ETV Bharat / bharat

ಕೇರಳ ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ: ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಎನ್‌ಐಎ ಕೋರ್ಟ್​

author img

By

Published : Jul 13, 2023, 6:15 PM IST

Special NIA court in sentences three to life term in professors hand being chopped off in Kerala
ಕೇರಳ ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ: ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಎನ್‌ಐಎ ಕೋರ್ಟ್​

ಕೇರಳ ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಪ್ರಕಟಿಸಿದೆ.

ಎರ್ನಾಕುಲಂ (ಕೇರಳ): ದೇಶದ ಗಮನ ಸೆಳೆದಿದ್ದ ಕೇರಳದ ಕಾಲೇಜು ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣದ ಎರಡನೇ ಹಂತದ ವಿಚಾರಣೆಯ ಆರು ಅಪರಾಧಿಗಳಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಆರು ಜನರ ಪೈಕಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತರ ಮೂವರಿಗೆ ಮೂರು ವರ್ಷಗಳ ಸೆರೆವಾಸ ವಿಧಿಸಿ ಆದೇಶಿಸಿದೆ.

2010ರಲ್ಲಿ ಕೊಟ್ಟಾಯಂ ಜಿಲ್ಲೆಯ ತೊಡುಪುಳ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಕೈ ಕತ್ತರಿಸಿದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದ ಆರೋಪಿಗಳಾದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯರಾಗಿರುವ ಆರು ಮಂದಿಯನ್ನು ದೋಷಿ ಎಂದು ನ್ಯಾಯಾಲಯ ಬುಧವಾರ ತೀರ್ಪು ನೀಡಿತ್ತು. ಇತರ ಐವರು ಆರೋಪಿಗಳನ್ನು ಸಾಕ್ಷ್ಯಾಧಾರ ಕೊರತೆ ಕಾರಣ ಖುಲಾಸೆಗೊಳಿಸಿತ್ತು.

ಇಂದು ಎರಡನೇ ಹಂತದ ವಿಚಾರಣೆಯ ಆರು ಅಪರಾಧಿಗಳಿಗೂ ಕೊಚ್ಚಿಯ ಎನ್‌ಐಎ ವಿಶೇಷ ಕೋರ್ಟ್​ನ​ ನ್ಯಾಯಾಧೀಶ ಅನಿಲ್ ಭಾಸ್ಕರ್ ಶಿಕ್ಷೆ ಪ್ರಮಾಣ ಘೋಷಿಸಿದ್ದಾರೆ. ಎರಡನೇ ಆರೋಪಿ ಸಜಿಲ್, ಮೂರನೇ ಆರೋಪಿ ಎಂ.ಕೆ. ನಾಸರ್ ಮತ್ತು ಐದನೇ ಆರೋಪಿ ನಜೀಬ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ, ಸಜಿಲ್‌ಗೆ ಐದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಉಳಿದ ಮೂವರು ಅಪರಾಧಿಗಳಾದ ನೌಶಾದ್, ಮೊಯ್ತೀನ್ ಕುಂಜು ಮತ್ತು ಅಯೂಬ್​ಗೆ ತಲಾ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲ ಅಪರಾಧಿಗಳ ವಿರುದ್ಧದ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಆರೋಪ ಹಾಗೆಯೇ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪ್ರೊಫೆಸರ್ ಟಿ.ಜೆ. ಜೋಸೆಫ್ ಸಿದ್ಧಪಡಿಸಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿಯ ಬಗ್ಗೆ ಅವಹೇಳನಕಾರಿ ಉಲ್ಲೇಖ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ 2010ರ ಜುಲೈ 4ರಂದು ಆರೋಪಿಗಳು ಕಾರಿನಲ್ಲಿ ತೆರಳುತ್ತಿದ್ದ ಪ್ರೊಫೆಸರ್ ಜೋಸೆಫ್ ಅವರನ್ನು ತಡೆದು ನಿಲ್ಲಿಸಿ ಬಲಗೈ ಕತ್ತರಿಸಿದ್ದರು. ಈ ಘಟನೆ ಬಗ್ಗೆ ತನಿಖೆ ನಡೆಸಿದ್ದ ತಂಡವು ಇದರ ದೊಡ್ಡ ಸಂಚು ಅಡಗಿರುವುದನ್ನು ಪತ್ತೆ ಮಾಡಿತ್ತು. ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲು ಈ ಘಟನೆಯೂ ಒಂದು ಕಾರಣವಾಗಿತ್ತು ಎಂಬುದು ಗಮನಾರ್ಹ.

ಈ ಪ್ರಕರಣದ ಮೊದಲ ಹಂತದ ವಿಚಾರಣೆಯಲ್ಲಿ 31 ಜನರ ಆರೋಪ ಎದುರಿಸಿದ್ದರು. ಇದರಲ್ಲಿ 13 ಮಂದಿಗೆ ಶಿಕ್ಷೆಗೆ ಗುರಿಯಾಗಿದ್ದರು. ಉಳಿದ 18 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಇದೀಗ ಎರಡನೇ ಹಂತದ ವಿಚಾರಣೆಯನ್ನು ನಡೆಸಲಾಗಿದೆ. ಇದರಲ್ಲಿ ಮುಖ್ಯ ಮಾಸ್ಟರ್ ಮೈಂಡ್ ಆದ ಆಲುವಾ ಮೂಲದ ಎಂ.ಕೆ.ನಾಸರ್ ಹಾಗೂ ನೇರವಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಸಜಿಲ್​ ಗುರಿಯಾಗಿದ್ದಾನೆ. ಆದರೆ, ಎರಡನೇ ಹಂತದ ವಿಚಾರಣೆ ಮುಗಿದಿದ್ದರೂ ಈ ಪ್ರಕರಣ ಮಾತ್ರ ಮುಗಿದಿಲ್ಲ. ಯಾಕೆಂದರೆ, ಅಪರಾಧ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವ ಮೊದಲ ಆರೋಪಿ ಸವಾದ್ ಈ ವರೆಗೂ ಪತ್ತೆಯಾಗಿಲ್ಲ.

ಇದನ್ನೂ ಓದಿ: ಕೇರಳದಲ್ಲಿ ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣ: 6 ಮಂದಿ ತಪ್ಪಿತಸ್ಥರೆಂದು NIA ವಿಶೇಷ ಕೋರ್ಟ್ ತೀರ್ಪು​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.