ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ಪೋಷಕರು ನೀಡಿದ್ದ ದೂರಿನ ಮೇರೆಗೆ ಗುರುನಾನಕ್ ಭವನದ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಲು ಯುವತಿಯನ್ನು ಎಸ್ಐಟಿ ಕರೆ ತಂದಿದೆ.
ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ಬೆಳಗಾವಿಯಲ್ಲಿ ಯುವತಿಯ ಪೋಷಕರು ದೂರು ನೀಡಿದ್ದರು. ಆಕೆ ವಾಸವಾಗಿದ್ದ ಸ್ಥಳದ ಆಧಾರದ ಮೇರೆಗೆ ಆರ್.ಟಿ.ನಗರ ಪೊಲೀಸ್ ಠಾಣೆಗೆ ದೂರು ವರ್ಗಾವಣೆ ಆದ ಬಳಿಕ ಎಸ್ಐಟಿಗೂ ಟ್ರಾನ್ಸ್ಫರ್ ಆಗಿತ್ತು.
ಪ್ರಕರಣದ ವಿಚಾರಣೆ ವೇಳೆ, ‘ನನ್ನನ್ನು ಯಾರು ಅಪಹರಣ ಮಾಡಿರಲಿಲ್ಲ. ಜೀವ ಭಯದಿಂದ ನಾನಾಗಿಯೇ ಹೊರ ರಾಜ್ಯಗಳಿಗೆ ಹೋಗಿದ್ದೆ ಎಂದು ತನಿಖಾಧಿಕಾರಿಗಳ ಮುಂದೆ ಯುವತಿ ಹೇಳಿಕೆ ನೀಡಿದ್ದಳು. ಹೀಗಾಗಿ ದಾಖಲಾಗಿರುವ ಅಪಹರಣ ಪ್ರಕರಣ ಮುಕ್ತಾಯಗೊಳಿಸಲು ಹಾಗೂ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಕರೆತಂದಿದ್ದಾರೆ.
ತನಿಖಾವಧಿಯಲ್ಲಿ ನೀಡಿರುವ ಹೇಳಿಕೆಯ ಪ್ರಮಾಣಪತ್ರವನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ನ್ಯಾಯಾಧೀಶರ ಎದುರು ಸಿಡಿಯಲ್ಲಿದ್ದ ಯುವತಿ ಹೇಳಿಕೆ ದಾಖಲಿಸುತ್ತಿದ್ದಾಳೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕೊರೊನಾ ದೃಢ; ಗೋಕಾಕ್ ಸರ್ಕಾರಿ ಆಸ್ಪತ್ರೆಯ ಐಸಿಯುಗೆ ಶಿಫ್ಟ್
ಯುವತಿ ಆಗಮನ ಹಿನ್ನೆಲೆ ಕೋರ್ಟ್ ಸುತ್ತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಶೇಷಾದ್ರಿಪುರಂ ಎಸಿಪಿ ಪೃಥ್ವಿ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಿದ್ದು, ಸುಮಾರು 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.