ETV Bharat / bharat

ಪೂಂಚ್​ನಲ್ಲಿ ಭದ್ರತಾ ಪಡೆ ಭರ್ಜರಿ ಬೇಟೆ.. ಮತ್ತಿಬ್ಬರು ಉಗ್ರರು ಹತ

author img

By ETV Bharat Karnataka Team

Published : Sep 7, 2023, 12:59 PM IST

ಭದ್ರತಾಪಡೆ ಗುಂಡೇಟಿಗೆ ಮತ್ತಿಬ್ಬರು ಉಗ್ರರು ಹತ
ಭದ್ರತಾಪಡೆ ಗುಂಡೇಟಿಗೆ ಮತ್ತಿಬ್ಬರು ಉಗ್ರರು ಹತ

ಜಮ್ಮು ಕಾಶ್ಮೀರದ ಪೂಂಚ್​ನಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ನುಸುಳುಕೋರರನ್ನು ಭಾರತೀಯ ಭದ್ರತಾ ಪಡೆ ಬೇಟೆಯಾಡಿದೆ.

ಪೂಂಚ್ (ಜಮ್ಮು ಕಾಶ್ಮೀರ್)​: ಗಡಿ ಪ್ರದೇಶದಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ನುಸುಳುಕೋರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ದೇಗ್ವಾರ್ ಟೆರ್ವಾನ್‌ನ ಪ್ರದೇಶದ ಗಡಿ ನಿಯಂತ್ರಣ ರೇಖೆ ಹತ್ತಿರ ಮಂಗಳವಾರ ಮತ್ತು ಬುಧವಾರದ ಮಧ್ಯರಾತ್ರಿ ಭದ್ರತಾ ಪಡೆ ಇಬ್ಬರು ಭಯೋತ್ಪಾದಕರನ್ನು ಬೇಟೆಯಾಡಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂಂಚ್ ಜಿಲ್ಲೆಯ ಮಂಡಿ ಉಪ ವಲಯದಲ್ಲಿ ಸೆ. 5 ಹಾಗು 6 ರಂದು ರಾತ್ರಿ ಇಬ್ಬರು ಉಗ್ರರು ನಿಯಂತ್ರಣ ರೇಖೆಯನ್ನು ದಾಟಿ ಬರುತ್ತಿರುವುದನ್ನು ಕಂಡುಕೊಳ್ಳಲಾಗಿತ್ತು. ಭಯೋತ್ಪಾದಕರನ್ನು ತಡೆಯಲು ಕೂಡಲೇ ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿದರು ಎಂದು ರಕ್ಷಣಾ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ತಿಳಿಸಿದ್ದಾರೆ.

ಭಯೋತ್ಪಾದಕರು ದಟ್ಟ ಅರಣ್ಯ, ಇಳಿಜಾರು ಇಲ್ಲಿ ಸಾಗುವ ಮೂಲಕ ಭದ್ರತಾ ಪಡೆ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದರು. ಭದ್ರತಾ ಪಡೆ, ಪೊಲೀಸ್​ ಮತ್ತು ಉಗ್ರರ ಮಧ್ಯೆ ಗುಂಡಿನ ಚಕಮಕಿ ಪ್ರಾರಂಭವಾಯಿತು. ಈ ದಾಳಿ ಪ್ರತಿ ದಾಳಿಯಲ್ಲಿ ಭಾರತೀಯ ಸೇನೆ ಇಬ್ಬರು ಭಯೋತ್ಪಾದಕರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದೆ.

ಇದರಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದು ಓರ್ವನ ಮೃತದೇಹ ಸಿಕ್ಕಿದೆ, ಇನ್ನೋರ್ವನ ಮೃತದೇಹಕ್ಕಾಗಿ ಶೋಧ ಕಾರ್ಯಚರಣೆ ನಡೆಯುತ್ತಿದೆ. ಈ ಹುಡುಕಾಟದಲ್ಲಿ ಆಕ್ರಮಣಕಾರಿ ರೈಫಲ್ ಸೇರಿದಂತೆ ಉಗ್ರರ ಶಸ್ತಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ.

ಆಗಸ್ಟ್​ 21 ರಂದು ಇಬ್ಬರು ಉಗ್ರರು ಹತ: ಪೂಂಚ್​ ಜಿಲ್ಲೆಯ ಬಾಲಾಕೋಟ್ ಸೆಕ್ಟರ್‌ನ ಗಡಿ ರೇಖೆಯಲ್ಲಿ ಆಗಸ್ಟ್​ 21 ರಂದು ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ನುಸುಳುಕೋರರಿಂದ ಭದ್ರತಾ ಪಡೆಗಳು ಒಂದು ಎಕೆ 47, ಎರಡು ಮ್ಯಾಗಜೀನ್‌ಗಳು, 30 ರೌಂಡ್‌ಗಳು, ಎರಡು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಪಾಕಿಸ್ತಾನ ಮೂಲದ ಔಷಧ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತ್ತು. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹತ್ಯೆಗೈದಿತ್ತು.

ಬಾಲಾಕೋಟ್​ ವಲಯದಿಂದ ಭಯೋತ್ಪಾದಕರು ಒಳ ನುಸುಳಲು ಗಡಿ ಪ್ರದೇಶದ ಬಳಿ ತಯಾರಾಗುತ್ತಿರುವುದನ್ನು ಗಮನಿಸಿ ಅಲ್ಲಿನ ಪೊಲೀಸರು ಸೇನೆಗೆ ಮಾಹಿತಿ ನೀಡಿತ್ತು. ಖಚಿತ ಮಾಹಿತಿಯ ಆಧಾರದ ಮೇಲೆ ಉಗ್ರರ ಮೇಲೆ ಸೇನೆ ಗುರಿ ಇಟ್ಟಿತ್ತು. ಹಮೀರ್‌ಪುರ ಪ್ರದೇಶದಲ್ಲಿ ಈ ಇಬ್ಬರು ಭಯೋತ್ಪಾದಕರು ಒಳ ನುಸುಳಲು ಕಾದು ಕುಳಿತಿದ್ದರು.

ಪ್ರತಿಕೂಲ ಹವಾಮಾನಕ್ಕಾಗಿ ಇವರು ಎದುರು ನೋಡುತ್ತಿದ್ದರು. ಇದನ್ನು ಗಮನಿಸಿದ ಸೇನೆ ಇವರ ಮೇಲೆ ದಾಳಿ ಮಾಡಿ ನುಸುಳುವಿಕೆಯನ್ನು ವಿಫಲಗೊಳಿಸಿದ್ದರು. ಭದ್ರತಾ ಪಡೆ ಗುಂಡಿನ ದಾಳಿ ವೇಳೆ ಇಬ್ಬರು ಹತರಾದರೆ, ಇನ್ನಿಬ್ಬರು ಪ್ರತಿ ದಾಳಿ ನಡೆಸಲು ಸಾಧ್ಯವಾಗದೇ ಪರಾರಿಯಾಗಿದ್ದರು. ಮೊದಲು ಸೇನೆಯ ದಾಳಿಯಲ್ಲಿ ಒಬ್ಬ ಉಗ್ರ ಸ್ಥಳದಲ್ಲೇ ಹತನಾದರೆ, ಇನ್ನೊಬ್ಬ ಎಲ್‌ಒಸಿಯಿಂದ ಓಡಿ ಹೋಗುವ ಯತ್ನ ಮಾಡಿದ್ದ. ಆದರೆ ಸೇನೆಯ ಗುಂಡಿನಿಂದ ತಪ್ಪಿಸಿಕೊಳ್ಳಲಾಗದೇ, ಮೃತಪಟ್ಟಿದ್ದಾನೆ ಎಂದು ಸೇನಾ ಮೂಲಗಳು ಖಚಿತಪಡಿಸಿದ್ದವು.

ಇದನ್ನೂ ಓದಿ: ಗಡಿ ದಾಟುತ್ತಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.