ಕರೀಂನಗರ(ತೆಲಂಗಾಣ): ತಮ್ಮ ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ಮುಪ್ಪಿನ ಕಾಲಕ್ಕೆ ತಮಗೆ ಆಸರೆಯಾಗುತ್ತಾರೆಂದು ಬಹುತೇಕ ಎಲ್ಲ ತಂದೆ - ತಾಯಿ ಬೆಟ್ಟದಷ್ಟು ಆಸೆ ಇಟ್ಟುಕೊಡಿರುತ್ತಾರೆ. ಆದರೆ, ತೆಲಂಗಾಣದ ಮೂವರು ಸಹೋದರರು ಪೋಷಕರ ಆಸೆ ಹುಸಿ ಮಾಡಿದ್ದಾರೆ. ತಾವೇ ಹೊತ್ತು ಹೆತ್ತ ತಂದೆ, ತಾಯಿಯನ್ನು ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ನಡೆದು ಕೊಂಡಿದ್ದಾರೆ.
ತೆಲಂಗಾಣದ ಕರೀಂನಗರದ ಗ್ರಾಮಾಂತರ ಚೆರ್ಲಬೂತ್ಕೂರು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಐಲಯ್ಯ ಮತ್ತು ರಾವಮ್ಮ ವೃದ್ಧ ದಂಪತಿ ಇದೀಗ ಬೀದಿಗೆ ಬಿದ್ದಿದ್ದು, ಸರ್ಕಾರಿ ಕಟ್ಟಡವೊಂದರಲ್ಲಿ ಜೀವನ ನಡೆಸುವಂತಾಗಿದೆ.
ಏನಿದು ಪ್ರಕರಣ?: ಐಲಯ್ಯ - ರಾವಮ್ಮ ದಂಪತಿಗೆ ಈಗಾಗಲೇ 90 ವರ್ಷ ವಯಸ್ಸು. ಇವರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಐಲಯ್ಯ ತಮ್ಮ ಹೆಸರಿನಲ್ಲಿದ್ದ ಆರು ಎಕರೆ ಜಮೀನನ್ನ ಮೂವರು ಪುತ್ರರಿಗೆ ಹಂಚಿಕೆ ಮಾಡಿದ್ದಾರೆ. ಇದರ ಜೊತೆಗೆ ಮೂರನೇ ಮಗನಿಗೆ ಮನೆ ಸಹ ಕೊಟ್ಟಿದ್ದಾರೆ. ಇದರ ಹೊರತಾಗಿ ಕೂಡ ಹೊಸ ಮನೆ ಕಟ್ಟಿಸಿಕೊಂಡಿರುವ ಮೂರನೇ ಪುತ್ರ, ಪೋಷಕರಿಗೆ ಸಣ್ಣದಾದ ಶೆಡ್ ನಿರ್ಮಿಸಿದ್ದಾನೆ.
ಇದರಲ್ಲಿ ವಾಸ ಮಾಡುವಂತೆ ಹೆತ್ತವರಿಗೆ ಸೂಚನೆ ನೀಡಿದ್ದಾನೆ. ಕೆಲ ದಿನಗಳ ನಂತರ ಅಲ್ಲಿಂದ ಅವರನ್ನ ಹೊರಹಾಕಿದ್ದಾನೆ. ಹೀಗಾಗಿ, ವೃದ್ಧ ದಂಪತಿಗಳು ಗ್ರಾಮದಲ್ಲಿ ಮನೆವೊಂದನ್ನ ಬಾಡಿಗೆ ಪಡೆದು, ತಮಗೆ ಬರುತ್ತಿದ್ದ ವೃದ್ಧಾಪ್ಯ ವೇತನದಲ್ಲಿ ಜೀವನ ನಡೆಸಲು ಶುರು ಮಾಡಿದ್ದಾರೆ.
ಇದನ್ನೂ ಓದಿ: ಬಿಹಾರದ ವೈಶಾಲಿಯಲ್ಲಿದೆ 1800 ವರ್ಷಗಳ ಹಳೆಯ ಶೌಚಾಲಯ!
ಕಳೆದ ಮೂರು ತಿಂಗಳ ಹಿಂದೆ ಗ್ರಾಮದ ಹಿರಿಯರು ಮಾತುಕತೆ ನಡೆಸಿ, ಮೂವರು ಪುತ್ರರು ವೃದ್ಧ ಪೋಷಕರನ್ನ ತಿಂಗಳ ಕಾಲ ನೋಡಿಕೊಳ್ಳುವ ಒಪ್ಪಂದಕ್ಕೆ ಬಂದಿದ್ದಾರೆ. ಅದರಂತೆ ಆರಂಭದಲ್ಲಿ ಇಬ್ಬರು ಗಂಡು ಮಕ್ಕಳೊಂದಿಗೆ ತಿಂಗಳ ಕಾಲ ಕಳೆದಿದ್ದಾರೆ. ಈ ವೇಳೆ, ಮೂರನೇ ಮಗ ತಂದೆ-ತಾಯಿಯನ್ನ ಕರೆದುಕೊಂಡು ಹೋಗಿಲ್ಲ. ಹೀಗಾಗಿ, ಹಿರಿಯ ಮಗ ಅವರ ಸಾಮಗ್ರಿಗಳನ್ನ ಮನೆಯಿಂದ ಹೊರಗೆ ಎಸೆದಿದ್ದಾನೆ. ಬೇರೆ ದಾರಿ ಇಲ್ಲದೇ ವೃದ್ಧ ದಂಪತಿ ಕಳೆದ 20 ದಿನಗಳಿಂದ ಸರ್ಕಾರಿ ಕಟ್ಟಡವೊಂದರಲ್ಲಿ ವಾಸ ಮಾಡಲು ಶುರು ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವೃದ್ಧ ಪೋಷಕರ ಹೆಣ್ಣು ಮಕ್ಕಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಪ್ರಕರಣ ಸಚಿವ ಗಂಗೂಲ ಕಮಲಾಕರ್ ಅವರ ಗಮನಕ್ಕೆ ಬರುತ್ತಿದ್ದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ಗೆ ಸೂಚನೆ ನೀಡಿದ್ದಾರೆ.