ETV Bharat / bharat

ಶೋಷಣೆಗೊಳಗಾದ ಮಹಿಳೆಯರ ಪಾಲಿಗೆ ಆಶಾಕಿರಣ: ಸ್ವಾವಲಂಬಿ ಜೀವನದ ದಾರಿ ತೋರಿದ ಹೇಮಲತಾ

author img

By

Published : Mar 7, 2023, 9:45 PM IST

ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನ - ಶೋಷಣೆಗೊಳಗಾದ ಮಹಿಳೆಯರಿಗೆ ಆಶಾಕಿರಣವಾಗಿರುವ ಹೇಮಲತಾ - ಬಡವರಿಗೆ ದಾರಿ ದೀಪವಾದ ಮಹಿಳೆ

gorakhpur-news-hemlata-became-the-support-of-needy-women-giving-employment-to-them-after-training
ಶೋಷಣೆಗೊಳಗಾದ ಮಹಿಳೆಯರ ಪಾಲಿಗೆ ಆಶಾಕಿರಣ : ಸ್ವಾವಲಂಬಿ ಜೀವನದ ದಾರಿ ತೋರಿದ ಹೇಮಲತಾ

ಗೋರಖ್‌ಪುರ (ಉತ್ತರಪ್ರದೇಶ): ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನ. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಶಿಕ್ಷಣ, ರಾಜಕೀಯ, ಸಿನೆಮಾ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ. ಅವಳು ತಾಯಿಯಾಗಿ, ಮಗಳಾಗಿ, ಸೊಸೆಯಾಗಿ ಹೀಗೆ ಸಮಾಜದಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಹೀಗೆ ಇತರರ ಬಾಳಿಗೆ ಬೆಳಕಾಗವವಳು ಮಹಿಳೆ.

ಹೀಗೆ ಇತರರ ಬಾಳಿಗೆ ಬೆಳಕಾದ ಮಹಿಳೆಯರಲ್ಲಿ ಗೋರಖ್​ಪುರ್​ ಜಿಲ್ಲೆಯ ಹೇಮಲತಾ ಓಜಾ ಅವರೂ ಒಬ್ಬರು. ನಿರ್ಗತಿಕ ಮಹಿಳೆಯರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು, ತಮ್ಮ ಕೌಶಲ್ಯ ಮತ್ತು ಸಮಾಜ ಸೇವೆಯ ಮೂಲಕ ಇಂದು ಅನೇಕ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಇವರು ಕೌಟುಂಬಿಕ ಪರಿಸ್ಥಿತಿಯಿಂದ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದೇ ಇರುವ ಅದೆಷ್ಟೋ ಮಹಿಳೆಯರಿಗೆ ಸರಿಯಾದ ದಾರಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕಿರುಕುಳಕ್ಕೆ ಒಳಗಾಗಿರುವ ಮಹಿಳೆಯರನ್ನು ರಕ್ಷಿಸಿ, ಕಾನೂನು ನೆರವು ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.

ಹೇಮಲತಾ ಓಜಾ ಅವರು ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಆದರೂ ತಮ್ಮ ಸ್ವಪ್ರಯತ್ನದಿಂದ ಸಾಧನೆ ಮಾಡಿ ಇಂದು ನೂರಾರು ಮಹಿಳೆಯರಿಗೆ ಆಸರೆಯಾಗಿದ್ದಾರೆ. ಇವರ ಈ ಸಮಾಜ ಸೇವೆಯನ್ನು ಗುರುತಿಸಿ ಹಲವು ದೊಡ್ಡ ವೇದಿಕೆಗಳಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಇನ್ನು ಓದು ಮತ್ತು ಬರಹದಲ್ಲಿ ಆಸಕ್ತಿ ಹೊಂದಿರುವ ಇವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ಜಡ್ಜ್ ಆಗಬೇಕೆಂಬ ಕನಸಿತ್ತು: ಪದವಿ ವ್ಯಾಸಂಗ ಮುಗಿಸಿ ಮದುವೆಯಾದ ಹೇಮಲತಾ ಅವರಿಗೆ ಎಲ್ಎಲ್ ಬಿ ಓದಿ ಜಡ್ಜ್ ಆಗಬೇಕು ಎಂಬ ಕನಸಿತ್ತು. ಆದರೆ ಮದುವೆಯ ನಂತರ ತಮ್ಮ ವೈಯಕ್ತಿಕ ಕಾರಣಗಳಿಂದ ಕನಸನ್ನು ಈಡೇರಿಸಿಕೊಳ್ಳಲು ಇವರಿಗೆ ಸಾಧ್ಯವಾಗಲಿಲ್ಲ. ಇನ್ನು ತಮ್ಮ ಸ್ವಗ್ರಾಮವನ್ನು ತೊರೆದ ಇವರ ಕುಟುಂಬ ನಗರಕ್ಕೆ ಬಂದು ಜೀವನ ಶುರು ಮಾಡಿದ್ದರು. ಇಲ್ಲಿ ಇವರ ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಲು ಶುರು ಮಾಡಿದರು. ಪದವಿ ವ್ಯಾಸಂಗ ಮಾಡಿದ್ದ ಹೇಮಲತಾ ಅವರಿಗೆ ಸುಮ್ಮನೆ ಕೂರಲು ಮನಸ್ಸಾಗಲಿಲ್ಲ. ಹೀಗಾಗಿ ಹೇಮಲತಾ ಅವರು ಕೆಲವರ ಸಹಕಾರದಿಂದ ಕರಕುಶಲ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿ ಇಂದು ಅವರ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಅಷ್ಟೇ ಅಲ್ಲದೆ ತಮ್ಮ ಕರಕುಶಲ ಕೌಶಲ್ಯವನ್ನು ಇತರ ಮಹಿಳೆಯರಿಗೆ ಹೇಳಿಕೊಡುವ ಮೂಲಕ ಅವರನ್ನೂ ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ್ದಾರೆ. ಇನ್ನು ಬರವಣಿಯಲ್ಲೂ ತೊಡಗಿಸಿಕೊಂಡಿರುವ ಇವರು, ಹಲವು ಪತ್ರಿಕೆ ಮತ್ತು ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಮಹಿಳೆಯರ ಸಬಲೀಕರಣದಲ್ಲಿ ತೊಡಗಿರುವ ಹೇಮಲತಾ : ತಮ್ಮ ಕರಕುಶಲ ವೃತ್ತಿಯನ್ನು ಇನ್ನಷ್ಟು ಬೆಳೆಸಲು ಇವರು ಡೂಡಾದಿಂದ 2 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಈ ಮೂಲಕ ಇತರ ಶೋಷಿತ ಮಹಿಳೆಯರಿಗೆ ಉದ್ಯೋಗ ನೀಡಿ ಅವರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಕರಕುಶಲ ಕೆಲಸದಲ್ಲಿ ಹಲವು ಶೋಷಿತ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ಈ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ.

ಮದರ್​ ತೆರೇಸಾರಂತೆ ಗುರುತಿಸಿಕೊಳ್ಳಬೇಕೆಂಬ ಆಸೆ : ಮದರ್ ತೆರೇಸಾ ಅವರಂತೆ ಗುರುತಿಸಿಕೊಳ್ಳುವುದೇ ಜೀವನದ ಗುರಿ ಎಂದು ಹೇಮಲತಾ ಹೇಳುತ್ತಾರೆ. ನಾನು ಜನರಿಗೆ ಏನನ್ನಾದರೂ ನೀಡಲು ಬಯಸುತ್ತೇನೆ. ಜೊತೆಗೆ ಶೋಷಣೆಗೊಳಗಾದ ಮಹಿಳೆಯರಿಗೆ ಆಶ್ರಮವನ್ನು ನಿರ್ಮಿಸಿ ಅವರ ಏಳ್ಗೆಗೆ ಶ್ರಮಿಸುವ ಹಂಬಲವನ್ನು ವ್ಯಕ್ತಪಡಿಸುತ್ತಾರೆ. ಹೇಮಲತಾ ಅವರ ಪ್ರಯತ್ನವನ್ನು ಶ್ಲಾಘಿಸುವ ಮಹಿಳೆಯರು, ಅವರ ಪ್ರಯತ್ನದಿಂದ ನಮ್ಮ ಜೀವನ ಹಸನಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಇನ್ನು ಹೇಮಲತಾ ಅವರು ಹಲವು ಪುಸ್ತಕಗಳನ್ನು, ಕವನ ಸಂಕಲನಗಳನ್ನು ಬರೆದಿದ್ದಾರೆ. ಈ ಪುಸ್ತಕಗಳಲ್ಲಿ ಕಶ್ಮಾಕಾಶ್, ಲೋ ಝುಕ್ ಗಯಾ ಅಸ್ಮಾನ್, ಪುರುಷೋತ್ತಮ್ ರಾಮ್, , ಯೇ ಕೈಸಿ ಬದ್ನಾಸಿಬಿ, ಏಕ್ ಕಪ್ ಚಾಯ್ ಔರ್ ಜಿಂದಗಿ, ಸ್ವರ್ಣ ಮಂಜರಿ, ಶಕ್ತಿಪುಂಜ್ ಮುಂತಾದ ಕವನ ಸಂಕಲನಗಳು ಪ್ರಮುಖವಾಗಿದೆ.

ಇಂದು ಹೇಮಲತಾ ಅವರು ಪ್ರತಿದಿನ ಸಂಕಷ್ಟದಲ್ಲಿರುವ ಅಸಹಾಯಕ ಮಹಿಳೆಯರಿಗೆ ದಾರಿ ದೀಪವಾಗಿದ್ದಾರೆ. ಸಹಾಯ ಮಾಡಲು ಸಾಧ್ಯವಾದಾಗ ನನಗೆ ನಿಜವಾದ ಗೌರವ ಮತ್ತು ಸಂತೋಷ ಸಿಗುತ್ತದೆ ಎಂದು ಹೇಮಲತಾ ಹೇಳುತ್ತಾರೆ.

ಇದನ್ನೂ ಓದಿ : ಮಹಿಳಾ ದಿನಾಚರಣೆ: ಮಹಿಳಾ ಪ್ರಯಾಣಿಕರಿಗೆ ಬಿಎಂಟಿಸಿಯಲ್ಲಿ ನಾಳೆ ಉಚಿತ ಪ್ರಯಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.