ETV Bharat / bharat

ಐಸಿಐಸಿಐ ವಂಚನೆ ಪ್ರಕರಣ: ಜಾಮೀನು ಕೋರಿದ ವೇಣುಗೋಪಾಲ್ ಧೂತ್, 13 ರಂದು ವಿಚಾರಣೆ

author img

By

Published : Jan 10, 2023, 4:01 PM IST

ಐಸಿಐಸಿಐ ವಂಚನೆ ಪ್ರಕರಣ: ಜಾಮೀನು ಕೋರಿದ ವೇಣುಗೋಪಾಲ್ ಧೂತ್, 13 ರಂದು ವಿಚಾರಣೆ
icici-fraud-case-venugopal-dhoot-who-sought-bail-to-be-heard-on-13

ಐಸಿಐಸಿಐ - ವಿಡಿಯೊಕಾನ್ ಸಾಲ ವಂಚನೆ ಪ್ರಕರಣದಲ್ಲಿ ಸಿಬಿಐ ತಮ್ಮನ್ನು ಬಂಧಿಸಿರುವ ಕ್ರಮ ಕಾನೂನುಬಾಹಿರವಾಗಿದೆ ಎಂದು ಪ್ರತಿಪಾದಿಸಿರುವ ವಿಡಿಯೊಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್, ತಮಗೆ ಮಧ್ಯಂತರ ಜಾಮೀನು ನೀಡಬೇಕೆಂದು ಬಾಂಬೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

ಮುಂಬೈ: ಡಿಸೆಂಬರ್ 26, 2022 ರಂದು ಸಿಬಿಐ ತನ್ನನ್ನು ಬಂಧಿಸಿದ ಕ್ರಮ ಕಾನೂನು ಬಾಹಿರವಾಗಿದೆ ಎಂದು ಹೇಳುವ ಮೂಲಕ ಮಧ್ಯಂತರ ಜಾಮೀನು ಕೋರಿ ವಿಡಿಯೋಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಮಾಡಿದ ಮನವಿಗೆ ಉತ್ತರ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದೆ. ಈ ಮುನ್ನ ಜನವರಿ 5 ರಂದು ವಿಶೇಷ ಸಿಬಿಐ ನ್ಯಾಯಾಲಯವು ಧೂತ್ ಅವರ ಮನವಿಯನ್ನು ತಿರಸ್ಕರಿಸಿತ್ತು.

ತನ್ನ ಕಕ್ಷಿದಾರರು ಶೇ 90 ರಷ್ಟು ಹೃದಯನಾಳ ಕಾಯಿಲೆಯಿಂದ ಬಳಲುತ್ತಿರುವುದರಿಂದ ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಧೂತ್ ಪರ ವಕೀಲರು ಮನವಿ ಮಾಡಿದರು. ಆದರೆ, ಕೇಂದ್ರೀಯ ತನಿಖಾ ದಳ ತನ್ನ ಪ್ರತಿಕ್ರಿಯೆ ನೀಡಲು ಸಮಯಾವಕಾಶ ನೀಡಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿತು. ಈ ಸಂದರ್ಭದಲ್ಲಿ ತನ್ನ ಪ್ರತಿಕ್ರಿಯೆ ಸಲ್ಲಿಸಲು ಸಿಬಿಐ ಒಂದು ವಾರದ ಸಮಯಾವಕಾಶ ಕೇಳಿದೆ. ಆದರೆ, ಜನವರಿ 13ರೊಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಸೂಚಿಸಿದ್ದು, ಅವತ್ತೇ ಅರ್ಜಿಯ ಮೇಲೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿತು.

ಸೋಮವಾರ ಹೈಕೋರ್ಟ್‌ ಮೊರೆ ಹೋದ ಧೂತ್, ಸಿಬಿಐ ದಾಖಲಿಸಿದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ್ದಾರೆ. ವಿಡಿಯೋಕಾನ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಡಿಸೆಂಬರ್ 23 ರಂದು ಸಿಬಿಐ ಬಂಧಿಸಿತ್ತು. ಮೂರು ದಿನಗಳ ನಂತರ ಧೂತ್ ಅವರನ್ನು ಬಂಧಿಸಲಾಗಿತ್ತು. ಆದರೆ, ಸೋಮವಾರ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದರಿಂದ ಕೊಚ್ಚರ್​ ದಂಪತಿ ಮಂಗಳವಾರ ಬೆಳಗ್ಗೆ ಜೈಲಿನಿಂದ ಹೊರ ಬಂದಿದ್ದಾರೆ.

ವಕೀಲ ಸಂದೀಪ್ ಲಡ್ಡಾ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ವಿಶೇಷ ಸಿಬಿಐ ನ್ಯಾಯಾಲಯದ ಡಿಸೆಂಬರ್ 26, 28 ಮತ್ತು 29 ರ ಆದೇಶಗಳನ್ನು ರದ್ದುಗೊಳಿಸುವಂತೆ ಧೂತ್ ಕೋರಿದ್ದಾರೆ. ಸಿಆರ್‌ಪಿಸಿಯ ಸೆಕ್ಷನ್ 41 ಮತ್ತು 41ಎ ಮತ್ತು ಸಂವಿಧಾನದ 14, 19 (1) (ಡಿ) ಮತ್ತು 21 ನೇ ವಿಧಿಗಳಡಿ ತಮ್ಮನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಘೋಷಿಸುವಂತೆ ಅವರು ಕೋರಿದ್ದಾರೆ. ತಾವು ಮಧುಮೇಹ ಸೇರಿದಂತೆ ಹಲವಾರು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರಾಗಿದ್ದು, ತಮಗೆ 24×7 ಆರೈಕೆ ಮತ್ತು ಸಹಾಯದ ಅಗತ್ಯವಿದೆ. ಅನಾರೋಗ್ಯದ ಕಾರಣ ಕಳೆದ ಏಳು ವರ್ಷಗಳಲ್ಲಿ ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಧೂತ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ತನಿಖೆಗೆ ಸಹಕರಿಸಿದ್ದು ಮತ್ತು ನೋಟಿಸ್‌ಗೆ ಪ್ರತಿಕ್ರಿಯಿಸಿದ ಹೊರತಾಗಿಯೂ ಸಿಬಿಐ ತಮ್ಮನ್ನು ಬಂಧಿಸಿರುವುದು ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ತಮಗೆ ತಲೆಮರೆಸಿಕೊಳ್ಳುವ ಅಥವಾ ಬಂಧನದಿಂದ ತಪ್ಪಿಸಿಕೊಳ್ಳುವ ಅಥವಾ ಸಿಬಿಐ ತನಿಖೆಗೆ ಅಡ್ಡಿಪಡಿಸುವ ಯಾವುದೇ ಉದ್ದೇಶವಿಲ್ಲ ಎಂದು ಧೂತ್ ತಿಳಿಸಿದ್ದಾರೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ತಮಗೆ ಜಾಮೀನು ನೀಡಲಾಗಿದ್ದು, ಅದನ್ನೇ ಇಲ್ಲಿಯೂ ಪರಿಗಣಿಸಬೇಕು ಎಂದು ವೇಣುಗೋಪಾಲ್ ಧೂತ್ ಕೋರ್ಟ್​​ಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚರ್, ಪತಿ ದೀಪಕ್‌ಗೆ ಜಾಮೀನು ಮಂಜೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.