ETV Bharat / city

ಮನೆ ಕೆಲಸದವಳ ಮಗು ಕದ್ದು ದೂರದ ಸಂಬಂಧಿಗೆ ಮಾರಾಟ : ಸಾಮಾಜಿಕ ಕಾರ್ಯಕರ್ತೆ ಸೇರಿ ಮೂವರು ಅಂದರ್​​

author img

By

Published : Aug 18, 2021, 9:03 PM IST

Updated : Aug 18, 2021, 9:36 PM IST

ಹಣ ಮಾಡುವ ಉದ್ದೇಶದಿಂದ ಮನೆ ಕೆಲಸದವಳ ಮಗು ಮಾರಾಟ ಮಾಡಿದ್ದ ಸಾಮಾಜಿಕ ಕಾರ್ಯಕರ್ತೆ ಸೇರಿ ಮೂವರನ್ನು ವಿಲ್ಸನ್‌ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಮಗು ರಕ್ಷಿಸಿ ತಾಯಿಯ ಮಡಿಲು ಸೇರುವಂತೆ ಮಾಡಿದ್ದಾರೆ..

3 arrested in baby selling case at bangalore
ಮಗು ಮಾರಾಟ ಪ್ರಕರಣದಲ್ಲಿ ಮೂವರು ಅರೆಸ್ಟ್

ಬೆಂಗಳೂರು : ರಾಜಧಾನಿಯ ಆಡುಗೋಡಿಯಲ್ಲಿ 38 ದಿನದ ಮಗುವನ್ನು ದೂರದ ಸಂಬಂಧಿಗೆ 1.30 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಸಾಮಾಜಿಕ ಕಾರ್ಯಕರ್ತೆ ಸೇರಿ ಮೂವರನ್ನು ವಿಲ್ಸನ್‌ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.

ಮಗು ಮಾರಾಟ ಪ್ರಕರಣ

ಮೂವರು ಅಂದರ್​​-ಮತ್ತೋರ್ವನ ಬಂಧನಕ್ಕೆ ಶೋಧ : ನಗರದ ಆಡುಗೋಡಿಯ ನಿವಾಸಿಯಾದ ತರುಣಮ್ ಬಾನು (38), ಈಕೆಗೆ ಮಗು ಮಾರಾಟ ಮಾಡಲು ಸಹಕರಿಸಿದ್ದ ನಿಶಾತ್ ಕೌಶರ್(45) ಹಾಗೂ ಮಗುವನ್ನು ಖರೀದಿಸಿದ್ದ ಸಂಬಂಧಿ (ಎಚ್‌ಬಿಆರ್ ಲೇಔಟ್ ನಿವಾಸಿ) ಕೆ. ಸವೋದ್ (51) ಬಂಧಿತರು. ಆರೋಪಿಗಳಿಂದ 50 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮುಬಾರಕ್ ಪಾಷಾಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಹಣ ಸಂಪಾದಿಸಲು ಮನೆ ಕೆಲಸದವಳ ಮಗು ಮಾರಾಟ : ಸಾಮಾಜಿಕ ಕಾರ್ಯಕರ್ತೆಯಾಗಿರುವ ತರುಣಮ್ ಬಾನು ಮನೆಯಲ್ಲಿ ಶಿರೀನ್ ಕೆಲಸ ಮಾಡುತ್ತಿದ್ದಳು. ಕೆಲ ವರ್ಷಗಳಿಂದ ಆಟೋ ಚಾಲಕ ಮುಬಾರಕ್ ಪಾಷಾ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಪರಿಣಾಮ ಗರ್ಭಿಣಿಯಾಗಿದ್ದ ಶಿರೀನ್ ಕಳೆದ 38 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ತರುಣಮ್ ಸಂಬಂಧಿ ನಿಶಾತ್ ಕೌಶರ್‌ಳ ಮೈದುನ ಕೆ. ಸವೋದ್‌ಗೆ ವಿವಾಹವಾಗಿ 15 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಇದರಿಂದ ಬೇಸತ್ತಿದ್ದ ಸವೂದ್ ಮಕ್ಕಳನ್ನು ದತ್ತು ಪಡೆಯಲು ಮುಂದಾಗಿದ್ದ. ಈ ವಿಚಾರ ತಿಳಿದ ಆರೋಪಿ ತರುಣಮ್, ಶಿರೀನ್‌ಳ ಮಗುವನ್ನು ಕದ್ದು ಸವೂದ್‌ಗೆ ಮಾರಾಟ ಮಾಡಿ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ಸಂಚು ರೂಪಿಸಿದ್ದಳು.

ಮಗು ಕದ್ದು ಮಾರಾಟಕ್ಕೆ ಡೀಲ್ : ಅದರಂತೆ ಮುಬಾರಕ್‌ಗೆ ಈ ವಿಚಾರ ತಿಳಿಸಿ ಹಣದ ಆಮಿಷವೊಡ್ಡಿದ್ದಳು ಆರೋಪಿ ತರುಣಮ್​ ಬಾನು. 50 ಸಾವಿರ ರೂ. ಕೊಟ್ಟರೆ ತನಗೆ ಜನಿಸಿದ ಮಗುವನ್ನು ಮಾರಾಟ ಮಾಡಲು ಸಹಕರಿಸುವುದಾಗಿ ಆತ( ಮುಬಾರಕ್ ಪಾಷಾ) ಒಪ್ಪಿದ್ದ. ಇದಾದ ಬಳಿಕ ನಿಶಾತ್‌ಳ ಜತೆ ಆಕೆಯ ಮೈದುನನ್ನು ಭೇಟಿಯಾದ ತರುಣಮ್ 1.30 ಲಕ್ಷ ರೂ. ಕೊಟ್ಟರೆ ಮಗುವನ್ನು ಕೊಡಿಸುವುದಾಗಿ ಡೀಲ್ ಕುದುರಿಸಿದ್ದಳು. ಹಲವು ವರ್ಷಗಳಿಂದ ಮಕ್ಕಳಿಲ್ಲದೇ ಕಂಗೆಟ್ಟಿದ್ದ ಸವೋದ್ 1.30 ಲಕ್ಷ ರೂ. ಕೊಡಲು ಒಪ್ಪಿದ್ದನು.

ಆರೋಪಿಗಳ ಮುಂದೆಯೇ ತಾಯಿಯ ಅಳಲು : ಆಗಸ್ಟ್ 11ರಂದು ಮುಬಾರಕ್ ಜೊತೆ ಸೇರಿ ಶಿರೀನ್‌ಗೆ ಗಮನಕ್ಕೆ ಬಾರದಂತೆ ತರುಣಮ್ ಮಗುವನ್ನು ಕಳ್ಳತನ ಮಾಡಿ ಸವೋದ್‌ಗೆ ಮಾರಾಟ ಮಾಡಿದ್ದಳು. ಶಿರೀನ್ ತನ್ನ ಮಗುವನ್ನು ಪತ್ತೆ ಮಾಡಿ ಕೊಡುವಂತೆ ತರುಣಮ್ ಹಾಗೂ ಮುಬಾರಕ್ ಮುಂದೆ ಕಣ್ಣೀರು ಹಾಕುತ್ತಿದ್ದಳು. ಆದರೆ, ಆರೋಪಿಗಳು ಮಾತ್ರ ಏನೂ ತಿಳಿದಿಲ್ಲ ಎಂಬಂತೆ ಆಕೆಯ ಮುಂದೆ ನಟಿಸುತ್ತಿದ್ದರು.

ಪೊಲೀಸರಿಂದ ತಾಯಿಯ ಮಡಿಲಿಗೆ ಮಗು : ಮುಂಗಡವಾಗಿ ಕ್ವೀನ್ಸ್ ರಸ್ತೆಯ ಕಚೇರಿಯಲ್ಲಿ ಸಾವೋದ್‌ನಿಂದ ತರುಣಮ್ 50 ಸಾವಿರ ರೂ. ಪಡೆದಿದ್ದಳು. ಆ ಹಣದಲ್ಲಿ ಮುಬಾರಕ್‌ಗೆ ಪಾಲು ಕೊಟ್ಟಿರಲಿಲ್ಲ. ಕೆರಳಿದ ಮುಬಾರಕ್ ಈ ಬಗ್ಗೆ ಮಾತುಕತೆ ನಡೆಸಲು ಆಗಸ್ಟ್ 16ರಂದು ವಿಲ್ಸನ್‌ಗಾರ್ಡನ್‌ನ ಅಗಡಿ ಆಸ್ಪತ್ರೆ ಬಳಿ ಬರುವಂತೆ ಸೂಚಿಸಿದ್ದ. ತರುಣಮ್ ಅಲ್ಲಿ ಬಂದಾಗ ಏಕಾಏಕಿ ಹಣ ಕೊಡುವಂತೆ ಜಗಳ ತೆಗೆದಿದ್ದ. ಈಕೆ ಆಗ ಹಣ ಕೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದಳು. ಮಾತಿಗೆ ಮಾತು ಬೆಳೆದು ಸಾರ್ವಜನಿಕ ಪ್ರದೇಶದಲ್ಲಿ ಕೈ-ಕೈ ಮಿಲಾಯಿಸಲು ಮುಂದಾಗಿದ್ದರು.

ಇದನ್ನೂ ಓದಿ: ಬೆಂಗಳೂರು : ಬುದ್ಧಿ ಹೇಳಿದಕ್ಕೆ ಮಗ ಆತ್ಮಹತ್ಯೆ, ಅಪಘಾತಕ್ಕೆ ತಾಯಿ ಬಲಿ

ಇದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ವಿಲ್ಸನ್‌ಗಾರ್ಡನ್ ಪೊಲೀಸರು ಜಮಾಯಿಸುತ್ತಿದ್ದಂತೆ ಮುಬಾರಕ್ ಸ್ಥಳದಿಂದ ಪರಾರಿಯಾಗಿದ್ದ. ತರುಣಮ್‌ಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಕೊಟ್ಟ ಮಾಹಿತಿ ಮೇರೆಗೆ ಮಗು ಮಾರಾಟವಾಗಿದ್ದ ಸ್ಥಳಕ್ಕೆ ತೆರಳಿದ ಪೊಲೀಸರು ಮಗುವನ್ನು ರಕ್ಷಿಸಿ ತಾಯಿಯ ಮಡಿಲು ಸೇರುವಂತೆ ಮಾಡಿದ್ದಾರೆ.

Last Updated : Aug 18, 2021, 9:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.