ETV Bharat / bharat

ಮಹದಾಯಿ ಯೋಜನೆಯ ವಿರುದ್ಧ ಪ್ರಬಲ ವಾದ ಮಂಡಿಸಿದ್ದೇವೆ: ಗೋವಾ ಸಿಎಂ ಸಾವಂತ್

author img

By

Published : Mar 30, 2023, 1:17 PM IST

ಮಹದಾಯಿ ನದಿ ತಿರುವು ವಿಚಾರದಲ್ಲಿ ತಮ್ಮ ಸರ್ಕಾರವು ಉನ್ನತಾಧಿಕಾರ ಸಮಿತಿಯ ಮುಂದೆ ಪ್ರಬಲವಾದ ವಾದ ಮಂಡಿಸಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

Govt has made strong case against diversion of Mhadei: Goa CM
Govt has made strong case against diversion of Mhadei: Goa CM

ಪಣಜಿ (ಗೋವಾ) : ಮಹದಾಯಿ ನದಿಯಿಂದ ಕರ್ನಾಟಕಕ್ಕೆ ನೀರು ಹರಿಸಲು ಯಾವುದೇ ಪರಿಸರ ಅನುಮತಿ ನೀಡದಂತೆ ಬೆಂಗಳೂರು ಮತ್ತು ಹೊಸದಿಲ್ಲಿಯಲ್ಲಿರುವ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಅರಣ್ಯ)ಯ ಮುಂದೆ ತಮ್ಮ ಸರ್ಕಾರ ಪ್ರಬಲವಾದ ವಾದ ಮಂಡಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ತಮ್ಮ ಮುಂದಿರುವ ಮಹದಾಯಿ ಜಲ ವಿವಾದವು ಒಂದು ಪ್ರಮುಖ ಸಮಸ್ಯೆಯಾಗಿದೆ ಎಂದು ಬುಧವಾರ ತಮ್ಮ ಬಜೆಟ್ ಭಾಷಣದಲ್ಲಿ ಪ್ರಮೋದ್ ಸಾವಂತ್ ಹೇಳಿದರು. ಜಲಾನಯನ ಪ್ರದೇಶದ ಹೊರಗೆ 3.9 ಟಿಎಂಸಿ ನೀರನ್ನು ತಿರುಗಿಸಲು ಅನುಮತಿ ನೀಡಿ ನ್ಯಾಯಮಂಡಳಿ ಆದೇಶ ನೀಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ತಕ್ಷಣದ ಕ್ರಮಗಳನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದರು.

ಮಹದಾಯಿ ಯೋಜನೆಗೆ ಯಾವುದೇ ಪರಿಸರಾತ್ಮಕ ಅನುಮತಿ ನೀಡದಂತೆ ಬೆಂಗಳೂರು ಮತ್ತು ಹೊಸದಿಲ್ಲಿಯಲ್ಲಿರುವ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಅರಣ್ಯ)ಯ ಮುಂದೆ ಸಶಕ್ತ ವಾದವನ್ನು ಮಂಡಿಸಿದ್ದೇವೆ. ಕರ್ನಾಟಕವು ತನ್ನ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಆದೇಶಿಸಿದ್ದಾರೆ ಎಂದು ಅವರು ಹೇಳಿದರು. ಈಗಿರುವ ಪರಿಸ್ಥಿತಿಯಲ್ಲಿ ನಾವು ಸುಪ್ರೀಂ ಕೋರ್ಟ್‌ನಿಂದ ಅನುಕೂಲಕರ ಆದೇಶಗಳನ್ನು ಪಡೆದಿದ್ದೇವೆ. ಪರಿಸರ ಕಾನೂನಿನಡಿಯಲ್ಲಿ ಅನುಮತಿಗಳನ್ನು ಪಡೆಯದ ಹೊರತು ಕರ್ನಾಟಕವು ಯಾವುದೇ ಮುಂದಿನ ಕೆಲಸ ಅಥವಾ ತಿರುವು ಕಾಮಗಾರಿ ಕೈಗೊಳ್ಳುವುದನ್ನು ಈ ಆದೇಶ ತಡೆಯುತ್ತದೆ. ನಮ್ಮ ಸರ್ಕಾರವು ಕರ್ನಾಟಕದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಮುಂದೆ ಬಾಕಿ ಉಳಿದಿರುವ ಸಮಸ್ಯೆಗಳ ಬಗ್ಗೆ ನಿಗಾ ವಹಿಸಿದೆ ಎಂದು ಅವರು ತಿಳಿಸಿದರು.

ಗೋವಾದ ಸರ್ವಪಕ್ಷ ನಿಯೋಗವು ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಹದಾಯಿ ರಕ್ಷಣೆಗೆ ಪ್ರಬಲವಾದ ವಾದ ಮಂಡಿಸಿದೆ. ಸದನ ಸಮಿತಿಯನ್ನೂ ರಚಿಸಲಾಗಿದೆ. ಪರಿಸರ, ಅರಣ್ಯ ಮತ್ತು ಜಲವಿಜ್ಞಾನ ಕ್ಷೇತ್ರದಲ್ಲಿ ತಜ್ಞರ ಸಹಾಯ ಪಡೆಯಲಾಗುತ್ತಿದೆ. ಸರ್ಕಾರದ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಸಾವಂತ್ ಹೇಳಿದರು. ಯಾವುದೇ ರೀತಿಯಿಂದ ನದಿ ತಿರುವು ಕಾಮಗಾರಿ ನಡೆಯದಂತೆ ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ನಮಗೆ ವಿಶ್ವಾಸವಿದೆ. ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಪ್ರವಾಹ್) ನಮ್ಮ ವಾದವನ್ನು ತಲುಪಿಸಲು ನಾವು ಯಶಸ್ವಿಯಾಗಿದ್ದೇವೆ. ಇದು ಕರ್ನಾಟಕದಿಂದ ಯಾವುದೇ ಅಕ್ರಮ ತಿರುವನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ ಎಂದು ಸಿಎಂ ಸಾವಂತ್ ತಿಳಿಸಿದರು.

ಮಹಾದಾಯಿ ನದಿ ವಿವಾದ 80 ರ ದಶಕದಲ್ಲಿ ಪ್ರಾರಂಭವಾಯಿತು ಮತ್ತು ನಂತರದ ದಶಕಗಳಲ್ಲಿ ವಿವಾದ ಪ್ರಬಲವಾಯಿತು. ಮಹದಾಯಿ ನದಿ ನೀರನ್ನು ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಹರಿಸಲು ಹಲವಾರು ಅಣೆಕಟ್ಟುಗಳು, ಕಾಲುವೆಗಳು ಮತ್ತು ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಲು ಕರ್ನಾಟಕ ಮುಂದಾಗಿದೆ. ಇದಕ್ಕೆ ಗೋವಾ ವಿರೋಧಿಸುತ್ತಿದೆ. ಕೃಷ್ಣೆಯ ಉಪನದಿಯಾದ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಮಹದಾಯಿ ನೀರನ್ನು ಹರಿಸುವುದರಿಂದ ನೀರಿನ ಕೊರತೆಯಿರುವ ಬಾಗಲಕೋಟೆ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಕರ್ನಾಟಕ ಹೇಳಿಕೊಂಡಿದೆ.

ಇದನ್ನೂ ಓದಿ : ಅಧಿವೇಶನದಲ್ಲಿ ಕಳಸಾ ಬಂಡೂರಿ ಮಹದಾಯಿ ಬಗ್ಗೆ ಬಿಜೆಪಿ ಸರಕಾರ ಶ್ವೇತಪತ್ರ ಹೊರಡಿಸಲಿ: ಎಚ್​ ಕೆ ಪಾಟೀಲ್​​ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.