ETV Bharat / bharat

ಪಂಜಾಬ್‌ನ ಖಲಿಸ್ತಾನಿ ಬೆಂಬಲಿಗ ಅಮೃತ್‌ಪಾಲ್‌ ಸಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

author img

By

Published : Apr 23, 2023, 1:57 PM IST

ಆಕ್ರಮಣಕಾರಿ ಭಾಷಣ, ಘರ್ಷಣೆಯಲ್ಲಿ ತೊಡಗಿ ಸಮಾಜದಲ್ಲಿ ಅಶಾಂತಿ ಎಬ್ಬಿಸಿದ್ದ, ಖಲಿಸ್ತಾನಿ ಬೆಂಬಲಿಗ ಅಮೃತ್‌ಪಾಲ್‌ ಸಿಂಗ್ ಕೊನೆಗೂ ಪಂಜಾಬ್ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ. ಈತನ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Amritpal Singh
ಅಮೃತ್‌ಪಾಲ್‌ ಸಿಂಗ್

ಚಂಡೀಗಢ: ಕಾನೂನು ಬಾಹಿರ ಚಟುವಟಿಕೆ ಹಿನ್ನೆಲೆ ಖಲಿಸ್ತಾನಿ ಬೆಂಬಲಿಗ ಹಾಗೂ "ವಾರಿಸ್ ಪಂಜಾಬ್ ದೇ" ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್ ಸಿಂಗ್​ನನ್ನು ಪಂಜಾಬ್ ಪೊಲೀಸರು ಮೊಗಾದಲ್ಲಿ ಬಂಧಿಸಿದ್ದಾರೆ. ಸದ್ಯ ಆತನನ್ನು ಅಸ್ಸೋಂನ ದಿಬ್ರುಗಢ ಜೈಲಿಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಸ್ವಘೋಷಿತ ಮೂಲಭೂತವಾದಿ ಹಾಗೂ ಸಿಖ್ ಬೋಧಕ ಅಮೃತ್​ಪಾಲ್ ಸಿಂಗ್ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಸಮಾಜದಲ್ಲಿ ಅಶಾಂತಿ ಎಬ್ಬಿಸಲು ಪ್ರಯತ್ನಿಸಿದ್ದ ಆತನ ಸಹಚರರನ್ನು ಬಂಧಿಸಿ ಅಪಾರ ಪ್ರಮಾಣದಲ್ಲಿ ಶಸ್ತಾಸ್ತ್ರಗಳನ್ನು ವಶಪಡಿಕೊಳ್ಳಲಾಗಿತ್ತು.

ಪೊಲೀಸರ ಕಣ್ಣಿಗೆ ಮಣ್ಣೆರೆಚಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಖಲಿಸ್ತಾನಿ ಬೆಂಬಲಿಗ ಯೂಟ್ಯೂಬ್ ಲೈವ್ ಬಂದು ತಾನು ಪೊಲೀಸರಿಗೆ ಶರಣಾಗಲ್ಲ ಎಂದು ಹೇಳಿಕೊಂಡಿದ್ದ. ಕಳೆದ ಕೆಲವು ದಿನಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಆತ 2 ಬಾರಿ ಯೂಟ್ಯೂಬ್‌ ವಿಡಿಯೋ ಬಿಡುಗಡೆ ಮಾಡಿದ್ದ. ವೇಷ ಮರೆಸಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಅಲೆದಾಡುತ್ತಿದ್ದ ಅಮೃತ್‌ಪಾಲ್‌ ಸಿಂಗ್, ಪಂಜಾಬ್‌ನ ಗೋಪ್ಯ ಸ್ಥಳದಲ್ಲಿ ಅಡಗಿರುವುದು ಗೊತ್ತಾಗಿತ್ತು. ಮೊದಲ ವಿಡಿಯೋದಲ್ಲಿ ಪಂಜಾಬ್‌ಗೆ ಮರಳಿರುವುದರ ಬಗ್ಗೆ ಆತ ಮಾಹಿತಿ ನೀಡಿದ್ದ.

ಯಾರು ಈ ಅಮೃತಪಾಲ್​ ಸಿಂಗ್‌?: ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಅಮೃತ್​ಪಾಲ್​ ಸಿಂಗ್ ಗುರುತಿಸಿಕೊಂಡಿದ್ದ. ಅಮೃತಸರದ ಜಲ್ಲುಪುರ್ ಖೇರಾ ಗ್ರಾಮದನಾದ ಈತ ಸುಮಾರು 10 ವರ್ಷಗಳಿಂದ ದುಬೈನಲ್ಲಿ ವಾಸವಿದ್ದ. 2021ರಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೆ ನಿಶಾನ ಸಾಹಿಬ್‌ ಧ್ವಜ ಹಾರಿಸುವ ಮೂಲಕ ಸುದ್ದಿಯಾಗಿದ್ದ. ಈತ ವಾರಿಸ್ ಪಂಜಾಬ್ ದೇ ಸಂಘಟನೆಯ ದೀಪ್‌ ಸಿಧುವಿನ ಬೆಂಬಲಿಗನ್ನಾಗಿದ್ದ. ಸಿಧು ಕಾರು ಅಪಘಾತದಲ್ಲಿ ಮೃತಪಟ್ಟ ನಂತರ ಈತ 'ವಾರಿಸ್‌ ಪಂಜಾಬ್‌ ದೇ' ಸಂಘಟನೆಯ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ. ಖಲಿಸ್ತಾನಿ ಬೆಂಬಲಿಗನ್ನಾಗಿದ್ದ ಈತ ಅಕ್ರಮಣಕಾರಿ ಭಾಷಣ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆದಿದ್ದ.

ಫೆ.23 ರಂದು ಅಮೃತ್‌ಪಾಲ್ ಅವರ ಬೆಂಬಲಿಗರು ಅವರ ಸಹಾಯಕರಲ್ಲಿ ಒಬ್ಬರಾದ ಲವ್‌ಪ್ರೀತ್ ತೂಫಾನ್‌ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಘರ್ಷಣೆಯ ನಂತರ ಅಮೃತ್​ಪಾಲ್ ಪರಾರಿಯಾಗಿದ್ದ. ಪಂಜಾಬ್ ಪೊಲೀಸರು ಸುಮಾರು ಆತನ ವಿರುದ್ಧ ಲುಕ್‌ಔಟ್ ಸುತ್ತೋಲೆ (ಎಲ್‌ಒಸಿ) ಮತ್ತು ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಹೊರಡಿಸಿದ್ದರು.

ಪತ್ನಿ, ಸಹಚರರ ಬಂಧನ: ಘರ್ಷಣೆಯ ಬಳಿಕ ಪರಾರಿಯಾಗಿದ್ದ ಅಮೃತಪಾಲ್‌ ಸಿಂಗ್‌ ಬಂಧನಕ್ಕೆ ಬೆನ್ನತ್ತಿದ ಪೊಲೀಸರು ಆತನ ಸಹಚರರನ್ನು ವಶಕ್ಕೆ ಪಡೆದಿದ್ದರು. ಪತ್ನಿ‌ ಲಂಡನ್‌ಗೆ ಪಲಾಯಾನ ಮಾಡಲು ಪ್ರಯತ್ನಿಸುತ್ತಿದ್ದಾಗ ಗೌಪ್ಯ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಜತೆಗೆ ಆರೋಪಿಯ ಪರಿಚಯಸ್ಥರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅಮೃತ್​​ಪಾಲ್‌ ಚಲನವಲದ ಮೇಲೆ ನಿಗಾ ಇಟ್ಟ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆತ ಎಲ್ಲೆಲ್ಲಿಗೆ ಪ್ರಯಾಣಿಸುತ್ತಿದ್ದ ಎಂಬುವುದನ್ನು ಕಲೆ ಹಾಕುತ್ತಿದ್ದರು. ಬಸ್‌, ಕಾರು, ಬೈಕ್‌ ಮೂಲಕ ಸ್ಥಳ ಬದಲಾಯಿಸುತ್ತಿದ್ದ.

ಅಮಿತ್ ಶಾಗೆ ಬೆದರಿಕೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಮೃತ್​ಪಾಲ್​ ಬೆದರಿಕೆ ಹಾಕಿದ್ದ. ಅಮಿತ್ ಶಾ ಅವರು ಖಲಿಸ್ತಾನಿ ಚಳವಳಿಯನ್ನು ಹುಟ್ಟುಹಾಕಲು ಬಿಡುವುದಿಲ್ಲ ಎಂದಿದ್ದರು. ಇದೇ ರೀತಿ ಕಾಂಗ್ರೆಸ್‌ ನಾಯಕಿ ಇಂದಿರಾ ಗಾಂಧಿ ಕೂಡ ಹೇಳಿದ್ದರು. ಕೊನೆಗೆ ಅವರ ಕತೆ ಏನಾಯಿತು? ಯೋಚಿಸಿ. ಅವರಿಗೆ ಆದ ಗತಿಯೇ ನಿಮಗೂ ಆಗಬಹುದು. ಅಂತಹ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದ.

ತೀಕ್ಷ್ಣ ವಾಕ್ಚಾತುರ್ಯದಿಂದ ಅಮೃತ್​ಪಾಲ್ ಪಂಜಾಬ್​ ರಾಜಕೀಯದಲ್ಲಿ ಯಾವಾಗಲೂ ಚರ್ಚೆಯಲ್ಲಿದ್ದ. ಇನ್ನು ಅಮೃತ್​ಪಾಲ್ ಸಿಂಗ್ ಅವರ ಬಂಧನದ ನಂತರ, ಪಂಜಾಬ್ ಪೊಲೀಸರು ಶಾಂತಿಯನ್ನು ಕಾಪಾಡಿಕೊಳ್ಳಲು ಜನರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್​ಪಾಲ್​ ಸಿಂಗ್ ಬಂಧನ: ಅಸ್ಸೋಂ ಜೈಲಿಗೆ ಶಿಫ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.