ETV Bharat / bharat

ಕ್ರಿಮಿನಲ್​ ಕೇಸಲ್ಲಿ ಜೈಲು ಶಿಕ್ಷೆ: ನಾಳೆ ಸೂರತ್​ ಕೋರ್ಟ್​ಗೆ ರಾಹುಲ್​ ಗಾಂಧಿ ಮೇಲ್ಮನವಿ ಸಾಧ್ಯತೆ

author img

By

Published : Apr 2, 2023, 11:30 AM IST

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ವಿಧಿಸಲಾದ ಜೈಲು ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ. ನಾಳೆ ಸೂರತ್​ ಕೋರ್ಟ್​ನಲ್ಲಿ ಕಾನೂನು ತಂಡ ಅರ್ಜಿ ಸಲ್ಲಿಸಲಿದೆ ಎಂದು ಮೂಲಗಳು ಹೇಳಿವೆ.

ರಾಹುಲ್​ ಗಾಂಧಿ ಮೇಲ್ಮನವಿ
ರಾಹುಲ್​ ಗಾಂಧಿ ಮೇಲ್ಮನವಿ

ನವದೆಹಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್​ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಾಳೆ(ಏಪ್ರಿಲ್​ 3 ರಂದು) ಸೂರತ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಅವರ ಕಾನೂನು ತಂಡವು ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಲು ಸಕಲ ತಯಾರಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಮೋದಿ ಉಪನಾಮೆ ವಿಚಾರವಾಗಿ ನೀಡಿದ್ದ ವಿವಾದಿತ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರು ಸೂರತ್​ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರನ್ನು ದೋಷಿ ಎಂದು ಕೋರ್ಟ್​ ತೀರ್ಪು ನೀಡಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇದೇ ವೇಳೆ ಅವರಿಗೆ ಜಾಮೀನು ಕೂಡಾ ನೀಡಿತ್ತು.

ರಾಹುಲ್​ ಗಾಂಧಿ ಅವರಿಗೆ ಸೂರತ್​ ಕೋರ್ಟ್‌​ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಕಲ ನೆರವು ನೀಡಲಾಗುವುದು. ಕಾನೂನು ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಹೇಳಿದ್ದರು. ಈ ವಿಷಯವನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲು ಪಕ್ಷ ಸಿದ್ಧವಿದೆ ಎಂದು ಕೂಡ ಹೇಳಿದ್ದರು.

ರಾಹುಲ್​ ಸಂಸದ ಸ್ಥಾನ ಅನರ್ಹ: ಶಿಕ್ಷೆ ಪ್ರಕಟವಾದ ಬಳಿಕ ರಾಹುಲ್​ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಇವರು ಕೇರಳದ ವಯನಾಡ್​ ಸಂಸದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅನರ್ಹತೆಯನ್ನು ಕಾಂಗ್ರೆಸ್​ ಮತ್ತು ಕೆಲವು ವಿಪಕ್ಷ ನಾಯಕರು ಖಂಡಿಸಿದ್ದರು. ಇಂದೊಂದು ಸೇಡಿನ ರಾಜಕಾರಣ. ರಾಜಕೀಯವಾಗಿಯೇ ಎದುರಿಸಲಾಗುವುದು ಎಂದು ಹೇಳಿದ್ದರು.

ಪ್ರಕರಣದ ಹಿನ್ನೆಲೆ ಹೀಗಿದೆ..: 2019 ರ ಲೋಕಸಭೆ ಚುನಾವಣೆಯ ವೇಳೆ ಕರ್ನಾಟಕದ ಕೋಲಾರದಲ್ಲಿ ರಾಹುಲ್​ ಗಾಂಧಿ ಅವರು ಮೋದಿ ಉಪನಾಮ ವಿಚಾರವಾಗಿ ವಿವಾದಿತ ಹೇಳಿಕೆ ನೀಡಿದ್ದರು. ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಎಂಬವರು ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಚ್.ಎಚ್.ವರ್ಮಾ ಅವರಿದ್ದ ಪೀಠ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ್ದರು.

ರಾಹುಲ್ ಗಾಂಧಿ ತಮ್ಮ ವಿರುದ್ಧದ ಕೇಸ್​ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ನ್ಯಾಯಮೂರ್ತಿ ಎಚ್.ಎಚ್.ವರ್ಮಾ ಪ್ರಕರಣದ ತೀರ್ಪು ಪ್ರಕಟಿಸಿದ್ದು, ರಾಹುಲ್ ಅವರು​ ನೀಡಿದ್ದ ಹೇಳಿಕೆಯಿಂದ ಇನ್ನೊಬ್ಬರ ಮಾನಹಾನಿಯಾಗಿದೆ. ಇದು ಕ್ರಿಮಿನಲ್​ ಹೇಳಿಕೆಯಾಗಿದೆ ಎಂದಿರುವ ಕೋರ್ಟ್,​ 2 ವರ್ಷ ಜೈಲು ಶಿಕ್ಷೆ ನೀಡಿತ್ತು. ಆ ಬಳಿಕ ರಾಹುಲ್​ ಮನವಿಯ ಮೇರೆಗೆ 30 ದಿನಗಳ ಕಾಲ ಜಾಮೀನು ನೀಡಲಾಗಿದೆ.

ಸಾವರ್ಕರ್​ ಹೇಳಿಕೆಗೆ ಟೀಕೆ: ಸಂಸದ ಸ್ಥಾನದಿಂದ ಅನರ್ಹವಾದ ಬಳಿಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ''ನನ್ನ ಹೆಸರು ರಾಹುಲ್​ ಗಾಂಧಿ, ವೀರ್ ಸಾವರ್ಕರ್‌ರಂತೆ ನಾನು ಕ್ಷಮೆ ಕೇಳುವುದಿಲ್ಲ'' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ಭಾರಿ ಟೀಕೆಯೂ ವ್ಯಕ್ತವಾಗಿತ್ತು. ಮಾಜಿ ಸಿಎಂ ಉದ್ಧವ್​​ ಠಾಕ್ರೆ ಸೇರಿದಂತೆ ಮಹಾರಾಷ್ಟ್ರ ನಾಯಕರು ರಾಹುಲ್​ ವಿರುದ್ಧ ತಿರುಗಿಬಿದ್ದಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.