ETV Bharat / state

ಜಾತಿ ಗಣತಿ ವಿವಾದ ಬಗ್ಗೆ ಸಿಎಂ ಭೇಟಿ : ವೀರಶೈವ - ಲಿಂಗಾಯತ ಶಾಸಕರಿಂದ ಹೊಸ ಸಮೀಕ್ಷೆಗೆ ಪಟ್ಟು

author img

By ETV Bharat Karnataka Team

Published : Dec 17, 2023, 7:34 AM IST

ರಾಜ್ಯಸಭೆಯಲ್ಲಿ ಮೊನ್ನೆಯಷ್ಟೇ ಕರ್ನಾಟಕದಲ್ಲಿನ ಜಾತಿ ಗಣತಿ ವರದಿ ಬಗ್ಗೆ ಕಾಂಗ್ರೆಸ್ ಮುಖಂಡರ ವಿರೋಧ ಇರುವುದು ಚರ್ಚೆಯಾದ ಬೆನ್ನಲ್ಲೇ ಇದೀಗ ವೀರಶೈವ ಸಮುದಾಯದ ಸಚಿವರು ಮತ್ತು ಶಾಸಕರು ಸಿಎಂ ಅವರನ್ನು ಭೇಟಿ ಮಾಡಿ ಹೊಸ ಜಾತಿ ಗಣತಿ ನಡೆಸುವಂತೆ ಮನವಿ ಮಾಡಿದ್ದಾರೆ.

Cast Census
ಜಾತಿ ಗಣತಿ ವಿವಾದ

ಬೆಂಗಳೂರು : ಜಾತಿ ಗಣತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗುವ ಮುನ್ನವೇ ಹೆಚ್ಚಿನ ಪ್ರಮಾಣದ ಅಪಸ್ವರ ಕೇಳಿ ಬರತೊಡಗಿದೆ. ವೀರಶೈವ - ಲಿಂಗಾಯತ ಸಮುದಾಯದ ಬಹುತೇಕ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಳೆ ವರದಿಯನ್ನು ಅಂಗೀಕರಿಸದೇ ವೈಜ್ಞಾನಿಕವಾಗಿ ಹೊಸ ಸಮೀಕ್ಷೆ ನಡೆಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಆಡಳಿತ ಪಕ್ಷ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿಯಲ್ಲಿನ ವೀರಶೈವ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವರು ಹಾಗೂ ಶಾಸಕರುಗಳ ನಿಯೋಗವು ಅಖಿಲ ಭಾರತ ವೀರಶೈವ ಮಹಾಸಭಾದ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಹಳೆ ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸುವುದಕ್ಕೆ ತಮ್ಮ ವಿರೋಧವಿದೆ ಎನ್ನುವ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಹಿರಿಯ ಕಾಂಗ್ರೆಸ್ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಮುಂದಾಳತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ವೀರಶೈವ ಲಿಂಗಾಯತ ಸಮುದಾಯದ ಶಾಸಕರುಗಳು ಹಳೆ ಜಾತಿ ಗಣತಿ ವರದಿ ಅಂಗೀಕಾರಕ್ಕೆ ತಮ್ಮ ಸಹಮತವಿಲ್ಲ ಎನ್ನುವುದನ್ನು ಸಕಾರಣ ಸಮೇತ ವಿವರಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಿರುವ ಮನವಿ ಪತ್ರದಲ್ಲಿ ಹೊಸದಾಗಿ ವೈಜ್ಞಾನಿಕ ಮಾದರಿಯಲ್ಲಿ ಸಮೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ಜೊತೆಗೆ, ಎಂಟು ವರ್ಷಗಳಷ್ಟು ಹಳೆಯದಾಗಿರುವ ಜಾತಿ ಸಮೀಕ್ಷೆಯನ್ನು ಅಂಗೀಕಾರ ಮಾಡಬಾರದು. ಹಳೆ ಜಾತಿಗಣತಿಯ ಲೋಪದೋಷಗಳನ್ನು ಸರಿಪಡಿಸಿಕೊಂಡು ಹೊಸದಾಗಿಯೇ ಜಾತಿ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಹಳೆ ಜಾತಿ ಗಣತಿ ವರದಿ ಒಪ್ಪದೇ ಹೊಸದಾಗಿ ಜಾತಿ ಗಣತಿ ನಡೆಸಬೇಕೆಂದು ಮುಖ್ಯಮಂತ್ರಿಗೆ ಸಲ್ಲಿಕೆ ಮಾಡಲಾದ ಪತ್ರಕ್ಕೆ ಕೈಗಾರಿಕೆ ಸಚಿವರಾದ ಎಂ ಬಿ ಪಾಟೀಲ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಎಂ ವೈ ಪಾಟೀಲ್, ಬಸವರಾಜ ರಾಯರೆಡ್ಡಿ, ಡಿ ಜಿ ಶಾಂತನಗೌಡ, ಕೆ ಷಡಕ್ಷರಿ, ವಿಜಯಾನಂದ ಕಾಶಪ್ಪನವರ, ವಿನಯ್ ಕುಲಕರ್ಣಿ, ಯು ಬಿ ಬಣಕಾರ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ಬಿಜೆಪಿಯ ಹಿರಿಯ ಶಾಸಕರಾದ ಬಸನಗೌಡ ಯತ್ನಾಳ್, ಸಿ.ಸಿ ಪಾಟೀಲ್, ಅರವಿಂದ ಬೆಲ್ಲದ, ಸೇರಿದಂತೆ ಹಲವು ಶಾಸಕರು ಸಹಿ ಹಾಕಿದ್ದಾರೆ.

ಹಳೆ ಜಾತಿ ಗಣತಿ ವರದಿಯಲ್ಲಿ ಇರುವ ಲೋಪದೋಷಗಳನ್ನು ಪಟ್ಟಿ ಮಾಡಿ ವೀರಶೈವ - ಲಿಂಗಾಯತ ಸಮುದಾಯದ ಶಾಸಕರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದಾರೆ. 8 ವರ್ಷಗಳ ಹಿಂದೆ ನಡೆಸಲಾದ ಸಮೀಕ್ಷೆ ಈಗ ಅಪ್ರಸ್ತುತವಾಗಿರುತ್ತದೆ. ಪ್ರತಿ 10 ವರ್ಷಗಳಿಗೊಮ್ಮೆ ಜಾತಿ ಗಣತಿ ನಡೆಸಲಾಗುತ್ತದೆ. ಹಿಂದಿನ ಜಾತಿ ಗಣತಿ ಸಮೀಕ್ಷೆ ವೇಳೆ ಗಣತಿ ಮಾಡುವವರು ಮನೆ ಮನೆಗೆ ಭೇಟಿ ನೀಡದೆ ಕಚೇರಿಯಲ್ಲೇ ಕುಳಿತುಕೊಂಡು ವರದಿ ಸಿದ್ಧಪಡಿಸಿದ ಆರೋಪಗಳಿವೆ. ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಮತ್ತು ಜಿಲ್ಲಾ ಘಟಕಗಳ ಸಭೆ ನಡೆಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾತಿ ಗಣತಿ ವೇಳೆ ತಮ್ಮ ಮನೆಗೆ ಭೇಟಿ ನೀಡಿಲ್ಲವೆಂದು ತಿಳಿಸಿದ್ದಾರೆ ಅಂತ ಸಿಎಂಗೆ ಸಲ್ಲಿಕೆ ಮಾಡಿರುವ ಪತ್ರದಲ್ಲಿ ಶಾಸಕರುಗಳು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಜಾತಿ ಗಣತಿಗೆ ವಿರೋಧವಿಲ್ಲ, ವೈಜ್ಞಾನಿಕ ಸಮೀಕ್ಷೆ ಆಗಲಿ: ಡಿಕೆ ಶಿವಕುಮಾರ್​

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ತಿಳಿಯಲು ನಡೆಸಲಾದ ಸಮೀಕ್ಷೆ ಸಂದರ್ಭದಲ್ಲಿ ಹಲವರು ತಮ್ಮ ಸಮುದಾಯದ ಬಗ್ಗೆ ಮಾಹಿತಿ ನೀಡದೆ ಉಪ ಪಂಗಡಗಳ ಬಗ್ಗೆ ವಿವರ ನೀಡಿದ್ದಾರೆ. ಈ ರೀತಿಯ ಲೋಪದೋಷಗಳು ಜಾತಿ ಗಣತಿ ಸಮೀಕ್ಷೆ ವೇಳೆ ನಡೆದಿರುವುದನ್ನು ಉದಾಹರಣೆ ಸಮೇತ ವೀರಶೈವ ಮಹಾಸಭಾ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.