ETV Bharat / city

''ವಿದೇಶದಲ್ಲಿರುವ ಕನ್ನಡಿಗರು ಕರ್ನಾಟಕದಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಮುಂದಡಿ ಇಡಬೇಕು''

author img

By

Published : Nov 20, 2021, 12:46 PM IST

Ashwath Narayan speaks about investment
ಅಕ್ಕ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ - ಅಶ್ವತ್ಥನಾರಾಯಣ ಭಾಗಿ

ವಿದೇಶದಲ್ಲಿರುವ ಕನ್ನಡಿಗರು ಕರ್ನಾಟಕದಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಮುಂದಡಿ ಇಡಬೇಕು ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Minister C.N. Ashwath Narayan) ಹೇಳಿದ್ದಾರೆ.

ಬೆಂಗಳೂರು: 2022ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಐದು ಮಿನಿ ಸಮಾವೇಶಗಳನ್ನು ಅಮೆರಿಕದ ನಾನಾ ಕಡೆಗಳಲ್ಲಿ ನಡೆಸಲಾಗುವುದು. ಆ ದೇಶದಲ್ಲಿರುವ ಕನ್ನಡಿಗರು ತಮ್ಮ ವಾಣಿಜ್ಯ ವೇದಿಕೆಗಳ ಮೂಲಕ ಕರ್ನಾಟಕದಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಮುಂದಡಿ ಇಡಬೇಕು ಎಂದು ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Minister C. N. Ashwath Narayan) ಹೇಳಿದ್ದಾರೆ.

ಉತ್ತರ ಅಮೆರಿಕದಲ್ಲಿರುವ ಕನ್ನಡ ಕೂಟಗಳ ಆಗರವಾಗಿರುವ ''ಅಕ್ಕ ಸಂಘಟನೆ''ಯು(Association of Kannada Kootas of America) ಆಚರಿಸಿದ 66ನೇ ಕನ್ನಡ ರಾಜ್ಯೋತ್ಸವವನ್ನು(Kannada rajyostava in America) ಉದ್ದೇಶಿಸಿ ವರ್ಚುವಲ್ ವೇದಿಕೆ ಮೂಲಕ ಮಾತನಾಡಿದರು. ಅಮೆರಿಕದಲ್ಲಿರುವ ಕನ್ನಡಿಗರು ಮತ್ತು ಭಾರತೀಯರು ಅಲ್ಲಿ ಪ್ರಬಲ ರಾಜಕೀಯ ಶಕ್ತಿ ಹೊಂದಿರುವ ಯಹೂದಿಗಳಿಗಿಂತ ಹೆಚ್ಚು ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ಕ ಸಂಘಟನೆಯಿಂದ ಕನ್ನಡ ರಾಜ್ಯೋತ್ಸವ - ಅಶ್ವತ್ಥನಾರಾಯಣ ಭಾಗಿ

ಅಮೆರಿಕದಲ್ಲಿರುವ ಕನ್ನಡಿಗರು ರಾಜ್ಯ ಸರ್ಕಾರ ಮತ್ತು ಆ ದೇಶಗಳ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ. ಈಗ ಅಮೆರಿಕದ ಕಂಪನಿಗಳಿಗೆ ಬೆಂಗಳೂರಿನಿಂದ ನುರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಕರ್ನಾಟಕ ಸರ್ಕಾರವು ಸಿಲಿಕಾನ್ ವ್ಯಾಲಿ ಬ್ರಿಡ್ಜ್ ಎನ್ನುವ ಹೊಸ ಉಪಕ್ರಮವನ್ನು ಆರಂಭಿಸಿದೆ ಎಂದರು.

ಕನ್ನಡಿಗರು ಕರ್ನಾಟಕಕ್ಕೆ ಸೀಮಿತವಾಗದೇ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ, ವೈದ್ಯಕೀಯ ರಂಗಗಳಲ್ಲಿ ಛಾಪು ಮೂಡಿಸಿರುವುದು ಅನುಕರಣೀಯ ನಡೆಯಾಗಿದೆ. ಈಗಿನ ವರ್ಚುವಲ್ ಮತ್ತು ಹೈಬ್ರಿಡ್ ಜಗತ್ತಿನಲ್ಲಿ ಅಮೆರಿಕದ ಕನ್ನಡಿಗರು ನಮಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂದು ಸಚಿವರು ಬಣ್ಣಿಸಿದರು.

ಎನ್ಇಪಿ(NEP) ಮತ್ತು ಇನ್ನಿತರೆ ಉಪಕ್ರಮಗಳ ಮೂಲಕ ಹೊರನಾಡಿನಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಯಲು ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕಾಗಿ ಆರು ತಿಂಗಳು ಮಾತ್ರ ಓದುವಂತಹ ಪಠ್ಯವನ್ನು ಅಳವಡಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಸಂಕಲ್ಪ ಬಲದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: AKKA..'ಅಕ್ಕ' ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಚಾಲನೆ: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಕರೆ

ಅಮೆರಿಕದಲ್ಲಿರುವ ಕನ್ನಡಿಗರು ಸಾವಿರಾರು ಮೈಲಿ ಆಚೆ ಇದ್ದರೂ ತಮ್ಮ ಕರುಳಿನ ಭಾಷೆಯನ್ನು ಮರೆಯದೇ, ಅರ್ಥಪೂರ್ಣವಾಗಿ ಬೆಳೆಸುತ್ತಿದ್ದಾರೆ. ಇದು ಅನುಸರಣೀಯ ಮಾದರಿಯಾಗಿದೆ. ಇದರಿಂದ ಕನ್ನಡವು ಮತ್ತಷ್ಟು ಶಕ್ತಿಶಾಲಿಯಾಗಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ಅಕ್ಕ ಸಂಘಟನೆಯ ಅಧ್ಯಕ್ಷ ತುಮಕೂರು ದಯಾನಂದ ಮುಂತಾದವರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.