ETV Bharat / bharat

ಒಡಿಶಾ ಸಚಿವ ನಬಾ ದಾಸ್ ಹತ್ಯೆ: 3 ದಿನ ಶೋಕಾಚರಣೆ

author img

By

Published : Jan 30, 2023, 8:26 AM IST

Updated : Jan 30, 2023, 11:05 AM IST

Minister Naba Das demise
ಸಚಿವ ನಬಾ ದಾಸ್ ನಿಧನ

ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರನ್ನು ನಿನ್ನೆ ಪೊಲೀಸ್ ಅಧಿಕಾರಿಯೊಬ್ಬರು ಗುಂಡು ಹಾರಿಸಿ ಹತ್ಯೆಗೈದಿದ್ದರು. ಅಲ್ಲಿನ ಸರ್ಕಾರ ಇಂದಿನಿಂದ ಮೂರು ದಿನ ಶೋಕಾಚರಣೆ ಘೋಷಿಸಿದೆ. ಇಂದು ಸಂಜೆ ಮೃತದೇಹದ ಅಂತ್ಯಕ್ರಿಯೆ ನೆರವೇರಲಿದೆ.

ಭುವನೇಶ್ವರ (ಒಡಿಶಾ): ಅಸಿಸ್ಟೆಂಟ್ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌​ (ಎಎಸ್‌ಐ) ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದ ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಾ ಕಿಶೋರ್ ದಾಸ್ ಭಾನುವಾರ ಸಂಜೆ ನಿಧನರಾಗಿದ್ದರು. ಸಚಿವರ ಅಗಲಿಕೆಯ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಈ ಅವಧಿಯಲ್ಲಿ ನಡೆಯಬೇಕಿದ್ದ ಸರ್ಕಾರದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ಹುಟ್ಟೂರಲ್ಲಿ ಅಂತ್ಯಕ್ರಿಯೆ: ಸಚಿವರ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ ಬಿಜೆಡಿಯ ಕಚೇರಿಗೆ ರವಾನಿಸಲಾಗುತ್ತದೆ. ಬಳಿಕ ಬಿಜೆಡಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಗೌರವ ನಮನ ಸಲ್ಲಿಸಲಿದ್ದಾರೆ. ನಂತರ ಮೃತದೇಹವನ್ನು ವಿಶೇಷ ವಿಮಾನದಲ್ಲಿ ಸಚಿವರ ಹುಟ್ಟೂರು ಝಾರ್ಸುಗುಡಾಕ್ಕೆ ರವಾನಿಸಿ, ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ನಿನ್ನೆ ನಡೆದ ಘಟನೆ: ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ನಬಾ ಕಿಶೋರ್ ದಾಸ್ ಭಾನುವಾರ ತೆರಳುತ್ತಿದ್ದರು. ಈ ವೇಳೆ ಝಾರ್ಸುಗುಡಾ ಜಿಲ್ಲೆಯ ಗಾಂಧಿ ಚೌಕ್‌ನಲ್ಲಿ ಸಮವಸ್ತ್ರದಲ್ಲಿದ್ದ ಎಎಸ್‌ಐ ಗೋಪಾಲ್ ದಾಸ್ ಎಂಬುವವರು ಆರೋಗ್ಯ ಸಚಿವರ ವಾಹನದ ಬಳಿ ಬಂದು ಸರ್ವಿಸ್ ರಿವಾಲ್ವಾರ್​ನಿಂದ ಏಕಾಏಕಿ ಗುಂಡು ಹಾರಿಸಿದ್ದರು. ಪರಿಣಾಮ ಸಚಿವರು ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಭುವನೇಶ್ವರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಭಾನುವಾರ ಸಂಜೆ ಆಸ್ಪತ್ರೆಯಲ್ಲೇ ನಬಾ ದಾಸ್ ಕೊನೆಯುಸಿರೆಳೆದಿದ್ದರು.

"ಮಧ್ಯಾಹ್ನ 12.30ರ ಸುಮಾರಿಗೆ ಗಾಂಧಿ ಚೌಕ್ ಬಳಿ ಸಾರ್ವಜನಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಘಟನೆ ನಡೆಯಿತು. ಸಚಿವರ ಎಡ ಎದೆಯ ಭಾಗಕ್ಕೆ ಗುಂಡು ತಗುಲಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು" ಎಂದು ಪ್ರತ್ಯಕ್ಷದರ್ಶಿ ಅಡ್ವೋಕೇಟ್ ರಾಮ್ ಮೋಹನ್ ರಾವ್ ತಿಳಿಸಿದ್ದಾರೆ. ​

"ನಬಾ ದಾಸ್ ಮೇಲಿನ ದಾಳಿ ದುರದೃಷ್ಟಕರ. ಘಟನೆಯಿಂದ ಆಘಾತಕ್ಕೊಳಗಾಗಿದ್ದೇನೆ. ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ಸರ್ಕಾರ ಮತ್ತು ಪಕ್ಷಕ್ಕೆ ಅವರು ಆಸ್ತಿಯಾಗಿದ್ದರು. ಆರೋಗ್ಯ ಇಲಾಖೆಯಲ್ಲಿ ಜನರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವರ ಅಗಲಿಕೆಯಿಂದ ತುಂಬಲಾರದ ನಷ್ಟ ಉಂಟಾಗಿದೆ" ಎಂದು ಸಿಎಂ ನವೀನ್ ಪಟ್ನಾಯಕ್ ನಿನ್ನೆ ಕಂಬನಿ ಮಿಡಿದಿದ್ದಾರೆ. ಬಿಜೆಪಿ ನಾಯಕರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತನಿಖೆಗೆ ಆದೇಶ: ನಬಾ ಕಿಶೋರ್ ದಾಸ್ ಮೇಲೆ ಗುಂಡಿನ ದಾಳಿ ನಡೆಸಲು ಕಾರಣವೇನು ಎಂದು ತಿಳಿದು ಬಂದಿಲ್ಲ. ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಪೊಲೀಸ್​ ಅಪರಾಧ ವಿಭಾಗಕ್ಕೆ ಮುಖ್ಯಮಂತ್ರಿ ಪಟ್ನಾಯಕ್ ಆದೇಶಿಸಿದ್ದಾರೆ. ಆರೋಪಿ ಎಎಸ್‌ಐ ಗೋಪಾಲ್ ದಾಸ್​​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗುಂಡಿನ ದಾಳಿಗೆ ಒಳಗಾಗಿದ್ದ ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಸಾವು

Last Updated :Jan 30, 2023, 11:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.