ETV Bharat / bharat

ಶ್ರದ್ಧಾ ಮರ್ಡರ್ ರೀತಿಯ ಮತ್ತೊಂದು ಘಟನೆ: ಪ್ರೇಯಸಿ ಕೊಲೆ ಮಾಡಿ ಫ್ರಿಜ್​ನಲ್ಲಿ ಶವ ಬಚ್ಚಿಟ್ಟ ಯುವಕ!

author img

By

Published : Feb 14, 2023, 6:33 PM IST

Updated : Feb 14, 2023, 7:30 PM IST

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನೇ ಹೋಲುವ ಘಟನೆಯೊಂದು ದೆಹಲಿಯಲ್ಲಿ ಮತ್ತೆ ನಡೆದಿದೆ. ಯುವಕನೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಢಾಬಾದ ಫ್ರಿಜ್​ನಲ್ಲಿಟ್ಟ ಘಟನೆ ವರದಿಯಾಗಿದೆ.

ನವದೆಹಲಿ: ದೆಹಲಿಯಲ್ಲಿ ಮತ್ತೊಮ್ಮೆ ಹೃದಯ ವಿದ್ರಾವಕ ಘಟನೆಯೊಂದು ನಡೆದ ಬಗ್ಗೆ ವರದಿಯಾಗಿದೆ. ಯುವತಿಯೊಬ್ಬಳನ್ನು ಕೊಂದು ಆಕೆಯ ಶವವನ್ನು ಫ್ರಿಜ್​​ನಲ್ಲಿಟ್ಟ ಪ್ರಕರಣ ಇದಾಗಿದೆ. ದೆಹಲಿ ಪೊಲೀಸರ ಅಪರಾಧ ವಿಭಾಗದ ತಂಡವು ಪಶ್ಚಿಮ ದೆಹಲಿಯ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಢಾಬಾದಿಂದ ಯುವತಿಯ ಶವ ವಶಪಡಿಸಿಕೊಂಡಿದೆ. ಯುವತಿಯ ಮೃತ ದೇಹವನ್ನು ಢಾಬಾದ ಫ್ರಿಜ್​​ನಲ್ಲಿ ಇರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯನ್ನು ಮಿತ್ರಾನ್ ಗ್ರಾಮದ ನಿವಾಸಿ ಸಾಹಿಲ್ ಗೆಹ್ಲೋಟ್ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ.. ಪೊಲೀಸರು ಹೇಳುವುದೇನು?: ಘಟನೆಯ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಡಿಸಿಪಿ ವಿಕ್ರಮ್ ಸಿಂಗ್, ಯುವತಿ ಮತ್ತು ಯುವಕ ಇಬ್ಬರೂ ಪ್ರೇಮ ಸಂಬಂಧ ಹೊಂದಿದ್ದರು. ಆದರೆ, ಯುವತಿಯೊಂದಿಗೆ ಮದುವೆಯಾಗಲು ಯುವಕ ಒಪ್ಪಿರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಯುವತಿ ತನ್ನ ಪ್ರಿಯಕರನಿಗೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಇದೇ ಕಾರಣಕ್ಕೆ ಪ್ರೇಮಿ ಯುವಕ ಅವಳನ್ನು ಕೊಂದಿದ್ದಾನೆ. ನಂತರ ಆರೋಪಿಯು ಮೃತದೇಹವನ್ನು ಮಿತ್ರಾನ್ ಗ್ರಾಮದ ಢಾಬಾದಲ್ಲಿ ಬಚ್ಚಿಟ್ಟಿದ್ದ. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಾಹಿಲ್ ಗೆಹ್ಲೋಟ್ ಈತನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ವಿವರ ನೋಡುವುದಾದರೆ: ಮೂಲಗಳ ಪ್ರಕಾರ ಕೊಲೆಯಾದ ಯುವತಿ ಉತ್ತಮ್ ನಗರ ಪ್ರದೇಶದ ನಿವಾಸಿ. ಆಕೆಯ ಪ್ರಿಯಕರನಾಗಿದ್ದ ಯುವಕನ ಮದುವೆ ಫೆಬ್ರವರಿ 10 ರಂದು ನಡೆಯಲಿತ್ತು. ಈ ಮಧ್ಯೆ ತನ್ನನ್ನೇ ಮದುವೆಯಾಗುವಂತೆ ಯುವತಿ ಹಟ ಹಿಡಿದಿದ್ದರಿಂದ ಯುವ ಗಾಬರಿಯಾಗಿದ್ದ. ಆಕೆ ತನ್ನ ಮದುವೆಗೆ ಅಡ್ಡಿಯಾಗಬಹುದು ಎಂಬ ಶಂಕೆಯಿಂದ ಕೊನೆಗೆ ಆಕೆಯನ್ನು ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನು ಗ್ರಾಮದಿಂದ ದೂರದಲ್ಲಿರುವ ಢಾಬಾದ ರೆಫ್ರಿಜರೇಟರ್‌ನಲ್ಲಿ ಬಚ್ಚಿಟ್ಟಿದ್ದಾನೆ.

ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ಏಕೆ ದಾಖಲಾಗಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ನಡೆದು 4 ದಿನಗಳಾದರೂ ಸ್ಥಳೀಯ ಪೊಲೀಸರಿಗೆ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಮಂಗಳವಾರ ಅಪರಾಧ ವಿಭಾಗದ ಪೊಲೀಸರು ಶವವನ್ನು ವಶಪಡಿಸಿಕೊಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ವಿಷಯ ಬೆಳಕಿಗೆ ಬಂದಿದೆ.

ದೆಹಲಿಯಲ್ಲಿ ಕಳೆದ ವರ್ಷ ನಡೆದಿತ್ತು ಇಂತಹುದೇ ಘಟನೆ: ಕಳೆದ ವರ್ಷ ದೆಹಲಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇದನ್ನು ಶ್ರದ್ಧಾ ವಾಕರ್ ಕೊಲೆ ಪ್ರಕರಣ ಎಂದು ಕರೆಯಲಾಗುತ್ತದೆ. ಅಫ್ತಾಬ್ ಪೂನಾವಾಲಾ ಎಂಬಾತ ದೆಹಲಿಯ ಛತ್ತರ್‌ಪುರ ಪ್ರದೇಶದಲ್ಲಿ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ಎಂಬಾಕೆಯನ್ನು ಕತ್ತು ಹಿಸುಕಿ ಕೊಂದು ನಂತರ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಮೆಹ್ರೌಲಿ ಪ್ರದೇಶದಲ್ಲಿ ಎಸೆದಿದ್ದ.

ಕೊಲೆಯಾದ ಸುಮಾರು ಆರು ತಿಂಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ಎರಡೂವರೆ ತಿಂಗಳಿನಿಂದ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಶ್ರದ್ಧಾಳ ಸ್ನೇಹಿತರು ತಿಳಿಸಿದ ಬಳಿಕ ಶ್ರದ್ಧಾಳ ತಂದೆ ನಾಪತ್ತೆ ದೂರು ದಾಖಲಿಸಿದ್ದರು. 18 ಮೇ 2022 ರಂದು 28 ವರ್ಷ ವಯಸ್ಸಿನ ಅಫ್ತಾಬ್ ಪೂನಾವಾಲಾ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ತುಂಡರಿಸಿದ್ದ.

ಇದನ್ನೂ ಓದಿ: ಬೆಂಗಳೂರು: ಮದ್ಯದ ಅಮಲಿನಲ್ಲಿ ಪರಿಚಿತನನ್ನು ಹತ್ಯೆಗೈದಿದ್ದ ಆರೋಪಿಯ ಬಂಧನ

Last Updated :Feb 14, 2023, 7:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.