ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನೂತನ ಪೊಲೀಸ್ ಠಾಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಉದ್ಘಾಟಿಸಿದರು. ಇದು ಬೆಂಗಳೂರು ನಗರ ಕಾನೂನು ಸುವ್ಯವಸ್ಥೆಯ 111ನೇ ಪೊಲೀಸ್ ಠಾಣೆ ಆಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಗೋವಿಂದರಾಜ ನಗರ ಪೊಲೀಸ್ ಠಾಣೆ ನಿರ್ಮಾಣ ಗೃಹ ಸಚಿವನಾಗಿ ನನ್ನ ಕೊನೆಯ ಆಜ್ಞೆಯಾಗಿತ್ತು. ಈಗ ಮುಖ್ಯಮಂತ್ರಿಯಾಗಿ ಉದ್ಘಾಟಿಸಿರುವುದು ಸಂತಸದ ವಿಚಾರ. ಎಲ್ಲಾ ಕೆಲಸಕ್ಕೆ ಸಮಯವಿದೆ, ಆದರೆ ಪೊಲೀಸ್ ಕೆಲಸಕ್ಕೆ ಸಮಯ ಎನ್ನುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಯಾರಿಗೆ ತೊಂದರೆಯಾದ್ರೂ ನೆನಪಾಗುವುದು ಪೊಲೀಸರು. ನಾನು ಗೃಹ ಸಚಿವನಾದ ಮೇಲೆ ಪೊಲೀಸರನ್ನ ಹತ್ತಿರದಿಂದ ನೋಡಿದ್ದೇನೆ. ಮಗುವಿಗೆ ತಾಯಿ ಎಷ್ಟು ಮುಖ್ಯವೋ. ಅದೇ ರೀತಿ ಶೋಷಿತ, ಅನ್ಯಾಯಕ್ಕೆ ಒಳಗಾದವರಿಗೆ ಪೊಲೀಸರು ಅಷ್ಟೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಪೊಲೀಸರನ್ನು ಕೊಂಡಾಡಿದ ಸಿಎಂ:
ಒಂದು ಕಾಲದಲ್ಲಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಆದರೆ ಈಗ ಕಾಲ ಬದಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದಾದ್ಯಂತ ಕಾನೂನು ಸುವ್ಯವಸ್ಥೆ ಪಾಲನೆಯಾಗುತ್ತಿದೆ. ಇದಕ್ಕೆ ಕಾರಣರಾದ ಕರ್ನಾಟಕ ಪೊಲೀಸರಿಗೆ ಧನ್ಯವಾದಗಳು. ಇನ್ನು ವಿ.ಸೋಮಣ್ಣ ಅವರು ಕ್ಷೇತ್ರದ ಅಭಿವೃದ್ಧಿಗೆ ಹಠ ತೊಟ್ಟಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರಕ್ಕೆ ಒಂದು ಲಕ್ಷ ಮನೆಗಳ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಬಸವ ವಸತಿ ಯೋಜನೆಯ ಮೂಲಕ ಐದು ಲಕ್ಷ ಮನೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇಷ್ಟು ಸುಂದರವಾದ ಪೊಲೀಸ್ ಠಾಣೆ ಬೆಂಗಳೂರಿನಲ್ಲಿ ಎಲ್ಲಿಯೂ ಇಲ್ಲ. ಈ ಠಾಣೆಯ ನಿರ್ಮಾಣದ ಮೂಲಕ ಕ್ಷೇತ್ರದ ಜನರ ಸುರಕ್ಷತೆಗೆ ಆದ್ಯತೆ ನೀಡಿರುವ ಸೋಮಣ್ಣ ಅವರ ಕಾರ್ಯವೈಖರಿ ಮುಂದುವರೆಯಲಿ ಎಂದು ಆಶಿಸಿದರು.
ಕರ್ನಾಟಕದ ಪೊಲೀಸರು ವಿಶೇಷವಾಗಿ ಬೆಂಗಳೂರು ಪೊಲೀಸರಿಗೆ ವಾರ್ ಆನ್ ಡ್ರಗ್ಸ್ ಅಂದಿದ್ದೆ. ಡ್ರಗ್ಸ್ ದಂಧೆಯ ಅನೇಕ ವ್ಯೂಹಗಳನ್ನ ಭೇದಿಸಿದ್ದಾರೆ. 50 ಕೋಟಿಯಷ್ಟು ಮಾದಕ ವಸ್ತುಗಳನ್ನ ಒಂದೇ ದಿನ ಸುಟ್ಟು ಹಾಕಲಾಗಿದೆ. ಸಮಾಜದ ಪಿಡುಗುಗಳನ್ನ ತೊಡೆದು ಹಾಕಲು ಗಟ್ಟಿ ನಿಲುವುಗಳು ಅಗತ್ಯ. ಆನ್ಲೈನ್ ಗ್ಯಾಂಬ್ಲಿಂಗ್ ಸಹ ಎಗ್ಗಿಲ್ಲದೇ ಸಾಗಿತ್ತು, ಅದರ ವಿರುದ್ಧವು ಕಾನೂನನ್ನ ಜಾರಿ ಮಾಡಿದ್ದೇವೆ. ಅದನ್ನ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದರೂ, ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಿಎಂ ಸಮರ್ಥಿಸಿಕೊಂಡರು.
ಗೃಹ ಸಚಿವ ಆರಗ ಜ್ಞಾನೇಂದ್ರ, ವಸತಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಗಣ್ಯರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.