ETV Bharat / bharat

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಜೈಲಿಗೆ ಹೋಗುತ್ತಾರೆ : ಸುಬ್ರಮಣಿಯನ್​​ ಸ್ವಾಮಿ

author img

By

Published : Apr 23, 2023, 4:39 PM IST

subramanian-swamy-predicts-jail-for-sonia-rahul-in-national-herald-case
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಜೈಲಿಗೆ ಹೋಗುತ್ತಾರೆ : ಸುಬ್ರಮಣಿಯನ್​​ ಸ್ವಾಮಿ

ಬಿಹಾರದ ಪಾಟ್ನಾದಲ್ಲಿ ನಡೆದ ಕಾನೂನು ಸಮಾವೇಶದಲ್ಲಿ ರಾಹುಲ್​ ಮತ್ತು ಸೋನಿಯಾ ಗಾಂಧಿ ವಿರುದ್ಧ ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್​ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಪಾಟ್ನಾ (ಬಿಹಾರ): ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್​ ಸ್ವಾಮಿ ಕಾಂಗ್ರೆಸ್​​ ನಾಯಕರಾದ ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ಹರಿಹಾಯ್ದಿದ್ದಾರೆ. ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ಜೈಲಿಗೆ ಹೋಗುವುದು ಖಚಿತ ಎಂದು ಸುಬ್ರಮಣಿಯನ್​ ಸ್ವಾಮಿ ಹೇಳಿದ್ದಾರೆ.

ಶನಿವಾರ ಪಾಟ್ನಾದಲ್ಲಿ ನಡೆದ ಕಾನೂನು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ರಾಹುಲ್​ ಗಾಂಧಿ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದರೂ ಅವರನ್ನು ಜೈಲಿಗೆ ಕಳುಹಿಸಲಾಗಿಲ್ಲ. ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ಇಬ್ಬರೂ ಜಾಮೀನಿನ ಮೇಲೆ ಮಾತ್ರ ಹೊರಗಿದ್ದಾರೆ ಎಂದು ಹೇಳಿದರು.

ನಾನು ಕಾನೂನು ಪದವಿ ಪಡೆದ ನಂತರ ಭಾರತಕ್ಕೆ ಬಂದು ಕಾನೂನು ಕಲಿಸಲು ಬಂದಿದ್ದೆ. ಈ ಸಂದರ್ಭ ಇಂದಿರಾಗಾಂಧಿ ಅವರ ಹಲವು ಕಾನೂನುಗಳನ್ನು ನಾನು ವಿರೋಧಿಸಿದ್ದೆ. ಇದರಿಂದ ಆಕ್ರೋಶಗೊಂಡ ಇಂದಿರಾಗಾಂಧಿ ಅವರು ನನ್ನನ್ನು ಕೆಲಸದಿಂದ ವಜಾಗೊಳಿಸಿದ್ದರು. ಬಳಿಕ ಜನಸಂಘ ನನ್ನನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿತ್ತು. ಇಂದಿನ ಕಾಲದಲ್ಲಿ ಕಾನೂನು ಒಂದು ಅಸ್ತ್ರ. ಮುಂದಿನ 50 ವರ್ಷಗಳಲ್ಲಿ ಕಾನೂನು ವೃತ್ತಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲಿದೆ ಎಂದು ಸ್ವಾಮಿ ಅಭಿಪ್ರಾಯಪಟ್ಟರು. ಆದಿ ಶಂಕರಾಚಾರ್ಯರ ಕಾಲದಿಂದಲೂ ಬಿಹಾರದಲ್ಲಿ ಕ್ರಾಂತಿ ನಡೆಯುತ್ತಿದೆ. ಜಯಪ್ರಕಾಶ್​​​ ನಾರಾಯಣ ಕಾಲದಲ್ಲೂ ಬಿಹಾರದಿಂದಲೇ ಕ್ರಾಂತಿ ಆರಂಭಗೊಂಡಿತ್ತು ಎಂದು ಹೇಳಿದರು.

ಇದನ್ನೂ ಓದಿ : ಭಾರತೀಯ ರೂಪಾಯಿಯಲ್ಲಿಯೇ ಅಂತಾರಾಷ್ಟ್ರೀಯ ವ್ಯಾಪಾರ: ಸಚಿವ ಗೋಯಲ್

ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್ ಹತ್ಯೆ .. ಈ ಬಗ್ಗೆ ಮಾತನಾಡುವುದು ಸರಿಯಲ್ಲ : ದುಷ್ಕರ್ಮಿಗಳಿಂದ ಹತ್ಯೆಗೀಡಾದ ಗ್ಯಾಂಗ್​ ಸ್ಟರ್​ ಅತೀಕ್​ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್​​​ನನ್ನು ಬೆಂಬಲಿಸಿ ಪಾಟ್ನಾದಲ್ಲಿ ಘೋಷಣೆ ಕೂಗಿದ ಬಗ್ಗೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್​ ಸ್ವಾಮಿ, ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಅತೀಕ್​ ಅಹ್ಮದ್​ ಪರವಾಗಿ ಘೋಷಣೆ ಕೂಗುತ್ತಿರುವವರು ಈ ಮೂಲಕ ತಮ್ಮ ಮೇಲೆಯೇ ಹಾನಿ ಮಾಡಿಕೊಳ್ಳುತ್ತಿದ್ದಾರೆ ಎಂದರು. ಅತೀಕ್​ ಅಹ್ಮದ್​ ಯಾವ ರೀತಿಯ ವ್ಯಕ್ತಿಯಾಗಿದ್ದ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈತನ ಹತ್ಯೆ ಹೇಗಾಯಿತು ಎಂಬ ಬಗ್ಗೆ ಕೂಲಂಕಷ ತನಿಖೆ ಆಗಬೇಕು. ನ್ಯಾಯಾಲಯದಿಂದ ಈ ಬಗ್ಗೆ ತೀರ್ಪು ಬರುವವರೆಗೆ, ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ತಿಳಿಸಿದರು.

ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿರುವ ವಿಚಾರವಾಗಿ ಮಾತನಾಡಿದ ಅವರು, ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ರೂಪಿಸುವ ಅಗತ್ಯ ಇಲ್ಲ. ದೇಶದಲ್ಲಿ ಆರ್ಥಿಕ ಬೆಳವಣಿಗೆಯಾದರೆ ಜನಸಂಖ್ಯೆ ನಿಯಂತ್ರಣ ಮಾಡಬಹುದು. ಜನಸಂಖ್ಯೆಯನ್ನು ನಿಯಂತ್ರಿಸಲು ಶೇ. 10ರಷ್ಟು ಆರ್ಥಿಕ ಪ್ರಗತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು. ಮದ್ಯಪಾನ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿ, ಎಂದಿಗೂ ಮದ್ಯಪಾನ ಮಾಡಬಾರದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ : ಪಂಜಾಬ್‌ನ ಖಲಿಸ್ತಾನಿ ಬೆಂಬಲಿಗ ಅಮೃತ್‌ಪಾಲ್‌ ಸಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.