ETV Bharat / bharat

ಹಾವಿನಿಂದ ಕಚ್ಚಿಸಿ ಪತ್ನಿ, ಮಗಳನ್ನು ಕೊಂದ ಕಿರಾತಕ ಅರೆಸ್ಟ್​!

author img

By ETV Bharat Karnataka Team

Published : Nov 24, 2023, 2:01 PM IST

Man killed wife and daughter by using snake, accused arrested
Man killed wife and daughter by using snake, accused arrested

Man killed wife and daughter by using snake: ಹಾವಿನಿಂದ ಕಚ್ಚಿಸಿ ಪತ್ನಿ ಹಾಗೂ ಮಗಳನ್ನು ಕೊಂದ ಪಾಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗಂಜಾಂ: ವಿಷಪೂರಿತ ಹಾವು ಬಿಟ್ಟು ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿದ ಘಟನೆ ಇಲ್ಲಿ ನಡೆದಿದೆ. ಪತ್ನಿ ಮತ್ತು ಮಗಳು ಮಲಗಿದ್ದಾಗ ಆರೋಪಿಯು ಅವರ ಮೇಲೆ ಹಾವು ಬಿಟ್ಟಿದ್ದ. ಹಾವು ಕಚ್ಚಿದ್ದರಿಂದ ಇಬ್ಬರೂ ಸಾವಿಗೀಡಾಗಿದ್ದರು. ಗಂಜಾಂ ಜಿಲ್ಲೆಯ ಕಬಿಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಧೇಬಾರ್ ಗ್ರಾಮದಲ್ಲಿ ಇಂಥ ಹೃದಯಹೀನ ಘಟನೆ ನಡೆದಿದೆ. ಅವಳಿ ಕೊಲೆ ಘಟನೆಯ ತನಿಖೆ ನಡೆಸುತ್ತಿರುವಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆಯ ವಿವರ: ಗಂಜಾಂ ಜಿಲ್ಲೆಯ ಅಧೇಬಾರ್ ಗ್ರಾಮದ ಬಿ. ಖಲಿ ಪನ್ ಎಂಬುವರ ಎರಡನೇ ಮಗಳು ಬಸಂತಿ ಪನ್ ಅವರನ್ನು 3 ವರ್ಷಗಳ ಹಿಂದೆ ಆ ಗ್ರಾಮದ ಕೆ.ಧನು ಪನ್ ಎಂಬವರ ಕಿರಿಯ ಮಗ ಕೆ. ಗಣೇಶ್ ಪನ್ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಕಳೆದ ವರ್ಷ ಗಣೇಶ್ ತನ್ನ ಹೆಂಡತಿಯ ಚಾರಿತ್ರ್ಯ ಅನುಮಾನಿಸಿ ನಿತ್ಯ ಜಗಳವಾಡಲಾರಂಭಿಸಿದ್ದನು. ಈ ಬಗ್ಗೆ ಬಸಂತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಒಂದು ಬಾರಿ ಪೊಲೀಸರಿಂದ ಬಂಧನಕ್ಕೊಳಗಾದ ಗಣೇಶ್, ಸೆಕ್ಷನ್ -41 ರ ಅಡಿಯಲ್ಲಿ ಲಿಖಿತ ಭರವಸೆಯ ನಂತರ ಜಾಮೀನು ಪಡೆದು ಬಂದಿದ್ದ. ಇದಾದ ಬಳಿಕ ಇಬ್ಬರೂ ಕಳೆದ ಕೆಲ ತಿಂಗಳುಗಳಿಂದ ಗಣೇಶ್ ಮನೆಯಲ್ಲಿಯೇ ವಾಸವಾಗಿದ್ದರು. ಈ ಮಧ್ಯೆ ತನ್ನ ವಿರುದ್ಧ ನೀಡಲಾದ ದೂರು ಹಿಂಪಡೆಯುವಂತೆ ಗಣೇಶ್ ಆಗಾಗ ಪತ್ನಿಗೆ ಒತ್ತಾಯಿಸಿ ಜಗಳವಾಡುತ್ತಿದ್ದ. ಅಲ್ಲದೆ ಮಗಳನ್ನು ಕೊಲ್ಲುವುದಾಗಿ ಬೆದರಿಸುತ್ತಿದ್ದ.

ಅಕ್ಟೋಬರ್ 7ರಂದು ಮುಂಜಾನೆ 5 ಗಂಟೆಗೆ ಗಣೇಶ್ ತನ್ನ ಮನೆಯಲ್ಲಿ ಜೋರಾಗಿ ಕೂಗತೊಡಗಿದನು. ಆತನ ಕೂಗಾಟ ಚೀರಾಟ ಕೇಳಿ ಸುತ್ತಲಿನ ಜನರೆಲ್ಲ ಜಮಾಯಿಸಿದರು. ಇದೇ ಸಮಯದಲ್ಲಿ ಅಲ್ಲಿಗೆ ಬಂದ ಬಸಂತಿಯ ತಂದೆ ಮನೆಯೊಳಗೆ ಹೋಗಿ ನೋಡಿದಾಗ ಗಣೇಶ್​ ಹಾವೊಂದನ್ನು ಕೋಲಿನಿಂದ ಹೊಡೆದು ಸಾಯಿಸುತ್ತಿದ್ದ. ಆದರೆ ಆತನ ಮಗಳು ಮತ್ತು ಮೊಮ್ಮಗಳು ಹತ್ತಿರದಲ್ಲೇ ಮಲಗಿರುವುದು ಕಾಣಿಸಿತ್ತು. ಅವರಿಗೆ ಹಾವು ಕಚ್ಚಿದೆ ಎಂದು ಗಣೇಶ್ ಹೇಳಿದ ನಂತರ ಇಬ್ಬರನ್ನೂ 108 ಆಂಬ್ಯುಲೆನ್ಸ್ ಮೂಲಕ ಹಿಂಜಿಲಿಕಟ್ಟು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.

ಅಲ್ಲಿ ವೈದ್ಯರು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದರು.

ಘಟನೆ ನಡೆದ 5 ದಿನಗಳ ನಂತರ ಸಂತ್ರಸ್ತೆಯ ತಂದೆ ತನ್ನ ಮಗಳು ಮತ್ತು ಮೊಮ್ಮಗಳನ್ನು ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ಈ ದೂರಿನ ನಂತರ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಗಣೇಶನೇ ತನ್ನ ಪತ್ನಿ ಹಾಗೂ ಮಗಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪೋಲ್ಸಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಮುಕ್ತಮಲ್ ದೀಪುರ್​ಶಾಮನ್ ಎಂಬ ಪ್ರದೇಶದಲ್ಲಿ ಹಾವು ಹಿಡಿಯುವವರಿಂದ ಹಾವು ಖರೀದಿಸಿ ತಂದು ಅದನ್ನು ತನ್ನ ಹೆಂಡತಿ ಮತ್ತು 2 ವರ್ಷದ ಮಗಳಿಗೆ ಕಚ್ಚಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿ ಗಣೇಶ್ ತನಗೆ ಪೂಜೆ ಮಾಡಿಸಲು ಹಾವು ಬೇಕಾಗಿದೆ ಎಂದು ಹೇಳಿ ಹಾವು ತಂದಿದ್ದ.

ಇದನ್ನೂ ಓದಿ: ನರ್ಸ್​ ವೇಷದಲ್ಲಿ ಇಂಜೆಕ್ಷನ್​ ನೀಡಿ ಬಾಣಂತಿ ಕೊಲೆಗೆ ಯತ್ನ: ಇದು ಸಹೋದರನ ಗ್ಯಾಂಗ್ ರೂಪಿಸಿದ ಪ್ಲಾನ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.