ETV Bharat / bharat

ತಮಿಳುನಾಡು ಸಚಿವ ಸೆಂಥಿಲ್​ ಬಾಲಾಜಿಗೆ ಮತ್ತೆ ಶಾಕ್​.. ಇಡಿ ಬಂಧನ ಊರ್ಜಿತಗೊಳಿಸಿದ ಸುಪ್ರೀಂಕೋರ್ಟ್​, ಆ. 12ರ ವರೆಗೆ ಕಸ್ಟಡಿಗೆ

author img

By

Published : Aug 7, 2023, 1:53 PM IST

ತಮಿಳುನಾಡು ಸಚಿವ ಸೆಂಥಿಲ್​ ಬಾಲಾಜಿಗೆ ಸುಪ್ರೀಂ ಕೋರ್ಟ್​ನಲ್ಲೂ ಹಿನ್ನಡೆ ಉಂಟಾಗಿದೆ. ಇಡಿ ಬಂಧನವನ್ನು ಪೀಠ ಊರ್ಜಿತಗೊಳಿಸಿ ವಿಚಾರಣೆಗಾಗಿ ಆಗಸ್ಟ್​ 12ರ ವರೆಗೆ ಕಸ್ಟಡಿಗೆ ನೀಡಿ ಆದೇಶಿಸಿದೆ.

ತಮಿಳುನಾಡು ಸಚಿವ ಸೆಂಥಿಲ್​ ಬಾಲಾಜಿಗೆ ಮತ್ತೆ ಶಾಕ್​
ತಮಿಳುನಾಡು ಸಚಿವ ಸೆಂಥಿಲ್​ ಬಾಲಾಜಿಗೆ ಮತ್ತೆ ಶಾಕ್​

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧನಕ್ಕೆ ಒಳಗಾಗಿರುವ ತಮಿಳುನಾಡು ಸಚಿವ ವಿ ಸೆಂಥಿಲ್​ ಬಾಲಾಜಿ ಅವರಿಗೆ ಸುಪ್ರೀಂಕೋರ್ಟ್​ನಲ್ಲೂ ಹಿನ್ನಡೆ ಉಂಟಾಗಿದೆ. ತನ್ನ ಬಂಧನಕ್ಕೆ ತಡೆ ನೀಡಬೇಕು ಎಂದು ಕೋರಿ ಸಚಿವ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡಿದೆ. ಅಲ್ಲದೇ, ಆಗಸ್ಟ್​ 12ರ ವರೆಗೆ ಜಾರಿ ನಿರ್ದೇಶನಾಲಯದ(ಇಡಿ) ವಶಕ್ಕೆ ನೀಡಿದೆ.

ಇದಕ್ಕೂ ಮೊದಲು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನನ್ನು ಇಡಿ ಬಂಧಿಸಿದ್ದನ್ನು ಪ್ರಶ್ನಿಸಿ ಬಾಲಾಜಿ ಮದ್ರಾಸ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್​, ಬಂಧನವನ್ನು ಎತ್ತಿಹಿಡಿದಿತ್ತು. ಈ ಆದೇಶದ ವಿರುದ್ಧ ಸೆಂಥಿಲ್​ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಅಲ್ಲೂ ಅವರಿಗೆ ಸೋಲಾಗಿದೆ.

ಬಾಲಾಜಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ಸಾಕ್ಷ್ಯಾಧಾರಗಳ ಸಂಗ್ರಹ ಮತ್ತು ದೃಢೀಕರಣಕ್ಕಾಗಿ ತನ್ನ ವಶದಲ್ಲಿರುವ ಆರೋಪಿ ಸಚಿವರನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರವನ್ನು ಜಾರಿ ನಿರ್ದೇಶನಾಲಯ ಹೊಂದಿದೆ ಎಂದು ಹೇಳಿತು.

ಸಚಿವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧನದಲ್ಲಿರುವ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಇಡಿಗೆ ಯಾವುದೇ ಹಕ್ಕು ಇಲ್ಲ ಎಂದು ವಾದಿಸಿದ್ದರು. ಆದರೆ, ಇದನ್ನು ಕೋರ್ಟ್​ ಪುರಸ್ಕರಿಸಲಿಲ್ಲ.

ಸಚಿವರ ಅರ್ಜಿಯು ಜುಲೈ 14 ಮತ್ತು ಜುಲೈ 4 ರ ಮದ್ರಾಸ್ ಹೈಕೋರ್ಟ್‌ನ ಆದೇಶಗಳ ಸಿಂಧುತ್ವವನ್ನು ಪ್ರಶ್ನಿಸಿತ್ತು. ಹೇಬಿಯಸ್ ಕಾರ್ಪಸ್ ಅರ್ಜಿಯೂ ಇದಾಗಿತ್ತು. ಆದರೆ, ವಿಚಾರಣೆಗೆ ಒಳಪಟ್ಟಿರುವ ಸಚಿವರ ಬಂಧನ ತಪ್ಪಲ್ಲ ಎಂದು ಈ ಅರ್ಜಿಯನ್ನು ಕೋರ್ಟ್​ ವಜಾಗೊಳಿಸಿತು. ಅಲ್ಲದೇ, ವಿಭಾಗೀಯ ಪೀಠದ ನ್ಯಾಯಾಧೀಶರು ಜುಲೈ 14 ರಂದು ಇಡಿ ಕಸ್ಟಡಿಗೆ ಸಚಿವರನ್ನು ನೀಡಿದ ಆದೇಶವನ್ನೂ ಒಪ್ಪಿಕೊಂಡಿತು.

ಪ್ರಕರಣದ ಹಿನ್ನೆಲೆ: ಮಾಜಿ ಸಿಎಂ ದಿ. ಜೆ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ನಗದು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಸೆಂಥಿಲ್ ಬಾಲಾಜಿ ಅವರನ್ನು ಜೂನ್ 14ರಂದು ಜಾರಿ ನಿರ್ದೇಶನಾಲಯ ಬಂಧಿಸಿದೆ. ಸದ್ಯ ಎಂಕೆ ಸ್ಟಾಲಿನ್​​ ನೇತೃತ್ವದ ಡಿಎಂಕೆ ಸರ್ಕಾರದಲ್ಲಿ ಸಚಿವರಾಗಿರುವ ಸೆಂಥಿಲ್ ಬಾಲಾಜಿ ಅವರದ್ದು ಅಕ್ರಮ ಬಂಧನ ಎಂದು ಆರೋಪಿಸಿ ಅವರ ಪತ್ನಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.