ಬ್ರಿಜ್ ಭೂಷಣ್ ಮೇಲಿನ ಲೈಂಗಿಕ ಆರೋಪ ತನಿಖೆಗೆ ಸಮಿತಿ ರಚನೆ: ಸಚಿವ ಅನುರಾಗ್ ಠಾಕೂರ್ ಭರವಸೆ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟ ಕುಸ್ತಿಪಟುಗಳು

author img

By

Published : Jan 21, 2023, 7:45 AM IST

WFI chief

ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಭಾರತದ ಸ್ಟಾರ್ ಕುಸ್ತಿಪಟುಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜೊತೆ 2ನೇ ಸುತ್ತಿನ ಚರ್ಚೆ ನಡೆಸಿದ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ನಿವಾಸದಲ್ಲಿ ಶುಕ್ರವಾರ ಸಂಜೆ ನಡೆದ ಎರಡನೇ ಸಭೆಯ ಬಳಿಕ ಭಾರತೀಯ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. 'ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಮೊಟಕುಗೊಳಿಸುತ್ತಿರುವುದಾಗಿ' ಕುಸ್ತಿಪಟು ಬಜರಂಗ್ ಪುನಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜಂತರ್​ ಮಂತರ್​ನಲ್ಲಿ ಬುಧವಾರದಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರು.

ಕುಸ್ತಿಪಟುಗಳಾದ ಭಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ರವಿ ದಹಿಯಾ, ದೀಪಕ್ ಪುನಿಯಾ ಸೇರಿದಂತೆ ಇತರರು ನಿನ್ನೆ ಸಂಜೆ 7 ಗಂಟೆಗೆ ಕ್ರೀಡಾ ಸಚಿವರ ನಿವಾಸದಲ್ಲಿ ಸಭೆ ನಡೆಸಿ, ಸತತ ಐದು ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿಸಿದರು. "ನಮ್ಮ ಕ್ರೀಡಾ ಸಚಿವರಿಂದ ಭರವಸೆ ಪಡೆದ ನಂತರ ನಾವು ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ" ಎಂದು ಪುನಿಯಾ ಹೇಳಿದ್ದಾರೆ.

'ತಮ್ಮ ಸಚಿವಾಲಯವು ಕುಸ್ತಿಪಟುಗಳ ಕುಂದುಕೊರತೆಗಳನ್ನು ಆಲಿಸಿದೆ. ಅದರಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸಲಾಗುವುದು. ನಾವು ಇತ್ತೀಚಿನ ದಿನಗಳಲ್ಲಿ ಅನೇಕ ಕ್ರೀಡಾ ಒಕ್ಕೂಟಗಳಲ್ಲಿ ಬದಲಾವಣೆಗಳನ್ನು ನೋಡಿದ್ದೇವೆ ಮತ್ತು ಇದನ್ನು ಪರಿಶೀಲಿಸಲಾಗುವುದು. ಕ್ರೀಡೆಯನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲ ಆಟಗಾರರು ನಮ್ಮ ಮನವಿಗೆ ಬೆಲೆ ಕೊಟ್ಟು ಪ್ರತಿಭಟನೆ ಕೈಬಿಟ್ಟ ಕಾರಣ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕುಸ್ತಿಪಟುಗಳು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಲಾಗುವುದು. ನಾವು ಮೇಲುಸ್ತುವಾರಿ ಸಮಿತಿಯನ್ನು ರಚಿಸುತ್ತೇವೆ ಮತ್ತು ಸದಸ್ಯರ ಹೆಸರನ್ನು ನಾಳೆ ಪ್ರಕಟಿಸುತ್ತೇವೆ' ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ: WFI ಅಧ್ಯಕ್ಷರ ವಿರುದ್ಧ ಭಾರತೀಯ ಒಲಂಪಿಕ್​ ಅಸೋಸಿಯೇಷನ್​ ಅಧ್ಯಕ್ಷೆ ಪಿಟಿ ಉಷಾಗೆ ಪತ್ರ ಬರೆದ ಕುಸ್ತಿಪಟುಗಳು

'ಡಬ್ಲ್ಯುಎಫ್‌ಐ ಮತ್ತು ಅದರ ಅಧ್ಯಕ್ಷರ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳ ಬಗ್ಗೆ ಮೇಲ್ವಿಚಾರಣಾ ಸಮಿತಿಯು ನಿಷ್ಪಕ್ಷಪಾತ ತನಿಖೆ ನಡೆಸುತ್ತದೆ. ಸಮಿತಿಯು ಲೈಂಗಿಕ ಕಿರುಕುಳ ಮತ್ತು ಹಣಕಾಸಿನ ಅಕ್ರಮಗಳು ಸೇರಿದಂತೆ ಎಲ್ಲ ಗಂಭೀರ ಆರೋಪಗಳನ್ನು ತನಿಖೆ ಮಾಡಿ, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಮೇಲುಸ್ತುವಾರಿ ಸಮಿತಿಯು ಸಮಸ್ಯೆಯನ್ನು ತನಿಖೆ ಮಾಡುವವರೆಗೆ ಡಬ್ಲ್ಯುಎಫ್‌ಐ ಮುಖ್ಯಸ್ಥರು ತಮ್ಮ ಸ್ಥಾನದಿಂದ ಹಿಂದೆ ಸರಿಯುತ್ತಾರೆ' ಎಂದು ಠಾಕೂರ್ ಭರವಸೆ ನೀಡಿದರು.

"ಸಮಿತಿಯು ಫೆಡರೇಶನ್‌ನ ದೈನಂದಿನ ವ್ಯವಹಾರಗಳನ್ನು ಸಹ ಪರಿಶೀಲಿಸುತ್ತದೆ. ಮತ್ತು ತನಿಖೆ ನಡೆಯುವವರೆಗೆ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ತಮ್ಮ ಸ್ಥಾನದಿಂದ ದೂರವಿದ್ದು, ಅವರೂ ಸಹ ತನಿಖೆಗೆ ಸಹಕರಿಸುತ್ತಾರೆ ಎಂದು ಕ್ರೀಡಾ ಸಚಿವರು ಖಚಿತಪಡಿಸಿದ್ದಾರೆ. ಜೊತೆಗೆ ಸಮಿತಿಯು ತನ್ನ ತನಿಖೆಯನ್ನು ಒಂದು ತಿಂಗಳ ಅವಧಿಯಲ್ಲಿ ಮುಕ್ತಾಯಗೊಳಿಸುವುದಾಗಿ ತಿಳಿಸಿದೆ ಎಂದು ಬಜರಂಗ್ ಪುನಿಯಾ" ಹೇಳಿದರು.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಕುಸ್ತಿ ಫೆಡರೇಶನ್ ಅಧ್ಯಕ್ಷರ ರಾಜೀನಾಮೆ ಸಾಧ್ಯತೆ?

ಬ್ರಿಜ್‌ ಭೂಷಣ್‌ ಸಿಂಗ್‌ ಯಾರು?: ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಸಂಸದರಾಗಿರುವ ಬ್ರಿಜ್ ಭೂಷಣ್ 2011 ರಿಂದ ಡಬ್ಲ್ಯುಎಫ್‌ಐ ಮುಖ್ಯಸ್ಥ ಹುದ್ದೆಯನ್ನು ಹೊಂದಿದ್ದಾರೆ. ವಿದ್ಯಾರ್ಥಿ ದಿನಗಳಲ್ಲಿ ಸ್ವತಃ ಕುಸ್ತಿಪಟುವಾಗಿದ್ದ ಅವರು ಗೊಂಡ್ ವಲಯದ ಠಾಕೂರ್ ಸಮುದಾಯಕ್ಕೆ ಸೇರಿದವರು. ಅಯೋಧ್ಯೆ ರಾಮ ಮಂದಿರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಇವರು ಪ್ರಖ್ಯಾತಿ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.