ETV Bharat / bharat

'ಬಂಗಾರದ ರಾಮಮಂದಿರ': 42 ದ್ವಾರಗಳಿಗೆ ಚಿನ್ನಲೇಪನ, 100 ಕೆಜಿ ಬಂಗಾರ ಬಳಕೆ

author img

By ETV Bharat Karnataka Team

Published : Jan 10, 2024, 7:15 AM IST

ಪುರುಷೋತ್ತಮ ಶ್ರೀರಾಮನ ಭವ್ಯ ಮಂದಿರಕ್ಕೆ ಚಿನ್ನದ ಬಾಗಿಲುಗಳು ಮತ್ತಷ್ಟು ಮೆರುಗನ್ನು ಹೆಚ್ಚಿಸಿವೆ. 42 ಚಿನ್ನದ ಬಾಗಿಲುಗಳನ್ನು ಅಳವಡಿಸಲು ಟ್ರಸ್ಟ್​ ಮುಂದಾಗಿದೆ.

ಬಂಗಾರದ ಬಾಗಿಲು
ಬಂಗಾರದ ಬಾಗಿಲು

ಅಯೋಧ್ಯೆ (ಉತ್ತರಪ್ರದೇಶ) : ಭಕ್ತಿಯ ಸೆಲೆಯನ್ನು ಚಿಮ್ಮುತ್ತಿರುವ ಭವ್ಯ ರಾಮಮಂದಿರಕ್ಕೆ ಚಿನ್ನದ ಹೊಳಪು ಬಂದಿದೆ. ಶತಮಾನಗಳ ಕನಸು ಸಾಕಾರವಾಗಿ ನಾಗರಶೈಲಿಯಲ್ಲಿ ನಿರ್ಮಾಣಗೊಂಡಿರುವ ಮಂದಿರ ಇದೇ ಜನವರಿ 22 ರಂದು ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ. ಇಲ್ಲಿನ ಕೆತ್ತನೆಯ ಕಲಾಕುಸುರಿ, ವಿಗ್ರಹಗಳು, ವಿವಿಧ ದೇವರ ದೇವಾಲಯಗಳು ಭಕ್ತಿಯ ಸೋಪಾನವನ್ನೇ ಹಾಸಿವೆ.

ಮಂದಿರದ ಭವ್ಯತೆಗೆ ಕಳಶವಿಟ್ಟಂತೆ ಗರ್ಭಗುಡಿ ಸೇರಿದಂತೆ ಎಲ್ಲ ಬಾಗಿಲುಗಳಿಗೆ ಚಿನ್ನದ ಲೇಪನ ಮಾಡಲಾಗಿದೆ. ಇದಕ್ಕಾಗಿ 100 ಕೆಜಿ ಬಂಗಾರವನ್ನು ಬಳಸಿಕೊಳ್ಳಲಾಗಿದೆ. ಗರ್ಭಗುಡಿಗೆ 12 ಅಡಿ ಎತ್ತರ, 8 ಅಡಿ ಅಗಲದ ಮೊದಲ ಚಿನ್ನದ ದ್ವಾರವನ್ನು ಅಳವಡಿಸಲಾಗಿದೆ. ಇದು ದಿವ್ಯದೇಗುಲದ ಮೆರುಗು ಹೆಚ್ಚಿಸಿದೆ.

ರಾಮಮಂದಿರದಲ್ಲಿ ಒಟ್ಟು 46 ಬಾಗಿಲುಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ 42 ಚಿನ್ನದ ಲೇಪನ ಹೊಂದಿರಲಿವೆ. ಈಗಾಗಲೇ ಮೊದಲ ಬಂಗಾರದ ಬಾಗಿಲನ್ನು ಅಳವಡಿಸಲಾಗಿದೆ. ಇನ್ನು ಮೂರು ದಿನಗಳಲ್ಲಿ 13 ಚಿನ್ನದ ಬಾಗಿಲುಗಳನ್ನು ಅಳವಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಿರಿಮಿರಿ ಹೊಳೆದ ಚಿನ್ನದ ಬಾಗಿಲು: ಚಿನ್ನದ ಬಾಗಿಲನ್ನು ಅದ್ಭುತ ಕಲಾಕುಸುರಿಯಲ್ಲಿ ನಿರ್ಮಿಸಲಾಗಿದೆ. ಫಲಕದ ಮಧ್ಯದಲ್ಲಿ ಸ್ವಾಗತ ಭಂಗಿಯಲ್ಲಿರುವ ಎರಡು ಆನೆಗಳನ್ನು ಕಾಣಬಹುದು. ಮೇಲಿನ ಭಾಗದಲ್ಲಿ ಇಬ್ಬರು ಸೇವಕರು ಅರಮನೆಯ ದ್ವಾರದ ಮುಂದೆ ಕೈಮುಗಿದು ನಿಂತಿರುವ ಆಕಾರವಿದೆ. ಬಾಗಿಲಿನ ಕೆಳಭಾಗದ ನಾಲ್ಕು ಚೌಕಗಳಲ್ಲಿ ಸುಂದರವಾದ ಕಲಾಕೃತಿಗಳನ್ನು ಕೆತ್ತಲಾಗಿದೆ. ದೃಢವಾದ ಬಾಗಿಲು ಚಿನ್ನದ ಲೇಪನದಲ್ಲಿ ಮಿರಿಮಿರಿ ಮಿಂಚುತ್ತಿದೆ.

ಇನ್ನೂ, ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈಚೆಗೆ ಮಂದಿರದ ನಿರ್ಮಾಣದ ಸೊಬಗಿನ ಚಿತ್ರ ಮತ್ತು ವಿಡಿಯೋವನ್ನು ಹಂಚಿಕೊಂಡಿತ್ತು. ರಾಮಾಯಣದ ಮಹತ್ವದ ಪಾತ್ರವಾದ ಜಟಾಯುವಿನ ಶಿಲ್ಪದ ಚಿತ್ರವು ಮನಸೂರೆಗೊಂಡಿತ್ತು. ರಾತ್ರಿಯ ಸಮಯದಲ್ಲಿ ಚಿತ್ರಿಸಲಾಗಿದ್ದು, ದೇವಾಲಯದ ಕಂಬಗಳು ಮತ್ತು ಗೋಡೆಗಳ ಮೇಲೆ ಕೆತ್ತಲಾಗಿರುವ ದೇವತೆಗಳು, ಕಲಾವೈಭವ ಮಂದಿರದ ಭವ್ಯತೆಗೆ ಸಾಕ್ಷಿ ಹೇಳುತ್ತಿವೆ.

ಮಂದಿರದ ವಿಶೇಷತೆಗಳು: ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮ ಮಂದಿರವು ಮೂರು ಅಂತಸ್ತಿನ ದೇವಾಲಯವಾಗಿದ್ದು, 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಇದು ಐದು ಮಂಟಪಗಳನ್ನು ಒಳಗೊಂಡಿದೆ. ಪ್ರವೇಶ ದ್ವಾರದಲ್ಲಿ ಆನೆಗಳು, ಸಿಂಹಗಳು, ಹನುಮಾನ್ ಮತ್ತು ಗರುಡ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.

ಜನವರಿ 22 ರಂದು ದಿವ್ಯದೇಗುಲದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಮಧ್ಯಾಹ್ನ 12.15 ರ ಸುಮಾರಿಗೆ ಗರ್ಭಗುಡಿಯಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಇದನ್ನೂ ಓದಿ: ಎಲ್ಲಾ ಜೈಲುಗಳಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೇರಪ್ರಸಾರ : ಯುಪಿ ಕಾರಾಗೃಹ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.