ETV Bharat / city

ಸಿಎಂ ಬೊಮ್ಮಾಯಿ ಬಜೆಟ್ ಜನ ವಿರೋಧಿ ಎಂದು ಆರೋಪಿಸಿ ಕಾಂಗ್ರೆಸ್ ಸಭಾತ್ಯಾಗ

author img

By

Published : Mar 16, 2022, 10:34 PM IST

congress-alleges-cm-bommai-budget-is-anti-people-budget
ಸಿಎಂ ಬೊಮ್ಮಾಯಿ ಬಜೆಟ್ ಜನ ವಿರೋಧಿ ಬಜೆಟ್ ಎಂದು ಆರೋಪಿಸಿ ಕಾಂಗ್ರೆಸ್ ಸಭಾತ್ಯಾಗ

ಬಜೆಟ್ ಮೇಲಿನ ಚರ್ಚೆಯಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿಯವರು ಸಮರ್ಪಕ ಉತ್ತರ ನೀಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಬಜೆಟ್ ವಿರೋಧಿಸಿ ಸಭಾತ್ಯಾಗ ಮಾಡಿದ್ದಾರೆ. ಇದು ಜನ‌ ವಿರೋಧಿ ಬಜೆಟ್ ಆಗಿದೆ. ಇವರು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಇದೇ ವೇಳೆ ಆರೋಪಿಸಿದ್ದಾರೆ.

ಬೆಂಗಳೂರು: ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಉತ್ತರ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಬಜೆಟ್ ವಿರೋಧಿಸಿ ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿತು.

ಬಜೆಟ್ ಚರ್ಚೆಯಲ್ಲಿ ಸಿಎಂ ಪ್ರತಿಕ್ರಿಯೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಜನರ ಬಗ್ಗೆ ಚಿಂತನೆ ಮಾಡಬೇಕಿರುವುದು ಬಹಳ ಮುಖ್ಯ. ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅದರಿಂದ ರಾಜ್ಯದ ಅಭಿವೃದ್ಧಿ ಮಾಡುತ್ತಿರುವುದಾಗಿ ಸಿಎಂ ಹೇಳಿದ್ದಾರೆ. ಕೇಂದ್ರ ಸರ್ಕಾರ ನೀಡುವ ಅನುದಾನ ನಮ್ಮ ರಾಜ್ಯದಿಂದ ಸಂಗ್ರಹಿಸಿದ ತೆರಿಗೆಯ ಹಣವೇ ಆಗಿದೆ. 15ನೇ ಹಣಕಾಸು ಆಯೋಗದಲ್ಲಿ ಅತಿ ಹೆಚ್ಚು ಅನ್ಯಾಯವಾಗಿರುವ ರಾಜ್ಯ ಕರ್ನಾಟಕ ಎಂದು ಅವರು ಹೇಳಿದ್ದಾರೆ. ಕೇಂದ್ರದಿಂದ ತೆರಿಗೆ ಹಾಗೂ ಅನುದಾನ 17 ಸಾವಿರ ಕೋಟಿ ರೂ. ಬರುತ್ತದೆ. ನಮ್ಮ ರಾಜ್ಯದಿಂದ 3 ಲಕ್ಷ ಕೋಟಿ ರೂ. ತೆರಿಗೆ ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

2017-18 ರಲ್ಲಿ 31 ಸಾವಿರ ಕೋಟಿ ರೂ. ಕೇಂದ್ರದ ತೆರಿಗೆ ಪಾಲಿನ ಹಣ ಬರುತ್ತಿತ್ತು. ಈಗ ಅದು 29 ಸಾವಿರ ಕೋಟಿಗೆ ಇಳಿದಿದೆ. ಎಸ್ ಜಿಡಿಪಿಯ ಶೇ.25 ಕ್ಕಿಂತ ಹೆಚ್ಚಿನ ಸಾಲ ಪಡೆಯಬಾರದು. ಎಸ್ ಜಿಡಿಪಿ ಪ್ರತಿವರ್ಷ ಹೆಚ್ಚಾಗುತ್ತಲೇ ಹೋಗುತ್ತದೆ. ನಮ್ಮ ಐದು ವರ್ಷದ ಆಡಳಿತದಲ್ಲಿ ಶೇ.20 ಮೀರಲೇ ಇಲ್ಲ. ಸಾಲ ಹೆಚ್ಚಾದಷ್ಟು ಬಡ್ಡಿ ಪ್ರಮಾಣ ಹೆಚ್ಚಾಗುತ್ತದೆ. ಮುಂದಿನ ವರ್ಷ 47 ಸಾವಿರ ಕೋಟಿ ರೂ. ಬಡ್ಡಿ ಕೊಡಬೇಕಾಗುತ್ತದೆ. ಅದಕ್ಕಾಗಿ ಅನಗತ್ಯ ವೆಚ್ಚ ಕಡಿಮೆ ಮಾಡಿ. ಹೆಚ್ಚುವರಿ ಹುದ್ದೆಗಳನ್ನು ರದ್ದುಗೊಳಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಸಿಎಂ, ಅರಿವು ಯೋಜನೆ ಮುಂದುವರಿಸಲಾಗುತ್ತದೆ. ಎಲ್ಲಾ ಪದವಿಯವರಿಗೂ ಸ್ಕಾಲರ್‌ಶಿಪ್ ನೀಡಲಾಗುವುದು. ಶಾದಿ ಮಹಲ್ ಪೂರ್ಣಗೊಳಿಸಲು ಯತ್ನಿಸಲಾಗುವುದು. ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ 10 ವರ್ಷದಲ್ಲಿ ಯಾವುದು ಅಭಿವೃದ್ಧಿ ಆಗಿವೆಯೋ ಅವುಗಳನ್ನು ಹೊರತುಪಡಿಸಿ ಅಭಿವೃದ್ಧಿ ಹೊಂದದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ, ಇರುವ ಕ್ಷೇತ್ರಗಳಿಗೂ ಅನುದಾನ ನೀಡಲಾಗುವುದು. ಕೇಂದ್ರ ಸರ್ಕಾರದಿಂದ ಬೇರೆ ಬೇರೆ ಯೋಜನೆಗಳಿಗೆ ಅನುದಾನ ನೀಡಲಾಗುತ್ತಿದೆ. ಹೀಗಾಗಿ ಕೇಂದ್ರದಿಂದ ಬರುವ ಅನುದಾನದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿಲ್ಲ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಇದಕ್ಕೆ ಅಸಮಾಧಾನಗೊಂಡು ಸಿಎಂ ಉತ್ತರ ಸರಿಯಿಲ್ಲ. ಇದು ಜನ‌ ವಿರೋಧಿ ಬಜೆಟ್ ಆಗಿದೆ. ಇವರು ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಇವರದ್ದು ಅಭಿವೃದ್ಧಿ ಪರ ಬಜೆಟ್ ಅಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಡಬಲ್ ಎಂಜಿನ್ ಸರ್ಕಾರ ಡಬ್ಬಾ ಸರ್ಕಾರ ಆಗಿದೆ. ಇವರಿಂದ ರಾಜ್ಯದ ಅಭಿವೃದ್ಧಿ‌ ಸಾಧ್ಯವಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಓದಿ : ಪಂಜಾಬ್‌ ಸಿಎಂ ಭಗವಂತ್ ಮಾನ್ ಪದಗ್ರಹಣದ ವೇಳೆ 7 ವರ್ಷದ ಬಳಿಕ ತಾಯಿಗೆ ಪುತ್ರ ಸಿಕ್ಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.