ETV Bharat / bharat

ಡಿ.21ರಂದು ಸಿಡಬ್ಲ್ಯೂಸಿ ಸಭೆ ಕರೆದ ಖರ್ಗೆ; ಲೋಕಸಭಾ ಚುನಾವಣಾ ಕಾರ್ಯತಂತ್ರ ಚರ್ಚೆ ಸಾಧ್ಯತೆ

author img

By ETV Bharat Karnataka Team

Published : Dec 17, 2023, 12:51 PM IST

ಇದೇ ಡಿಸೆಂಬರ್ 21ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.

Congress Chief Kharge Calls CWC Meet On Dec 21 To Discuss 2024 Lok Sabha Polls Strategy
Congress Chief Kharge Calls CWC Meet On Dec 21 To Discuss 2024 Lok Sabha Polls Strategy

ನವದೆಹಲಿ : ದೇಶದಲ್ಲಿನ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಸೆಂಬರ್ 21 ರಂದು ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್​ನ ಸೋಲು, ಸಂಸತ್ ಭವನದ ಭದ್ರತಾ ಲೋಪ ಘಟನೆ ಮತ್ತು ಇತರ ವಿಷಯಗಳ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಚರ್ಚಿಸುವ ಸಾಧ್ಯತೆಯಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ಕೆಲಸದ ದಿನಕ್ಕಿಂತ ಒಂದು ದಿನ ಮೊದಲು ಗುರುವಾರ ಸಭೆ ನಡೆಯಲಿದೆ.

2024 ರ ಲೋಕಸಭಾ ಚುನಾವಣೆಗೆ ಕಾರ್ಯತಂತ್ರವನ್ನು ಸಿದ್ಧಪಡಿಸುವುದು ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸಾರ್ವತ್ರಿಕ ಚುನಾವಣೆಗೆ ಸುಮಾರು ನಾಲ್ಕು ತಿಂಗಳು ಬಾಕಿ ಇರುವಾಗ, ಕಾಂಗ್ರೆಸ್ ಪಕ್ಷವು ಕಳೆದುಹೋದ ಹಿಡಿತವನ್ನು ಮರಳಿ ಪಡೆಯುವ ಗುರಿಯನ್ನು ಹೊಂದಿದೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಅಧಿಕಾರ ಕಳೆದುಕೊಂಡಿದೆ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ವಿಫಲವಾಗಿದೆ. ತೆಲಂಗಾಣದಲ್ಲಿ ಮಾತ್ರ ಕೆಸಿಆರ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್​) ಅನ್ನು ಹೊರಹಾಕಿ ಸರ್ಕಾರ ರಚಿಸಲು ಕಾಂಗ್ರೆಸ್​ಗೆ ಸಾಧ್ಯವಾಗಿದೆ.

ಅಲ್ಲದೆ ಡಿಸೆಂಬರ್ 19 ರಂದು ನಡೆಯಲಿರುವ ಐಎನ್​ಡಿಐಎ (INDIA) ಮೈತ್ರಿಕೂಟದ ಸಭೆಯ ಎರಡು ದಿನಗಳ ನಂತರ ಸಿಡಬ್ಲ್ಯೂಸಿ ಸಭೆ ನಡೆಯಲಿದ್ದು, ಸೀಟು ಹಂಚಿಕೆ ಮತ್ತು ಪ್ರಚಾರದ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ನಿರುದ್ಯೋಗ ಮತ್ತು ಬೆಲೆ ಏರಿಕೆಯನ್ನು ಪ್ರಮುಖ ವಿಚಾರವಾಗಿಟ್ಟುಕೊಂಡು 2024 ರ ಚುನಾವಣೆಗೆ ಮುಂಚಿತವಾಗಿ ರಾಹುಲ್ ಗಾಂಧಿ ನಡೆಸಬಹುದಾದ ಯಾತ್ರೆಯ ಸಾಧ್ಯತೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ಡಿಸೆಂಬರ್ 3 ಮತ್ತು 4 ರಂದು ಪ್ರಕಟವಾದ ಚುನಾವಣಾ ಫಲಿತಾಂಶಗಳ ನಂತರ ಮೊದಲ ಬಾರಿಗೆ ಡಿಸೆಂಬರ್ 19 ರಂದು ಐಎನ್​ಡಿಐಎ ಬಣದ ನಾಯಕರು ಸಭೆ ಸೇರಲಿದ್ದಾರೆ. ಸಭೆಯಲ್ಲಿ ಭವಿಷ್ಯದ ಕಾರ್ಯಸೂಚಿ, ಆಂತರಿಕ ಬಿರುಕುಗಳು ಮತ್ತು ಸೀಟು ಹಂಚಿಕೆಯ ಬಗ್ಗೆ ಗಮನ ಹರಿಸುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರಿಸಲು ಪಕ್ಷಗಳು "ಮೈ ನಹೀ, ಹಮ್" (ನಾವು, ನಾನಲ್ಲ) ಎಂಬ ಒಗ್ಗಟ್ಟಿನ ಮಂತ್ರದೊಂದಿಗೆ ಮುಂದುವರಿಯಲು ಉದ್ದೇಶಿಸಿವೆ ಎಂದು ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಜಾತಿ ಗಣತಿ ವಿವಾದ ಬಗ್ಗೆ ಸಿಎಂ ಭೇಟಿ : ವೀರಶೈವ - ಲಿಂಗಾಯತ ಶಾಸಕರಿಂದ ಹೊಸ ಸಮೀಕ್ಷೆಗೆ ಪಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.