ಅನಾರೋಗ್ಯವನ್ನ ದೂರ ಮಾಡುವ ಸಿರಿಧಾನ್ಯಗಳು... ಇಂತಹ ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮೇಳ ಆಯೋಜನೆಗೊಂಡಿರುವುದು ಬೆಂಗಳೂರು ಹೊರವಲಯ ಕೆ ಆರ್ ಪುರ ಕ್ಷೇತ್ರದ ಎನ್ಆರ್ಐ ಬಡಾವಣೆಯಲ್ಲಿ. ಪುಣ್ಯಭೂಮಿ ಸೇವಾ ಸಂಸ್ಥೆ ಇದೇ ಪ್ರಥಮ ಬಾರಿಗೆ ಈ ಭಾಗದಲ್ಲಿ ಇಂತಹ ಮೇಳ ಆಯೋಜಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ನಾವು ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಖರೀದಿಸಿ ಸೇವಿಸುವ ಹಣ್ಣುಗಳನ್ನು ರಾಸಾಯನಿಕ ವಸ್ತುಗಳಿಂದ ಬೆಳೆದು, ಅದು ಬೇಗ ಹಣ್ಣಾಗಲು ಕೆಲವು ಕೆಮಿಕಲ್ಸ್ ಸಿಂಪಡಿಸುವುದರಿಂದ ಮನುಷ್ಯನ ಜೀವಕ್ಕೆ ಅಪಾಯಕಾರಿಯಾಗಿದೆ. ಸಾರ್ವಜನಿಕರು ಆರೋಗ್ಯವಾಗಿರುವ ಸಲುವಾಗಿ ಈ ಮೇಳವನ್ನು ಆಯೋಜಿಸಿದ್ದು, ಇದರ ಸದುಪಯೋಗವನ್ನು ರಾಮಮೂರ್ತಿನಗರ, ಕಲ್ಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಆಯೋಜಕರಾದ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಗುಣಮಟ್ಟವಲ್ಲದ ಹಾಗೂ ರಾಸಾಯನಿಕ ವಸ್ತುಗಳ ಬಳಕೆಯಿಂದ ಉತ್ಪಾದಿಸಲ್ಪಟ್ಟ ಆಹಾರ ಪದಾರ್ಥಗಳ ಸೇವನೆಯಿಂದ ಅನಾರೋಗ್ಯಕ್ಕಿಡಾಗುತ್ತಿದ್ದವರಿಗೆ ಒಂದೇ ಸೂರಿನಡಿ ಸಾವಯವ ಕೃಷಿ ಪದ್ಧತಿಯಿಂದ ಬೆಳೆದಂತ ವಸ್ತುಗಳು ದೊರಕಿದ್ದು ಸಂತಸವನ್ನುಂಟು ಮಾಡಿದೆ.