ETV Bharat / city

ನಿಮ್ ಬಾಸ್ ಗೊತ್ತಿಲ್ಲ‌ ಎಂದಿದ್ದಕ್ಕೆ ಕೊಲೆ: ಬರ್ಬರ ಹತ್ಯೆಯ ಹಿಂದೆ ಕುಳ್ಳು ರಿಜ್ವಾನ್ ಶಿಷ್ಯರು

author img

By

Published : Jul 23, 2022, 7:35 PM IST

murder
ನಿಮ್ ಬಾಸ್ ಗೊತ್ತಿಲ್ಲ‌ ಎಂದಿದ್ದಕ್ಕೆ ಕೊಲೆ

ಹುಟ್ಟು ಹಬ್ಬದ ಪಾರ್ಟಿ ಮುಗಿಸಿ ಬರುತ್ತಿರುವವನನ್ನು ಅಡ್ಡ ಹಾಕಿದ ರೌಡಿಗಳು 'ನಮ್ಮ ಬಾಸ್​ ಯಾರು ಗೊತ್ತಾ' ಎಂದು ಕೇಳಿದಾಗ 'ಗೊತ್ತಿಲ್ಲ' ಎಂದಿದ್ದಕ್ಕೆ ಕೊಲೆ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು: ಇದೆ ಜುಲೈ 16 ರಂದು ಬೆಂಗಳೂರಿನ ನೈಸ್ ರಸ್ತೆ ಬಳಿಯ ಅಂಡರ್ ಪಾಸ್​ನಲ್ಲಿ ಯುವಕನೊಬ್ಬನ ಬರ್ಬರ ಹತ್ಯೆಯಾಗಿತ್ತು. ಈಗ ಈ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿರುವುದು ನಟೋರಿಯಸ್ ರೌಡಿ ಶೀಟರ್ ಕುಳ್ಳು ರಿಜ್ವಾನ್​ನ ಮೂವರು ಸಹಚರರು ಎಂಬುದು ಪೊಲೀಸರ ತನಿಖೆ ವೇಳೆ ಬಯಲಿಗೆ ಬಂದಿದೆ.

ನಿಮ್ಮ ಬಾಸ್ ಗೊತ್ತಿಲ್ಲ ಎಂದಿದ್ದಕ್ಕೆ‌ ಕೊಲೆ: ಕೊಲೆಯಾದ ಹೇಮಂತ್ ಜುಲೈ 16 ರಂದು ಹುಟ್ಟುಹಬ್ಬದ ಆಚರಿಸಿಕೊಳ್ಳುವುದಕ್ಕಾಗಿ ಮೂವರು ಸ್ನೇಹಿತರ ಜೊತೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆ ಬಳಿ ಇರುವ ಅಂಡರ್ ಪಾಸ್ ಒಂದರ ಬಳಿ ಹೋಗಿದ್ದ. ಇದೇ ವೇಳೆ, ಕುಳ್ಳು ರಿಜ್ವಾನ್ ಶಿಷ್ಯಂದಿರೂ ಅದೇ ಜಾಗದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಇತ್ತ ಹೇಮಂತ್ ಹಾಗೂ ಸ್ನೇಹಿತರು ಪಾರ್ಟಿ ಮಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಈ ವೇಳೆ, ಹೇಮಂತ್ ಹಾಗೂ ಸ್ನೇಹಿತರ ನಡುವೆ ರೌಡಿಸಂ ಬಗ್ಗೆ ಮಾತುಕತೆ ಆರಂಭವಾಗಿತ್ತು.

murder
ಕೊಲೆಯಾದ ಹೇಮಂತ್

ಮಾತಿನ ಭರದಲ್ಲಿ‌ ಹೇಮಂತ್ ಈಗ ಯಾವ ರೌಡಿಗಳು ಏನು ಇಲ್ಲ ಎಂದು ಜೋರಾಗಿ ಮಾತನಾಡಿದ್ದ. ಇದನ್ನು‌ ಸ್ಥಳದಲ್ಲಿಯೇ ಇದ್ದ ಕುಳ್ಳು ರಿಜ್ವಾನ್​ನ ಶಿಷ್ಯರು ಕೇಳಿಸಿಕೊಂಡು ಕೋಪಗೊಂಡಿದ್ದರು. ಇನ್ನೇನು ಪಾರ್ಟಿ ಮುಗಿಸಿ ಸ್ಥಳದಿಂದ ಹೊರಟಿದ್ದ ಹೇಮಂತನನ್ನು ತಡೆದು ನಮ್ಮ ಬಾಸ್ ಗೊತ್ತಿಲ್ವಾ ಎಂದು ಕೇಳಿದ್ದಾರೆ. ಈ ವೇಳೆ ಹೇಮಂತ್ ಯಾವ ಬಾಸ್, ನನಗೆ ಯಾರು ಗೊತ್ತಿಲ್ಲ ಎಂದಿದ್ದಾನೆ.

ರಿಜ್ವಾನ್ ಶಿಷ್ಯರು ನಮ್ಮ ಬಾಸ್, ನಮ್ಮ ಡಾನ್ ಕುಳ್ಳು ರಿಜ್ವಾನ್ ಗೊತ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹೇಮಂತ್ ಸಹ ಗೊತ್ತಿಲ್ಲಾ ಎಂದು ಏರುಧ್ವನಿಯಲ್ಲೇ ಉತ್ತರಿಸಿದ್ದಾನೆ.‌ ಇದರಿಂದ ರೊಚ್ಚಿಗೆದ್ದ ಕುಳ್ಳು ರಿಜ್ವಾನ್ ಸಹಚರರು ಮಚ್ಚಿನಿಂದ ಹೇಮಂತ್ ಮುಖಕ್ಕೆ ಗುರುತು ಸಿಗದಂತೆ ನೂರಕ್ಕೂ ಹೆಚ್ಚು ಬಾರಿ ಹೊಡೆದಿದ್ದಾರೆ. ಇದನೆಲ್ಲ ಕಣ್ಣಾರೆ ಕಂಡು ಭಯಭೀತರಾದ ಹೇಮಂತ್ ಸ್ನೇಹಿತರು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಪ್ರಕರಣದ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣ ಕಾಂತ್ ಹೇಳಿದ್ದಾರೆ.

ಮುಖ ಕೊಚ್ಚುವ ವಿಡಿಯೋ ರೆಕಾರ್ಡ್: ಇಷ್ಟೇ ಅಲ್ಲದೇ ದುಷ್ಕರ್ಮಿಗಳು ಮಚ್ಚಿನಿಂದ ಹೇಮಂತನ ಮುಖ ಕೊಚ್ಚುವ ವಿಡಿಯೋ ರೆಕಾರ್ಡ್ ಮಾಡಿ ಕುಳ್ಳು ರಿಜ್ವಾನ್​ಗೆ ಕಳುಹಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಕೆಂಗೇರಿ ಪೊಲೀಸರ ತನಿಖೆ ವೇಳೆ ಹೇಮಂತ್ ಜೊತೆ ಪಾರ್ಟಿ ಮಾಡಿದ್ದವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

ಕೆಂಗೇರಿ ಪೊಲೀಸ್ ಸಿಬ್ಬಂದಿ ತನಿಖೆ ನಡೆಯುತ್ತಿರುವಾಗಲೇ ಕೆಂಪೇಗೌಡ ನಗರ ಸಿಬ್ಬಂದಿ ಶಿವಮೊಗ್ಗದಲ್ಲಿ ಕುಳ್ಳ ರಿಜ್ವಾನ್​ನನ್ನು ಹಿಡಿದಿದ್ದರು. ಅವನ ಮೊಬೈಲ್​ನಲ್ಲಿ ಹೇಮಂತ್​ನ ಕೊಲೆ ಮಾಡುತ್ತಿರುವ ವಿಡಿಯೋ ನೋಡಿ ಪೊಲೀಸರು ಶಾಕ್ ಆಗಿದ್ದರು. ಸದ್ಯ ವಿಡಿಯೋ ಆಧರಿಸಿ ವಿಚಾರಣೆ ನಡೆಸಿದಾಗ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ವಿದೇಶಿ ಮಹಿಳೆಯರು ಸೇರಿದಂತೆ ಕೆಲವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.