ETV Bharat / bharat

ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು: ರೈಲ್ವೆ ಮಂಡಳಿ ಸದಸ್ಯೆಯ ವಿವರಣೆ ಹೀಗಿದೆ..

author img

By

Published : Jun 4, 2023, 9:12 PM IST

ಗ್ರೀನ್ ಸಿಗ್ನಲ್ ಪಡೆದ ನಂತರವೇ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲು ಮುಂದೆ ಸಾಗಿದೆ ಎಂದು ಗಾಯಾಳು ಲೋಕೋ ಪೈಲಟ್ ಹೇಳಿರುವುದಾಗಿ ರೈಲ್ವೆ ಮಂಡಳಿಯ ಸದಸ್ಯೆ ಜಯವರ್ಮಾ ಸಿನ್ಹಾ ತಿಳಿಸಿದ್ದಾರೆ.

odisha-rail-mishap-railway-board-signalling-issue
ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಸಿಕ್ತು ಗ್ರೀನ್ ಸಿಗ್ನಲ್: ರೈಲ್ವೆ ಮಂಡಳಿ ಸದಸ್ಯೆಯ ವಿವರಣೆ ಹೀಗಿದೆ

ನವದೆಹಲಿ: ಒಡಿಶಾ ರೈಲು ದುರಂತದ ಬಗ್ಗೆ ರೈಲ್ವೆ ಮಂಡಳಿಯ ಸದಸ್ಯೆ ಜಯವರ್ಮಾ ಸಿನ್ಹಾ ಭಾನುವಾರ ಮಹತ್ವದ ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ ಭಾಗಿಯಾಗಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಗಾಯಾಳು ಲೋಕೋ ಪೈಲಟ್ ಗ್ರೀನ್ ಸಿಗ್ನಲ್ ಪಡೆದ ನಂತರವೇ ರೈಲು ಮುಂದೆ ಸಾಗಿದೆ. ಗೂಡ್ಸ್ ರೈಲು ಹಳಿ ತಪ್ಪಿರಲಿಲ್ಲ. ಗೂಡ್ಸ್ ರೈಲು ಕಬ್ಬಿಣದ ಅದಿರುಗಳನ್ನು ಸಾಗಿಸುತ್ತಿದ್ದ ಪರಿಣಾಮ ಗರಿಷ್ಠ ಹಾನಿ ಕೋರಮಂಡಲ್​ ಎಕ್ಸ್‌ಪ್ರೆಸ್‌ಗೆ ಆಗಿದೆ. ಇದು ಅಪಾರ ಸಂಖ್ಯೆಯ ಸಾವು ಮತ್ತು ನೋವಿಗೆ ಕಾರಣವಾಗಿದೆ ಎಂದು ವಿವರಿಸಿದ್ದಾರೆ.

ದೆಹಲಿಯಲ್ಲಿ ಭಾನುವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರೈಲ್ವೆ ಮಂಡಳಿಯ ಆಪರೇಷನ್ ಮತ್ತು ಬ್ಯುಸಿನೆಸ್ ಡೆವಲಪ್‌ಮೆಂಟ್ ಸದಸ್ಯರಾದ ಜಯವರ್ಮಾ ಸಿನ್ಹಾ, ಕೋರಮಂಡಲ್ ಎಕ್ಸ್‌ಪ್ರೆಸ್‌ನ ಚಾಲಕನ ಪ್ರಕಾರ ಯಾವುದೇ ಸಿಗ್ನಲ್​ ಜಂಪ್ ಮಾಡಿಲ್ಲ ಅಥವಾ ರೈಲು ಅತಿವೇಗದಿಂದಲೂ ಬಂದಿಲ್ಲ. ಹಳಿತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಬೋಗಿಗಳು ಡೌನ್‌ಲೈನ್‌ನಲ್ಲಿ ಬಿದ್ದಿವೆ. ಈ ಡೌನ್‌ಲೈನ್‌ನಿಂದ ಗಂಟೆಗೆ 126 ಕಿ.ಮೀ ವೇಗದಲ್ಲಿ ದಾಟುತ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್‌ನ ಕೊನೆಯ ಎರಡು ಬೋಗಿಗಳಿಗೆ ಕೋರಮಂಡಲ್ ಬೋಗಿಗಳು​ ಡಿಕ್ಕಿ ಹೊಡೆದಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ದುರಂತ.. ಸಿಬಿಐ ತನಿಖೆಗೆ ಶಿಫಾರಸು ಮಾಡಿದ ರೈಲ್ವೆ ಮಂಡಳಿ

ಒಡಿಶಾ ರೈಲು ಅಪಘಾತಕ್ಕೆ ಸಿಗ್ನಲಿಂಗ್ ಸಮಸ್ಯೆ ಕಾರಣ ಎಂದ ಅವರು, ಕೋರಮಂಡಲ್ ಎಕ್ಸ್‌ಪ್ರೆಸ್ ಮಾತ್ರ ಅಪಘಾತಕ್ಕೆ ಒಳಗಾಗಿದೆ ಎಂದು ಒತ್ತಿ ಹೇಳಿದ್ದಾರೆ. ಅಲ್ಲದೇ, ರೈಲ್ವೆ ಸುರಕ್ಷತಾ ಆಯುಕ್ತರ ವಿಸ್ತೃತ ವರದಿಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ. ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಿದೆ. ಸಾಕ್ಷ್ಯಗಳನ್ನು ಹಾಳು ಮಾಡದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಯಾವುದೇ ಸಾಕ್ಷಿಗಳು ಯಾವ ಪ್ರಭಾವಕ್ಕೂ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.

ಬಾಲಸೋರ್‌ನ ಬಹನಾಗಾ ಬಜಾರ್ ನಿಲ್ದಾಣದ ಬಳಿ ಶುಕ್ರವಾರ ಸಂಜೆ ಮೂರು ರೈಲುಗಳು ಅಪಘಾತಕ್ಕೀಡಾಗಿವೆ. ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು - ಹೌರಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಈ ದುರಂತಕ್ಕೆ ಕಾರಣವಾಗಿವೆ. ಭಾರತೀಯ ರೈಲ್ವೆ ಇತಿಹಾಸದಲ್ಲೇ ನಾಲ್ಕನೇ ಭೀಕರ ದುರಂತದಲ್ಲಿ ಇದುವರೆಗೆ 275 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರೆ, 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ರೈಲು ಹಳಿಗಳ ದುರಸ್ತಿ: ಮತ್ತೊಂದೆಡೆ, ರಣಭೀಕರ ರೈಲು ಅಪಘಾತಕ್ಕೆ ಕಾರಣವಾದ ಸ್ಥಳದಲ್ಲಿ ದುರಸ್ತಿ ಕಾಮಗಾರಿ ಸಮರೋಪಾದಿಯಲ್ಲಿ ಸಾಗಿದೆ. ಪೂರ್ವ ಮತ್ತು ದಕ್ಷಿಣ ಭಾರತವನ್ನು ಸಂಪರ್ಕಿಸುವ ಮುಖ್ಯ ಹಳಿಯಲ್ಲಿ ಬುಲ್ಡೋಜರ್‌ಗಳು ಮತ್ತು ಕ್ರೇನ್‌ಗಳು ಬೋಗಿಗಳನ್ನು ತೆಗೆದು ಹಾಕಲಾಗಿದೆ. ಎರಡು ರೈಲು ಹಳಿಗಳನ್ನು ರೈಲುಗಳ ಸಂಚಾರಕ್ಕೆ ಯೋಗ್ಯಗೊಳಿಸಲಾಗಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಅಪ್-ಲೈನ್ ಲಿಂಕ್ ಮಾಡುವ ಟ್ರ್ಯಾಕ್​ಅನ್ನು ಪುನಃಸ್ಥಾಪಿಸಲಾಗಿದೆ. ಓವರ್‌ಹೆಡ್ ವಿದ್ಯುದ್ದೀಕರಣ ಕಾರ್ಯವೂ ಪ್ರಾರಂಭವಾಗಿದೆ. ಎರಡು ರೈಲ್ವೆ ಹಳಿಗಳನ್ನು ದುರಸ್ತಿ ಮಾಡಲಾಗಿದೆ. ಸದ್ಯ ಮೇಲ್ಮುಖ ವಿದ್ಯುತ್ ಕೇಬಲ್‌ಗಳ ಮರುಸ್ಥಾಪಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಳಿಗಳ ನವೀಕರಣಕ್ಕೆ ಕಡಿಮೆ ಹಣ, ಅಸಮರ್ಪಕ ಸಿಬ್ಬಂದಿ.. ರೈಲ್ವೆಯ ಗಂಭೀರ ಲೋಪಗಳ ಬಯಲು ಮಾಡಿದ್ದ CAG ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.