ETV Bharat / bharat

ಸಂಸತ್​ ಭದ್ರತಾ ಲೋಪ ಪ್ರಕರಣ: ಆರೋಪಿ ಮಹೇಶ್​ ಕುಮಾವತ್​ ಪೊಲೀಸ್​ ಕಸ್ಟಡಿ ವಿಸ್ತರಣೆ

author img

By PTI

Published : Dec 23, 2023, 1:51 PM IST

Etv Bharat
ಸಂಸತ್​ ಭದ್ರತಾ ಲೋಪ ಪ್ರಕರಣ: ಆರೋಪಿ ಮಹೇಶ್​ ಕುಮಾವತ್​ ಪೊಲೀಸ್​ ಕಸ್ಟಡಿ ವಿಸ್ತರಣೆ

ಸಂಸತ್​ ಭದ್ರತಾ ಲೋಪ ಪ್ರಕರಣ ಸಂಬಂಧ ಆರೋಪಿ ಮಹೇಶ್​ ಕುಮಾವತ್​ ಪೊಲೀಸ್​ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಿ ದೆಹಲಿ ನ್ಯಾಯಾಲಯ ಆದೇಶಿಸಿದೆ.

ನವದೆಹಲಿ: ಸಂಸತ್​ ಭದ್ರತಾ ಲೋಪ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪ್ರಕರಣದ ಆರೋಪಿ ಮಹೇಶ್​ ಕುಮಾವತ್ ಪೊಲೀಸ್​ ಕಸ್ಟಡಿಯನ್ನು ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ. ​ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹೇಶ್ ಕುಮಾವತ್​ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಆರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಹರ್​ದೀಪ್​ ಕೌರ್​ ಅವರು ಆರೋಪಿ ಕುಮಾವತ್​ ಪೊಲೀಸ್​ ಕಸ್ಟಡಿಯನ್ನು ಜನವರಿ 5ರವರೆಗೆ ವಿಸ್ತರಿಸಿ ಆದೇಶಿಸಿದ್ದಾರೆ. ಇದೇ ವೇಳೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಆರೋಪಿಯನ್ನು ಇನ್ನಷ್ಟು ವಿಚಾರಣೆ ನಡೆಸುವ ಅಗತ್ಯ ಇದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೂ ಮುನ್ನ ವಾದ ಮಂಡಿಸಿದ್ದ ಪ್ರಾಸಿಕ್ಯೂಟರ್​, ಆರೋಪಿಗಳು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಮತ್ತು ಈ ಮೂಲಕ ತಮ್ಮ ಕಾನೂನುಬಾಹಿರ ಬೇಡಿಕೆಗಳನ್ನು ಈಡೇರಿಸಬೇಕೆಂಬ ಉದ್ದೇಶವನ್ನು ಹೊಂದಿದ್ದಿರಬಹುದು. ಈ ಸಂಬಂಧ ಆರೋಪಿಗಳ ಕಸ್ಟಡಿಯನ್ನು ವಿಸ್ತರಿಸಬೇಕೆಂದು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದರು. ಇದರಿಂದ ಆರೋಪಿಗಳ ಕೃತ್ಯದ ಹಿಂದಿನ ಉದ್ದೇಶ, ಇವರಿಗೆಲ್ಲ ಯಾರೊಂದಿಗೆ ಸಂಬಂಧ ಇದೆ. ಇತ ವಿಚಾರಗಳ ಬಗ್ಗೆಯೂ ಪತ್ತೆ ಮಾಡಲು ಇದು ಸಹಕಾರಿಯಾಗಲಿದೆ ಎಂದು ಹೇಳಿದ್ದರು.

ಕಳೆದ ಡಿಸೆಂಬರ್​ 13ರಂದು ಲೋಕಸಭೆಯ ಕಲಾಪ ಸಂದರ್ಭ ಇಬ್ಬರು ದುಷ್ಕರ್ಮಿಗಳು ಸಂಸತ್​ಗೆ ನುಗ್ಗಿ ಸ್ಮೋಕ್​ ಗ್ಯಾಸ್​​ ಸಿಡಿಸಿದ್ದರು. ಈ ಸಂಬಂಧ ಒಟ್ಟು 7 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ. ದೆಹಲಿ ಪೊಲೀಸರ ಮಾಹಿತಿ ಪ್ರಕಾರ, ಭದ್ರತಾ ಲೋಪ ಪ್ರಕರಣ ಸಂಬಂಧ ಕುಮಾವತ್​ ಮತ್ತು ಪ್ರಕರಣದ ಮತ್ತೋರ್ವ ಆರೋಪಿ ಲಲಿತ್​ ಝಾ ಅವರು ಠಾಣೆಗೆ ಬಂದು ಶರಣಾಗಿದ್ದರು. ಬಳಿಕ ದೆಹಲಿ ಪೊಲೀಸರು ಈ ಇಬ್ಬರನ್ನು ವಿಶೇಷ ತನಿಖಾ ದಳಕ್ಕೆ ಹಸ್ತಾಂತರಿಸಿದ್ದರು. ಕಳೆದ ಕೆಲವು ದಿನಗಳಿಂದ ಆರೋಪಿ ಮಹೇಶ್​ ಕುಮಾವತ್​ ವಿಚಾರಣೆ ನಡೆಸಲಾಗುತ್ತಿದೆ. ಕುಮಾವತ್​ ಈಗಾಗಲೇ ಡಿಲಿಟ್ ಆಗಿರುವ ಭಗತ್​ ಸಿಂಗ್​ ಫ್ಯಾನ್​ ಕ್ಲಬ್​ನ ಸದಸ್ಯನಾಗಿದ್ದನು. ಕುಮಾವತ್​ನನ್ನು ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್​ ಪಿತೂರಿ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ನ್ಯಾಯಾಲಯವು ಪ್ರಕರಣ ಆರೋಪಿ ಮಹೇಶ್​ ಕುಮಾವತ್​ ಸೇರಿ ಇತರ ಆರೋಪಿಗಳಾದ ಮನೋರಂಜನ್​ ಡಿ., ಸಾಗರ್ ಶರ್ಮಾ, ಅಮೊಲ್​ ಧನರಾಜ್​ ಶಿಂಧೆ, ನೀಲಂ ದೇವಿ ಹಾಗೂ ಪ್ರಮುಖ ಆರೋಪಿ ಲಲಿತ್​ ಝಾ ಅವರ ಪೊಲೀಸ್​ ಕಸ್ಟಡಿಯನ್ನು ಜನವರಿ 5ರವರೆಗೆ ವಿಸ್ತರಿಸಿದೆ.

ಇದನ್ನೂ ಓದಿ : ಮೈಸೂರು: ಎರಡನೇ ದಿನವೂ ದೆಹಲಿ ಪೊಲೀಸರಿಂದ ಮನೋರಂಜನ್ ಪೋಷಕರ ವಿಚಾರಣೆ - ವೀಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.