ETV Bharat / bharat

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಉಗ್ರ ಸಂಘಟನೆಗೆ ನಿಧಿ ಸಂಗ್ರಹ: ಕರ್ನಾಟಕ ಕೋರ್ಟ್​ನಲ್ಲಿ ಇಬ್ಬರ ವಿರುದ್ಧ NIA ಚಾರ್ಜ್​ಶೀಟ್​

author img

By ETV Bharat Karnataka Team

Published : Oct 10, 2023, 6:57 PM IST

NIA CHARGESHEETS TWO ACCUSED PERSONS IN TEHREEK-E-TALIBAN- PAKISTAN CASE, IN KARNATAKA
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಉಗ್ರ ಸಂಘಟನೆಗೆ ನಿಧಿ ಸಂಗ್ರಹ: ಕರ್ನಾಟಕ ಕೋರ್ಟ್​ನಲ್ಲಿ ಇಬ್ಬರು ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ NIA

ನಿಷೇಧಿತ ಉಗ್ರ ಸಂಘಟನೆಯಾದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನಕ್ಕೆ ನಿಧಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಆರೀಫ್​ ಹಾಗೂ ಹರ್ಮಝ್ ವರ್ಸಿದ್ ಶೇಖ್ ಎಂಬವರ ವಿರುದ್ಧ ಕರ್ನಾಟಕದ ನ್ಯಾಯಾಲಯದಲ್ಲಿ ಎನ್​ಐಎ ಚಾರ್ಜ್​ಶೀಟ್ ಸಲ್ಲಿಸಿದೆ.

ಬೆಂಗಳೂರು: ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನಕ್ಕೆ (ಟಿಟಿಪಿ) ನಿಧಿ ಸಂಗ್ರಹ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಕರ್ನಾಟಕದ ನ್ಯಾಯಾಲಯದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಚಾರ್ಜ್​ಶೀಟ್​ ಸಲ್ಲಿಸಿತು. ಈ ಆರೋಪಿಗಳು ಹಿಂಸಾತ್ಮಕ ಜಿಹಾದ್ ಕೃತ್ಯಗಳ ನಡೆಸಲು ಭಾರತದ ಮುಸ್ಲಿಂ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಮತ್ತು ನಿಷೇಧಿತ ಉಗ್ರ ಸಂಘಟನೆಗೆ ನೇಮಿಸಲು ಪ್ರಯತ್ನಿಸಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ.

ಬೆಂಗಳೂರಿನಲ್ಲಿ ಫ್ರೆಂಚ್ ಭಾಷಾಂತರನಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಅಲಿಗಢ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಆರೀಫ್​ (42) ಹಾಗೂ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನಿವಾಸಿ ಹರ್ಮಝ್ ವರ್ಸಿದ್ ಶೇಖ್ ವಿರುದ್ಧ ಎನ್​ಐಎ ಕೇಸ್​ ದಾಖಲಿಸಿತ್ತು. ಇಬ್ಬರು ಆರೋಪಿಗಳ ವಿರುದ್ಧವೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್​ಗಳಡಿ ಆರೋಪಗಳನ್ನು ಹೊರಿಸಲಾಗಿದೆ.

ಆರೀಫ್​ ಹಾಗೂ ಶೇಖ್​ ಸಾಮಾಜಿಕ ಜಾಲತಾಣಗಳಲ್ಲಿ ಗೂಢಲಿಪಿ ಮೂಲಕ ಸಂವಹನ ನಡೆಸುತ್ತಿದ್ದರು. ಸಿರಿಯಾ ಮೂಲದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ಆನ್​ಲೈನ್​ ನಿರ್ವಾಹಕನೊಂದಿಗೆ (ಹ್ಯಾಂಡ್ಲರ್)​ ಸೇರಿಕೊಂಡು ಸಂಚು ರೂಪಿಸುತ್ತಿದ್ದರು. ಭಾರತದಲ್ಲಿ ತಮ್ಮ ಬಲೆಗೆ ಸುಲಭವಾಗಿ ಬೀಳುವ ಮುಸ್ಲಿಂ ಯುವಕರನ್ನು ಈ ಇಬ್ಬರೂ ಆರೋಪಿಗಳು ಗುರುತಿಸುತ್ತಿದ್ದರು. ಅಲ್ಲದೇ, ಆ ಯುವಕರನ್ನೂ ಮೂಲಭೂತವಾದಿಗಳನ್ನಾಗಿ ಮಾಡಲು ಹಾಗೂ ಟಿಟಿಪಿ ಸಿದ್ಧಾಂತದ ಬಗ್ಗೆ ಪ್ರಚಾರ ಮಾಡುವ ಮೂಲಕ ನೇಮಿಸಿಕೊಳ್ಳಲು ಯತ್ನಿಸುತ್ತಿದ್ದರು. ಅಷ್ಟೇ ಅಲ್ಲ, ಜಿಹಾದ್​ನಲ್ಲಿ ತೊಡಗಲು ಹಾಗೂ ಜಿಹಾದ್​ ಕೃತ್ಯಗಳನ್ನು ನಡೆಸಲು ಟಿಟಿಪಿ ಸಂಘಟನೆಗೆ ಸೇರುವಂತೆ ಅಮಾಯಕ ಯುವಕರಿಗೆ ಪ್ರಚೋದಿಸುತ್ತಿದ್ದರು ಎಂಬುದು ಎನ್​ಐಎ ತನಿಖೆಯಲ್ಲಿ ಬಯಲಾಗಿದೆ.

ಕುಟುಂಬಸಮೇತ ಉಗ್ರ ಸಂಘಟನೆ ಸೇರಲು ಹೊರಟಿದ್ದ ಆರೀಫ್​!: ಮತ್ತೊಂದು ಅಚ್ಚರಿಯ ವಿಷಯವೇನೆಂದರೆ, ಮೊಹಮ್ಮದ್ ಆರೀಫ್ ತೆಹ್ರೀಕ್-ಎ-ತಾಲಿಬಾನ್​ ಸಂಘಟನೆಗೆ ತನ್ನ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಕುಟುಂಬಸಮೇತ ಸೇರಲು ಹೊರಟಿದ್ದ. ಇರಾನ್​-ಅಫ್ಘಾನಿಸ್ತಾನ ಗಡಿ ಮೂಲಕ ಅಕ್ರಮವಾಗಿ ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದ. ಇದಕ್ಕಾಗಿ ಆರೀಫ್​ ತನ್ನ ಇಡೀ ಕುಟುಂಬಕ್ಕೆ ಇರಾನ್​ ವೀಸಾಗಾಗಿ ಅರ್ಜಿ ಸಲ್ಲಿಸಿದ್ದ. ಮುಂದುವರೆದು, ಇರಾನ್​ಗೆ ಕುಟುಂಬದ ನಾಲ್ವರಿಗೆ ವಿಮಾನ ಟಿಕೆಟ್​ಗಳನ್ನೂ ಬುಕ್​ ಮಾಡಿದ್ದ. ಭಾರತಕ್ಕೆ ಮರಳಲು ತನ್ನ ಕುಟುಂಬದ ಡಮ್ಮಿ ಟಿಕೆಟ್‌ಗಳನ್ನೂ ಕಾಯ್ದಿರಿಸಿದ್ದ. ಆನ್​ಲೈನ್​ ಹ್ಯಾಂಡ್ಲರ್​ನ ನಿರ್ದೇಶನದಂತೆ, ಇರಾನ್​ನ ಮಶ್ಹಾದ್ ನಗರದಲ್ಲಿ ಬೊಶ್ರಾ ಹೋಟೆಲ್​ನಲ್ಲಿ ರೂಮ್​ಗಳನ್ನು ಬುಕ್​ ಮಾಡಿದ್ದ ಎಂಬ ಆಘಾತಕಾರಿ ಮಾಹಿತಿಯನ್ನೂ ರಾಷ್ಟ್ರೀಯ ತನಿಖಾ ದಳ ಹೊರಹಾಕಿದೆ.

ಮತ್ತೊಬ್ಬ ಆರೋಪಿ ಹರ್ಮಝ್ ಶೇಖ್, ಟಿಟಿಪಿ ಚಟುವಟಿಕೆಗಳನ್ನು ಮುಂದುವರೆಸಲು ಪಾಕಿಸ್ತಾನಕ್ಕೆ ಹಣ ರವಾನೆ ಮಾಡುತ್ತಿದ್ದ. ಹಿಂಸಾತ್ಮಕ ಜಿಹಾದ್ ಕೃತ್ಯಗಳ ಮೂಲಕ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಆರೋಪಿಗಳು ಉದ್ದೇಶಿಸಿದ್ದರು. ಈ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಸಂಸ್ಥೆಯಿಂದ ಭಾರತೀಯ ಭಯೋತ್ಪಾದಕರಿಗೆ ಧನಸಹಾಯ: ಎನ್ಐಎ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.