ETV Bharat / bharat

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಿಂದ ಕೆಳಗಿಳಿಸುವುದೇ ದೇಶಭಕ್ತಿಯ ಶ್ರೇಷ್ಠ ಕಾರ್ಯ: ಕೇಜ್ರಿವಾಲ್​

author img

By ETV Bharat Karnataka Team

Published : Oct 23, 2023, 1:12 PM IST

ಎರಡು ಅವಧಿಗೆ ಅಧಿಕಾರದಲ್ಲಿದ್ದರೂ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

Delhi CM Arvind Kejriwal
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕುವುದು ದೇಶಭಕ್ತಿಯ ಶ್ರೇಷ್ಠ ಕಾರ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ. ತಮ್ಮ ಚುನಾವಣಾ ಕ್ಷೇತ್ರವಾದ ನವದೆಹಲಿಯಲ್ಲಿ ಪಕ್ಷದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್​, ಕೇಸರಿ ಪಕ್ಷ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

"ನಮ್ಮ ಪಕ್ಷದ ಸ್ವಯಂಸೇವಕರು ಯಾರೂ ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಆದರೂ ನನ್ನ ಕ್ಷೇತ್ರದ ಜನರು ಸ್ವಯಂಸೇವಕರ ಕಾರ್ಯಕ್ಕೆ ಅವರನ್ನು ಶ್ಲಾಘಿಸುತ್ತಾರೆ. ನಮ್ಮ ಪಕ್ಷ ಕೂಡ ರಾಜಕೀಯ ಹಿನ್ನೆಲೆ ಹೊಂದಿರುವ ಪಕ್ಷ ಅಲ್ಲ. ನಾನೂ, ಮನೀಶ್​ ಸಿಸೋಡಿಯಾ ಸೇರಿದಂತೆ ಎಎಪಿಯ ಹಿರಿಯ ನಾಯಕರು ಕೂಡ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ನಾವೆಲ್ಲರೂ ಆಮ್​ ಆದ್ಮಿ. ಇತರ ಪಕ್ಷಗಳ ರಾಜಕಾರಣಿಗಳು ಸಾಮಾನ್ಯವಾಗಿ ಗೂಂಡಾಗಿರಿ ಮಾಡುವುದನ್ನು ನೋಡುತ್ತಿದ್ದರೆ, ಆಪ್​ನವರು ಸಭ್ಯರಾಗಿರುವುದರಿಂದ ಜನರು ಇಷ್ಟಪಡುತ್ತಿದ್ದಾರೆ. ಇದು ಆಪ್​ನ ಟ್ರೇಡ್​ಮಾರ್ಕ್​." ಎಂದು ಹೇಳಿದರು.

"ಬಿಜೆಪಿ ಎರಡನೇ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ದೇಶವನ್ನು ಪ್ರಗತಿ ಪಥದತ್ತ ಮುನ್ನಡೆಸಬಹುದಿತ್ತು. ಆದರೆ, ಬಿಜೆಪಿ ಅದನ್ನು ಮಾಡಲಿಲ್ಲ. ಇಂದು ನಾವು ನೋಡಿದರೆ, ದೇಶದ ವಾತಾವರಣ ಎಲ್ಲ ಕಡೆ ಹದಗೆಟ್ಟಿದೆ. ಇಂತಹ ತೀವ್ರವಾದ ಧ್ರುವೀಕರಣ ಸಮಾಜದಲ್ಲಿ ಎಂದಿಗೂ ಕಂಡು ಬಂದಿಲ್ಲ. ಇಷ್ಟು ಹೊಡೆದಾಟ, ಹಿಂಸಾಚಾರ, ಭ್ರಷ್ಟಾಚಾರ ಹಾಗೂ ಲೂಟಿಯನ್ನು ಹಿಂದೆಂದೂ ನೋಡಿರಲಿಲ್ಲ. ಎಲ್ಲಿಯೂ ಶಾಂತಿ ಇಲ್ಲ."

ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ದೇಶಪ್ರೇಮದ ಅತಿದೊಡ್ಡ ಕಾರ್ಯವಾಗಲಿದೆ. ಆಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಬಿಜೆಪಿಯವರು ತೆಗೆದುಕೊಂಡ ನಿರ್ಧಾರಗಳು ಯಾಕೆ ತೆಗೆದುಕೊಂಡಿದ್ದಾರೆ ಎನ್ನುವುದು ಯಾರಿಗೂ ಅರ್ಥವಾಗುವುದಿಲ್ಲ. 2016ರ ನೋಟು ಅಮಾನ್ಯೀಕರಣದಿಂದಾಗಿ ದೇಶದ ಆರ್ಥಿಕತೆ ಕನಿಷ್ಠ 10 ವರ್ಷಗಳ ಹಿಂದೆ ಹೋಗಿದೆ. ಅಷ್ಟೇ ಅಲ್ಲ, ಕಾರ್ಖಾನೆಗಳು ಮುಚ್ಚಿದವು, ವ್ಯವಹಾರಗಳು ಕಡಿಮೆಯಾಗಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ" ಎಂದು ಆರೋಪಿಸಿದರು.

"ಬಿಜೆಪಿ ಸರ್ಕಾರ ತಂದಿರುವ ಸರಕು ಮತ್ತು ಸೇವಾ ತೆರಿಗೆ ಯಾರಿಗೂ ಅರ್ಥವಾಗದಂತಹ ಸಂಕೀರ್ಣವಾಗಿದೆ. ಇದರ ಜೊತೆಗೆ ಅನೇಕ ದೊಡ್ಡ ಕೈಗಾರಿಕೋದ್ಯಮಿಗಳ ಹಿಂದೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಯನ್ನು ಬಿಟ್ಟಿದ್ದಾರೆ. ಅದಕ್ಕೆ ಸಾಕ್ಷಿಯೆಂದರೆ ಇತ್ತೀಚಿನ ವರ್ಷಗಳಲ್ಲಿ, 12 ಲಕ್ಷ ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿ ವಿದೇಶಿ ಪೌರತ್ವವನ್ನು ಪಡೆದುಕೊಂಡಿದ್ದಾರೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ" ಎಂದು ಟೀಕಿಸಿದರು.

"ಯಾವುದೇ ರೀತಿಯ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಬಿಜೆಪಿ ಆಶ್ರಯವಾಗಿದೆ. ಕಳ್ಳತನ, ಗೂಂಡಾ ಚಟುವಟಿಕೆಗಳು ಅಥವಾ ಕಿರುಕುಳದಲ್ಲಿ ತೊಡಗಿರುವ ಯಾರಾದರೂ ಬಿಜೆಪಿ ಪಕ್ಷಕ್ಕೆ ಸೇರಿದರೆ, ಯಾವುದೇ ತನಿಖಾ ಸಂಸ್ಥೆ ಅವರನ್ನು ಮುಟ್ಟಲು ಧೈರ್ಯ ಮಾಡುವುದಿಲ್ಲ. ಕಳ್ಳರು, ಗೂಂಡಾಗಳು ಮತ್ತು ಮಹಿಳೆಯರನ್ನು ಚುಡಾಯಿಸುವವರು, ಅವರೆಲ್ಲರೂ ಅವರ ಪಕ್ಷದಲ್ಲಿದ್ದಾರೆ" ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

"ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರ ಇಂದು ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಇದುವರೆಗೂ ಇದೆಲ್ಲದಕ್ಕೆ ಅಂತ್ಯ ಹಾಡಲು ಪರ್ಯಾಯವಿಲ್ಲ ಎಂದು ಜನರು ಹೇಳುತ್ತಿದ್ದರು, ಆದರೆ ಈಗ ಎಲ್ಲರೂ INDIA ವನ್ನು (ವಿರೋಧ ಪಕ್ಷಗಳ ಒಕ್ಕೂಟ) ಪರ್ಯಾಯವಾಗಿ ನೋಡುತ್ತಿದ್ದಾರೆ. ಭಾರತ ಮೈತ್ರಿಕೂಟ ರಚನೆಯಾದಾಗಿನಿಂದ, INDIA ಉಳಿದುಕೊಂಡರೆ, 2024 ರಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದಿಲ್ಲ ಎಂದು ಹೇಳುವ ಅನೇಕ ಸಂದೇಶಗಳು ನನಗೆ ಬಂದಿವೆ" ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ : ತೆಲಂಗಾಣ ಚುನಾವಣೆ: ಸಿಎಂ ಕೆಸಿಆರ್ ವಿರುದ್ಧ ಇಬ್ಬರು ಕಣಕ್ಕೆ; ಮೂವರು ಸಂಸದರು ಸೇರಿ 52 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.