ETV Bharat / bharat

ನಕಲಿ ಛಾಪಾ ಕಾಗದ ಹಗರಣ: ವೆಬ್ ಸರಣಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ತೆಲಗಿ ಪುತ್ರಿ,  ಇಂದು ವಿಚಾರಣೆ ಸಾಧ್ಯತೆ

author img

By

Published : Dec 22, 2022, 9:53 AM IST

Abdul Karim Telgi
ಅಬ್ದುಲ್ ಕರೀಂ ತೆಲಗಿ

ನಕಲಿ ಛಾಪಾ ಕಾಗದ ಹಗರಣದ ಆರೋಪಿ ಅಬ್ದುಲ್ ಕರೀಂ ತೆಲಗಿ ಮಗಳು ಸನಾ ಇರ್ಫಾನ್ ತಾಳಿಕೋಟಿ ಅವರು ವೆಬ್ ಸರಣಿಯ ವಿರುದ್ಧ ಮುಂಬೈ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಮುಂಬೈ: ನಕಲಿ ಛಾಪಾ ಪೇಪರ್ ಹಗರಣದ ಆರೋಪಿ ಅಬ್ದುಲ್ ಕರೀಂ ತೆಲಗಿ ಅವರ ಪುತ್ರಿ ಸನಾ ಇರ್ಫಾನ್ ತಾಳಿಕೋಟಿ ಅವರು ‘Scam 2003 - The curious case of Abdul Karim Lala Telgi’ ಎಂಬ ತಮ್ಮ ಜೀವನ ಆಧಾರಿತ ವೆಬ್ ಸರಣಿ ತಯಾರಕರ ವಿರುದ್ಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

2003 ರ ಸ್ಟಾಂಪ್ ಪೇಪರ್ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾಗೆ ಸಂಬಂಧಿಸಿದ ವೆಬ್ ಸರಣಿ ಮಾಡುವ ಮುನ್ನ ನಿರ್ಮಾಪಕರು ಕುಟುಂಬದ ಒಪ್ಪಿಗೆ ಪಡೆದಿಲ್ಲ ಎಂದು ಆರೋಪಿಸಿ, ಅದರ ಬಿಡುಗಡೆಗೆ ತಡೆಯಾಜ್ಞೆ ಕೋರಿ ಸನಾ ಇರ್ಫಾನ್ ತಾಳಿಕೋಟಿ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಹನ್ಸಲ್ ಮೆಹ್ತಾ, ಜನರಲ್ ಮ್ಯಾನೇಜರ್ ಪ್ರಸೂನ್ ಗಾರ್ಗ್ ಮತ್ತು ಸೋನಿ ಲಿವ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಇಂದು ಗುರುವಾರ ವಿಚಾರಣೆ ನಡೆಯಲಿದೆ.

ವಕೀಲ ಮಾಧವ್ ಥೋರಟ್ ಅವರ ಮೂಲಕ ಅರ್ಜಿ ಸಲ್ಲಿಸಿ ಮೊಕದ್ದಮೆ ಹೂಡಿದ ಸನಾ ಇರ್ಫಾನ್, ಈ ವೆಬ್ ಸರಣಿ ಪುಸ್ತಕ ಆಧರಿಸಿದ್ದು, ವಾಸ್ತವಿಕ ವ್ಯತ್ಯಾಸ ಹೊಂದಿದೆ. ಜೊತೆಗೆ ಕುಟುಂಬದ ಗೌಪ್ಯತೆ, ಘನತೆ ಮತ್ತು ಸ್ವಾಭಿಮಾನದ ಹಕ್ಕು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದಾರೆ.

ಕಾದಂಬರಿಯಲ್ಲಿ ಮೂಡಿ ಬಂದಿರುವ ನಮ್ಮ ತಂದೆಯ ಪಾತ್ರದ ಚಿತ್ರಣ ಸುಳ್ಳು, ಆಧಾರರಹಿತ, ಅವಹೇಳನಕಾರಿ, ಅಹಿತಕರ ಮತ್ತು ಹೆಚ್ಚು ಮಾನಹಾನಿಕರವಾಗಿದೆ. ನಮ್ಮ ಕುಟುಂಬಕ್ಕೆ ಮತ್ತು ಮೃತ ತಂದೆಗೆ ಮಾನಹಾನಿ ಮಾಡುವ ಏಕೈಕ ಉದ್ದೇಶದಿಂದ ವೆಬ್ ಸರಣಿ ಚಿತ್ರೀಕರಿಸಲಾಗಿದೆ. ಇದರಿಂದಾಗಿ ನಮ್ಮ ಕುಟುಂಬದ ಘನತೆಗೆ ತುಂಬಲಾರದ ನಷ್ಟ ಉಂಟಾಗಲಿದೆ. ಜೊತೆಗೆ ನನ್ನ ಅಪ್ರಾಪ್ತ ಮಕ್ಕಳ ಮೇಲೂ ಹೆಚ್ಚು ಹಾನಿ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.

ನನ್ನ ತಂದೆ ಅಬ್ದುಲ್ ಕರೀಂ ತೆಲಗಿ ಅವರು ಹಲವಾರು ಸಾಮಾಜಿಕ ಸೇವೆಗಾಗಿ ಹೆಚ್ಚು ಸಮಯ ಮತ್ತು ಹಣವನ್ನು ವಿನಿಯೋಗಿಸಿದ್ದಾರೆ. ನೀರಿನ ಟ್ಯಾಂಕ್‌ಗಳು, ಬೋರ್‌ವೆಲ್‌ಗಳು, ದೇವಸ್ಥಾನಗಳು ಮತ್ತು ಮಸೀದಿಗಳ ನಿರ್ಮಾಣಕ್ಕೆ ಹಣ ಒದಗಿಸಿದ್ದಾರೆ. ಅವರು ಅನೇಕ ಬಡ ಮಕ್ಕಳಿಗೆ ಶಿಕ್ಷಣ ಒದಗಿಸಿದ್ದಾರೆ. ಹೀಗೆ ಮಾನಹಾನಿ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಕಲಿ ಛಾಪಾ ಕಾಗದ ಹಗರಣ ಮತ್ತೆ ಮುನ್ನೆಲೆಗೆ : Fake Stamp Paper ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್​

ಏನಿದು ನಕಲಿ ಛಾಪಾ ಕಾಗದ ಹಗರಣ?: 56 ವರ್ಷದ ತೆಲಗಿ ಅವರು ಸ್ಟಾಂಪ್ ಪೇಪರ್ ದಂಧೆಯಲ್ಲಿ ಅಕ್ರಮ ಎಸಗಿ ಬಹುಕೋಟಿ ರೂ. ವಂಚಿಸಿರುವುದು ಸಾಬೀತಾದ ಹಿನ್ನೆಲೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಅನುಭವಿಸುತ್ತಿರುವಾಗ ಅಕ್ಟೋಬರ್ 2017 ರಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಬಹು ಅಂಗ ವೈಫಲ್ಯದಿಂದ ನಿಧನರಾದರು.

1993 ಮತ್ತು 2002 ರ ನಡುವೆ ಅವರು ನಾಸಿಕ್‌ನ ಸರ್ಕಾರಿ ಭದ್ರತಾ ಮುದ್ರಣಾಲಯದ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ನಕಲಿ ಸ್ಟಾಂಪ್ ಪೇಪರ್‌ಗಳನ್ನು ಮುದ್ರಿಸಲು ಸರ್ಕಾರಿ ಹರಾಜಿನಲ್ಲಿ ಯಂತ್ರೋಪಕರಣಗಳನ್ನು ಖರೀದಿಸಿದರು ಎಂದು ಆರೋಪಿಸಲಾಗಿದೆ. ನಂತರ ಅವರು ಬ್ಯಾಂಕ್‌ಗಳು, ವಿಮೆ ಮತ್ತು ಸ್ಟಾಕ್ ಬ್ರೋಕರೇಜ್ ಸಂಸ್ಥೆಗಳಂತಹ ಬೃಹತ್ ಖರೀದಿದಾರರಿಗೆ ರಿಯಾಯಿತಿಯಲ್ಲಿ ಮಾರಾಟ ಮಾಡಿದ್ದರು.

ಬಳಿಕ ನವೆಂಬರ್ 22, 2001 ರಂದು ಪುಣೆಯ ಬಂಡ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ 500 ಕೋಟಿ ಮೌಲ್ಯದ ಸ್ಟ್ಯಾಂಪ್ ಪೇಪರ್‌ಗಳನ್ನು ವಶಪಡಿಸಿಕೊಂಡ ಬಳಿಕ ತೆಲಗಿ ಅವರನ್ನು ಬಂಧಿಸಲಾಯಿತು. ಈ ಕುರಿತು ತನಿಖೆ ನಡೆಸಿದ ಸಿಬಿಐ, ನಂತರ ಪ್ರಕರಣವನ್ನು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.