ETV Bharat / bharat

ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಕುಗ್ರಾಮಕ್ಕೆ ಕುಡಿಯಲು ನಲ್ಲಿ ನೀರು!

author img

By ETV Bharat Karnataka Team

Published : Sep 8, 2023, 8:22 PM IST

Updated : Sep 9, 2023, 6:42 AM IST

ಜಲ ಜೀವನ್ ಮಿಷನ್ ಯೋಜನೆ ಅಡಿ ಮಿರ್ಜಾಪುರದ ಲಾಹುರಿಯಾ ಗ್ರಾಮದಲ್ಲಿ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ.

ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಕುಗ್ರಾಮಕ್ಕೆ ಕುಡಿಯಲು ನಲ್ಲಿ ನೀರು!
ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಕುಗ್ರಾಮಕ್ಕೆ ಕುಡಿಯಲು ನಲ್ಲಿ ನೀರು!

ಮಿರ್ಜಾಪುರ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಜಿಲ್ಲೆಯ ಹಲಿಯಾ ಬ್ಲಾಕ್‌ನ ಲಾಹುರಿಯಾದ ಎಂಬ ಕುಗ್ರಾಮಕ್ಕೆ ಕುಡಿಯಲು ನಲ್ಲಿ ನೀರು ಬಂದಿದೆ. ಇಷ್ಟು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ನಲ್ಲಿಯಿಂದ ನೀರು ಬೀಳುವುದನ್ನು ನೋಡಿದ ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿತ್ತು!

ಈ ಹಿಂದೆ ಗ್ರಾಮಸ್ಥರು ಅಲ್ಲಲ್ಲಿ ಕಾಣುವ ಬುಗ್ಗೆ ಹಾಗೂ ಅಕ್ಕ-ಪಕ್ಕದ ನಗರಕ್ಕೆ ತೆರಳಿ ಟ್ಯಾಂಕರ್​ಗಳಿಂದ ನೀರು ತರಬೇಕಾಗಿತ್ತು. ಅಲ್ಲಿಂದ ತಂದ ನೀರನ್ನು ಹಲವು ದಿನಗಳವರೆಗೆ ಸಣ್ಣ-ಸಣ್ಣ ಕ್ಯಾನ್​ಗಳಲ್ಲಿ ಸಂಗ್ರಹ ಮಾಡಿಕೊಳ್ಳಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದ ಜಲ ಜೀವನ್ ಮಿಷನ್ ಯೋಜನೆಯಡಿ ಈಗ ಮನೆಯಲ್ಲಿ ಅಳವಡಿಸಿರುವ ನಲ್ಲಿಯಿಂದಲೇ ನೀರು ಕಲ್ಪಿಸಲಾಗಿದೆ. ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯಾ ಮಿತ್ತಲ್ ಅವರು ಪೂಜೆ ಮಾಡುವ ಮೂಲಕ ಇತ್ತೀಚೆಗೆ ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಿದರು.

ಮಧ್ಯಪ್ರದೇಶದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಲಾಹುರಿಯಾದ ಎಂಬ ಗ್ರಾಮವು, ಮಿರ್ಜಾಪುರ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮಸ್ಥರು ಇದಕ್ಕೂ ಮುನ್ನ ಅಲ್ಲಲ್ಲಿ ಕಾಣಸಿಗುವ ಬುಗ್ಗೆಯಿಂದಲೋ ಅಥವಾ ಟ್ಯಾಂಕರ್​ನಿಂದಲೋ ನೀರು ತಂದು ತಮ್ಮ ದಾಹ ತೀರಿಸಿಕೊಳ್ಳಬೇಕಿತ್ತು. ಆದರೆ, ಕುಡಿಯುವ ನೀರಿಗಾಗಿ ಅವರು ಪರಿತಪಿಸುತ್ತಿದ್ದ ಕಷ್ಟ ಹೇಳತೀರದಾಗಿತ್ತು. ಕಿಲೋಮೀಟರ್ ವರೆಗೂ ತೆರಳಿ ನೀರು ತರಬೇಕಿತ್ತು. ಅದಕ್ಕಾಗಿ ಸಾಕಷ್ಟು ಹಣ ಮತ್ತು ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಜಲ ಜೀವನ್ ಮಿಷನ್ ಅಡಿಯಲ್ಲಿ ಇತ್ತೀಚೆಗೆ ಗ್ರಾಮಕ್ಕೆ ನಲ್ಲಿ ನೀರು ಬಂದಿದ್ದು ಕಂಡು ಗ್ರಾಮಸ್ಥರಲ್ಲಿ ಸಂತಸದ ವಾತಾವರಣ ಮೂಡಿದೆ.

ಬೆಟ್ಟದ ಮೇಲಿರುವ ಈ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಮೂಲಕ ನೀರು ಪೂರೈಸುವುದು ಸವಾಲಿನ ಕೆಲಸವಾಗಿತ್ತು. ಆದರೆ, ಜಿಲ್ಲಾಧಿಕಾರಿ ದಿವ್ಯಾ ಮಿತ್ತಲ್ ಅವರ ಪ್ರಯತ್ನದಿಂದಾಗಿ ನಲ್ಲಿ ಮೂಲಕ ನೀರು ಪೂರೈಸಲಾಗಿದೆ. ಅಂದುಕೊಂಡಂತೆ ಅಲ್ಪಾವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿದ್ದಾರೆ.

ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ''ಅಂದುಕೊಂಡ ಅವಧಿಯ ಒಳಗೆ ಗ್ರಾಮಕ್ಕೆ ಕುಡಿಯಲು ನಲ್ಲಿ ನೀರನ್ನು ಪುರೈಕೆ ಮಾಡಲಾಗಿದೆ. ಬೆಟ್ಟದ ಮೇಲಿರುವ ಈ ಗ್ರಾಮಕ್ಕೆ ನೀರು ತರುವುದು ಕಷ್ಟದ ಕೆಲಸವೇ ಆಗಿತ್ತು. ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಸಹಾಯ ಪಡೆಯಬೇಕಾಗಿತ್ತು. ಎಲ್ಲರ ಸಹಕಾರದಿಂದ ಇದೀಗ ನೀರು ತರಲು ಸಾಧ್ಯವಾಯಿತು. ಈ ಹಿಂದೆ ನೀರು ಪೂರೈಸಲು ಸಾಕಷ್ಟು ಹಣ ವ್ಯಯ ಮಾಡಬೇಕಾಗುತ್ತಿತ್ತು. ಇದರಿಂದ ಗ್ರಾಮದ ಅಭಿವೃದ್ಧಿ ಕಾರ್ಯಗಳು ಕೂಡ ಕುಂಟಿತಗೊಂಡಿದ್ದವು. ಈಗ ಗ್ರಾಮಸ್ಥರ ಸಮಯದಿಂದ ಹಿಡಿದು ಹಣವೂ ಉಳಿತಾಯವಾಗುತ್ತದೆ, ಜೊತೆಗೆ ಗ್ರಾಮದ ಅಭಿವೃದ್ಧಿಯೂ ಆಗುತ್ತದೆ'' ಎಂದು ಅವರು ಹೇಳಿದರು.

''ಗ್ರಾಮದಲ್ಲಿ ಕುಡಿಯುವ ನೀರು ಇಲ್ಲದ ಕಾರಣ ಮಕ್ಕಳ ಮದುವೆ ಹಾಗೂ ಸಭೆ-ಸಮಾರಂಭಗಳನ್ನು ಮಾಡಲು ಹಿಂದೇಟು ಹಾಕುತ್ತಿದ್ದರು. ಎಲ್ಲಿಂದಲೋ ನೀರು ಹೊರಬೇಕಾಗುತ್ತದೆ ಎಂಬ ಕಾರಣದಿಂದ ಈ ಗ್ರಾಮಕ್ಕೆ ಹೆಣ್ಣು ಸಹ ಕೊಡುತ್ತಿಲ್ಲ. ಮಹಿಳೆಯರು ಇಡೀ ದಿನ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ನಮ್ಮ ಬಳಿ ಸಾಕಷ್ಟು ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಮಳೆಗಾಲ ಮತ್ತು ಚಳಿಗಾಲದಲ್ಲಿ ಬೆಟ್ಟದ ಬುಗ್ಗೆಯಿಂದ ಬರುವ ನೀರಿನಿಂದಲೇ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಜಿಲ್ಲಾಡಳಿತ ಟ್ಯಾಂಕರ್​ಗಳಿಂದ ನೀರು ನೀಡುತ್ತಿದ್ದರೂ ಸಾಕಾಗುತ್ತಿರಲಿಲ್ಲ. ಆದರೆ, ಇದೀಗ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದೆ'' ಎಂದು ಅವರು ಹೇಳಿದರು.

''ಬೇಸಿಗೆ ಕಾಲದಲ್ಲಿ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಸಾಗಿಸುತ್ತಿತ್ತು. ಆದರೆ, ಅದು ಸಾಕಾಗುತ್ತಿರಲಿಲ್ಲ. ಹೇಗೋ ಕ್ಯಾನ್‌ಗಳಲ್ಲಿ ನೀರು ಸಂಗ್ರಹಿಸುವ ಮೂಲಕ ಕುಟುಂಬ ಮತ್ತು ಪ್ರಾಣಿಗಳನ್ನು ಬದುಕಿಸಲಾಗುತ್ತಿತ್ತು. ಜಲ ಜೀವನ್ ಮಿಷನ್ ಯೋಜನೆ ಜಾರಿಯಿಂದ ಗ್ರಾಮಸ್ಥರಲ್ಲಿ ನೀರಿನ ಸಮಸ್ಯೆ ಬಗೆಹರಿದಿದೆ'' ಎನ್ನುತ್ತಿದ್ದಾರೆ ಗ್ರಾಮಸ್ಥರು.

ಇದನ್ನೂ ಓದಿ: ನದಿಯಲ್ಲಿ ದೋಣಿ ಮಗುಚಿ ಏಳು ಮಂದಿ ನೀರು ಪಾಲು: ತಮ್ಮನ್ನು ತಾವು ರಕ್ಷಿಸಿಕೊಂಡ ಮೂವರು

Last Updated : Sep 9, 2023, 6:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.