ETV Bharat / bharat

ಹಾವು ಕಚ್ಚಿದರೆ ಮೊದಲು ಏನು ಮಾಡಬೇಕು? ಚಿಕಿತ್ಸೆ ಹೇಗೆ? ಸಂಪೂರ್ಣ ಮಾಹಿತಿಯ ಮೊಬೈಲ್ ಆ್ಯಪ್

author img

By ETV Bharat Karnataka Team

Published : Nov 3, 2023, 9:23 AM IST

mobile app for snakebite victims
ಹಾವು ಕಡಿತಕ್ಕೆ ಒಳಗಾದವರಿಗೆ ನೆರವಾಗಲಿದೆ ನೂತನ ಮೊಬೈಲ್ ಆ್ಯಪ್

Snakebite prevention and rescue App: ಹಾವು ಕಡಿತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ನೆರವಾಗುವ ಮಾಹಿತಿಯ ಮೊಬೈಲ್ ಆ್ಯಪ್ ಅನ್ನು ಪಶ್ಚಿಮ ಬಂಗಾಳ ಸರ್ಕಾರ ಪರಿಚಯಿಸಿದೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಹಾವು ಕಚ್ಚಿದರೆ ಏನು ಮಾಡಬೇಕೆಂದು ತಕ್ಷಣಕ್ಕೆ ಹಲವರಿಗೆ ತಿಳಿಯುವುದಿಲ್ಲ. ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ಹಾವು ಕಚ್ಚಿ 360 ಜನರು ಸಾವನ್ನಪ್ಪಿದ್ದರು ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳಿಂದ ತಿಳಿಯುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು ಇದೀಗ ಸರ್ಕಾರ ವಿನೂತನ ತಂತ್ರ ಅನುಸರಿಸಿದೆ. ಹಾವು ಕಡಿತಕ್ಕೆ ಬಲಿಯಾದ ಜನರಿಗೆ ಸುಲಭವಾಗಿ ನೆರವಿಗೆ ಧಾವಿಸುವ ಸಲುವಾಗಿ ಮೊಬೈಲ್ ಫೋನ್ ಅಪ್ಲಿಕೇಶನ್ ಪರಿಚಯಿಸಿದೆ. ಈ ಆ್ಯಪ್​ನ ಮೂಲಕ ಸಂತ್ರಸ್ತರು ತಮ್ಮ ಜೀವ ಉಳಿಸಲು ಪೂರಕವಾದ ನೆರವು ಪಡೆದುಕೊಳ್ಳಬಹುದಾಗಿದೆ.

ಹಾವು ಕಡಿತದ ಬಗ್ಗೆ ಜನರು ಇಂದಿಗೂ ಅನೇಕ ರೀತಿಯ ಮೂಢನಂಬಿಕೆಗಳನ್ನು ಹೊಂದಿದ್ದಾರೆ. ಇದರಿಂದ ಸಾಕಷ್ಟು ಸಮಯವೂ ವ್ಯರ್ಥವಾಗುತ್ತಿದೆ. ಜೀವಕ್ಕೂ ಹಾನಿ ಉಂಟಾಗುತ್ತದೆ. ಸರ್ಕಾರದ ಹೊಸ ಆಲೋಚನೆಯಿಂದ ಯಾವುದೇ ಸಮಯ ವ್ಯರ್ಥವಾಗದು. ಹಾವು ಕಡಿತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಲು ಈ ಅಪ್ಲಿಕೇಶನ್ ಎಲ್ಲಾ ರೀತಿ ಅಗತ್ಯ ಮಾಹಿತಿ ನೀಡುತ್ತದೆ.

ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಆ್ಯಪ್​ ಲಭ್ಯ: ನಿಮ್ಮ ಫೋನ್‌ನಲ್ಲಿರುವ ಗೂಗಲ್​ ಪ್ಲೇ ಸ್ಟೋರ್​ನಿಂದ Snakebite Prevention and Rescue ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಹಾವು ಕಡಿತಕ್ಕೆ ಒಳಗಾದ ನಂತರ ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಆ್ಯಪ್ ತಿಳಿಸುತ್ತದೆ. ಪ್ರಥಮ ಚಿಕಿತ್ಸೆ ಎಂದರೇನು? ಹತ್ತಿರದ ಆಸ್ಪತ್ರೆಗೆ ಹೋದರೆ ಆ್ಯಂಟಿವೆನಮ್ ಇಂಜೆಕ್ಷನ್ ಪಡೆಯುವ ಕುರಿತು ಮಾಹಿತಿ ಒದಗಿಸುತ್ತದೆ.

ವೈದ್ಯರ ಪ್ರಕಾರ, ಹಾವು ಕಚ್ಚಿದ ನಂತರ ತಪ್ಪು ಚಿಕಿತ್ಸಾ ವಿಧಾನಗಳಿಂದ ಅನೇಕರು ಸಾವನ್ನಪ್ಪುತ್ತಾರೆ. ಗ್ರಾಮೀಣ ಭಾಗ ಜನರು ಮೂಢನಂಬಿಕೆಗಳನ್ನು ಹೊಂದಿದ್ದಾರೆ. ನಗರ ಪ್ರದೇಶಗಳಲ್ಲಿಯೂ ಸರಿಯಾದ ಚಿಕಿತ್ಸೆಗಾಗಿ ಎಲ್ಲಿಗೆ ಹೋಗಬೇಕೆಂದು ಅನೇಕರಿಗೆ ತಿಳಿದಿಲ್ಲ. ಹಾಗಾಗಿ ಆ್ಯಪ್ ರಾಜ್ಯದ ಜನರಿಗೆ ಸಾಕಷ್ಟು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಮೊಬೈಲ್ ಅಪ್ಲಿಕೇಶನ್​ ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸೂಚನೆಗಳನ್ನು ನೀಡುತ್ತದೆ. ಹಾವಿನ ಚಿತ್ರ ತೆಗೆದು ಆ್ಯಪ್​ಗೆ ಅಪ್ಲೋಡ್​ ಮಾಡಿದರೆ, ಅದರ ಜಾತಿ ಮತ್ತು ಅದು ಕಚ್ಚಿದರೆ ಏನೆಲ್ಲಾ ಆಗಬಹುದು ಎಂಬುದನ್ನು ಇದು ಹೇಳುತ್ತದೆ.

ತ್ವರಿತ ಚಿಕಿತ್ಸೆಗೆ ಅನುಕೂಲ: ಹಾವು ರಕ್ಷಿಸುವವರ ಅಗತ್ಯವಿದ್ದರೆ ಅವರ ಸಂಪರ್ಕ ಸಂಖ್ಯೆಗಳೂ ಸಹ ಅಪ್ಲಿಕೇಶನ್‌ನಲ್ಲಿ​ ಲಭ್ಯವಿದೆ. ತ್ವರಿತವಾಗಿ ಚಿಕಿತ್ಸೆ ಪಡೆಯಲು ಎಲ್ಲಿಗೆ ಹೋಗಬೇಕು ಎಂಬುದರ ಕುರಿತು ಜನರಿಗೆ ಅರಿವು ಮೂಡಿಸುತ್ತದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಈಟಿವಿ ಭಾರತ್‌ಗೆ ತಿಳಿಸಿದರು.

ಈ ಸಂಸ್ಥೆಯ ಪ್ರಾದೇಶಿಕ ಸಂಯೋಜಕ ಸ್ನೇಹಂದು ಕೋನಾರ್ ಮಾತನಾಡಿ, "ಹೊಸ ಆ್ಯಪ್ ರಾಜ್ಯ ಸರ್ಕಾರದ ಒಡೆತನದಲ್ಲಿದೆ. ಪ್ರಚಾರದ ಕೊರತೆಯಿಂದ ಇನ್ನೂ ಅನೇಕರಿಗೆ ತಿಳಿದಿಲ್ಲ. ಹಾಗಾಗಿ ಪ್ರಚಾರ ಮಾಡಲು ಮುಂದಾಗಿದ್ದೇವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಈ ಅಪ್ಲಿಕೇಶನ್ ಬಗ್ಗೆ ತಿಳಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಹೇಳಿದರು.

ಇದನ್ನೂ ಓದಿ: ರೋಗಿಯನ್ನು ಜೋಳಿಗೆಯಲ್ಲಿ ಕಟ್ಟಿ ಆಸ್ಪತ್ರೆಗೆ ಒಯ್ಯುವ ಗ್ರಾಮಸ್ಥರು.. ಇದು ಹೀನಾರಿ ಗ್ರಾಮದ ನರಕಯಾತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.