ETV Bharat / bharat

ಕಾಂಗ್ರೆಸ್​ನಲ್ಲಿ ಮತ್ತೆ ಕಿಡಿ ಹೊತ್ತಿಸಿದ ಕಪಿಲ್​ ಸಿಬಲ್​ ಹೇಳಿಕೆ: ಹಿರಿಯ ನಾಯಕನ ವಿರುದ್ಧ ಮುಗಿಬಿದ್ದ ಪಕ್ಷ ನಿಷ್ಠರು

author img

By

Published : Mar 16, 2022, 5:12 PM IST

Gandhi family-Salman Khurshid
Gandhi family-Salman Khurshid

Kapil Sibal statement on Gandhi family.. ಕಾಂಗ್ರೆಸ್​ ನಾಯಕತ್ವದ ಬಗ್ಗೆ 23 ಜನ ಭಿನ್ನಮತೀಯ ನಾಯಕರು ಮತ್ತೆ ಸಿಡಿದೆದ್ದಿದ್ದಾರೆ. ಗಾಂಧಿ ಕುಟುಂಬ ಕಾಂಗ್ರೆಸ್​ ಪಕ್ಷದ ನಾಯಕತ್ವದಿಂದ ಕೆಳಗಿಯಬೇಕೆಂದು ಕಪಿಲ್​ ಸಿಬಲ್​ ಆಗ್ರಹಿಸಿದ್ದಾರೆ. ಆದರೆ, ಇತರೆ ನಾಯಕರು ಸಿಬಲ್​ ವಿರುದ್ಧ ಮುಗಿಬಿದ್ದಿದ್ದಾರೆ.

ನವದೆಹಲಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕಾಂಗ್ರೆಸ್​ನಲ್ಲಿ ಮತ್ತೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್​ ನಾಯಕತ್ವದ ಬಗ್ಗೆ ಅದೇ ಪಕ್ಷದ ಭಿನ್ನಮತೀಯ ಹಿರಿಯ ನಾಯಕರು ಪ್ರಶ್ನೆ ಎತ್ತುತ್ತಿದ್ದರೆ, ಗಾಂಧಿ ಕುಟುಂಬದ ಆಪ್ತರು ನಾಯಕತ್ವವನ್ನು ಬಲವಾಗಿ ಸಮರ್ಥಿಕೊಳ್ಳುತ್ತಿದ್ದಾರೆ. ಇದರಿಂದ ಪಕ್ಷದ ಪ್ರಮುಖ ನಾಯಕರ ನಡುವೆಯೇ ಒಂದು ರೀತಿಯಲ್ಲಿ ಮಾತಿನ ದಾಳಿ-ಪ್ರತಿ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಹೌದು, ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್​ ರಾಜಕೀಯವಾಗಿ ತುಂಬಾ ಕ್ಷೀಣಿಸುತ್ತಿದೆ. ಅನೇಕ ಚುನಾವಣೆಗಳಲ್ಲಿ ಸಾಲು-ಸಾಲು ಸೋಲುಗಳನ್ನು ಅನುಭವಿಸುತ್ತಲೇ ಇದೆ. ಇದೀಗ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಉತ್ತರ ಪ್ರದೇಶ, ಪಂಜಾಬ್​, ಉತ್ತರಾಖಂಡ್​, ಮಣಿಪುರ ಮತ್ತು ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿಬಿಟ್ಟಿದೆ. ಅದರಲ್ಲೂ ಪಂಜಾಬ್​ನಲ್ಲಿ ಇದ್ದ ಅಧಿಕಾರವನ್ನು ಉಳಿಸಿಕೊಳ್ಳುವಲ್ಲೂ ಕಾಂಗ್ರೆಸ್​ ವಿಫಲವಾಗಿದೆ. ಗೋವಾದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್​ ಹೊಂದಿತ್ತು. ಆದರೆ, ಅಲ್ಲೂ ಕೂಡ ಕಾಂಗ್ರೆಸ್​ ವಿಫಲವಾಗಿ ಬಿಟ್ಟಿದೆ. ಹೀಗಾಗಿ ಕಾಂಗ್ರೆಸ್​ ಹೀನಾಯ ಸ್ಥಿತಿ ತಲುಪಿ ಬಿಟ್ಟಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಕಿಡಿ ಹೊತ್ತಿಸಿದ ಕಪಿಲ್​ ಸಿಬಲ್​ ಹೇಳಿಕೆ: ಈ ನಡುವೆ ಕಾಂಗ್ರೆಸ್​ ನಾಯಕತ್ವದ ಬಗ್ಗೆ ಕಪಿಲ್​ ಸಿಬಲ್​, ಆನಂದ ಶರ್ಮಾ​, ಗುಲಾಂ ನಬಿ ಆಜಾದ್​ ಸೇರಿದಂತೆ 23 ಜನ ಭಿನ್ನಮತೀಯ ನಾಯಕರು ಮತ್ತೆ ಸಿಡಿದೆದ್ದಿದ್ದಾರೆ. ಗಾಂಧಿ ಕುಟುಂಬ ಕಾಂಗ್ರೆಸ್​ ಪಕ್ಷದ ನಾಯಕತ್ವದಿಂದ ಕೆಳಗಿಯಬೇಕು ಮತ್ತು ಮತ್ತೊಬ್ಬರಿಗೆ ಅವಕಾಶ ಕೊಡಬೇಕೆಂದು ಕೇಂದ್ರದ ಮಾಜಿ ಸಚಿವ ಕಪಿಲ್​ ಸಿಬಲ್​ ಆಗ್ರಹಿಸಿದ್ದಾರೆ.

ಈ ಹೇಳಿಕೆಗೆ ಕಾಂಗ್ರೆಸ್​​ನ ಇತರೆ ನಾಯಕರು ಅಸಮಾಧಾನ ಹೊರಹಾಕಿ ಸಿಬಲ್​ ವಿರುದ್ಧ ಮುಗಿಬಿದ್ದಿದ್ದಾರೆ. ಯಾರು ಚುನಾವಣೆಯನ್ನೇ ಎದುರಿಸಿಲ್ಲವೋ, ಅಂತಹವರು ಕೇವಲ ಹೇಳಿಕೆ ಮಾತ್ರ ನೀಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಪಕ್ಷದಲ್ಲಿ ಸ್ಥಾನ ಪಡೆಯಲು ಕಪಿಲ್​ ಸಿಬಲ್​ ಯಾವ ಚುನಾವಣೆಯಲ್ಲಿ ಹೋರಾಡಿದ್ದಾರೆ ಎಂದು ಸಲ್ಮಾನ್​ ಖುರ್ಷಿದ್​​ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯ ಸೋಲಿಗೆ ತಲೆದಂಡ.. ಐದು ರಾಜ್ಯಗಳ ಕಾಂಗ್ರೆಸ್​ ಅಧ್ಯಕ್ಷರ ರಾಜೀನಾಮೆಗೆ ಸೋನಿಯಾ ಸೂಚನೆ..

ಅಲ್ಲದೇ, ಗಾಂಧಿ ಕುಟುಂಬ ಕಾಂಗ್ರೆಸ್​​ನ್ನು ಒಂದುಗೂಡಿಸುವ ಯಂತ್ರ. ಸಂಕಷ್ಟದಲ್ಲಿ ಅವರ ನಾಯಕತ್ವವೇ ಒಳ್ಳೆಯದು. ಕಾಂಗ್ರೆಸ್​​ನ ಜನ ರಾಹುಲ್​ ಗಾಂಧಿ ಪೂರ್ಣಪ್ರಮಾಣದ ಅಧ್ಯಕ್ಷರಾಗಬೇಕೆಂದು ಬಯಸಿದ್ದಾರೆ. ಪಕ್ಷದ ಆಂತರಿಕ ಚುನಾವಣೆಗಳ ನಂತರ ರಾಹುಲ್​ ಈ ಕೆಲಸವನ್ನು ಮಾಡುತ್ತಾರೆ ಎಂದು ನಾನು ನಂಬಿದ್ದೇನೆ ಎಂದು ಖುರ್ಷಿದ್​ ಹೇಳಿದ್ದಾರೆ.

ಖರ್ಗೆ-ಅಧೀರ್​ ರಂಜನ್​ ಚೌಧರಿ ಸಹ ವಾಗ್ದಾಳಿ: ಅದೇ ರೀತಿಯಾಗಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಕಪಿಲ್​ ಸಿಬಲ್ ವಿರುದ್ಧ ಕಿಡಿಕಾರಿದ್ದಾರೆ. ಕಪಿಲ್​ ಸಿಬಲ್​ ಒಳ್ಳೆಯ ವಕೀಲರಾಗಿರಬಹುದು. ಆದರೆ, ಅವರು ಕಾಂಗ್ರೆಸ್​ಗೆ ಒಳ್ಳೆಯ ನಾಯಕರಲ್ಲ. ಕಾಂಗ್ರೆಸ್​ ಪಕ್ಷದ ಪರವಾಗಿ ಕೆಲಸ ಮಾಡಲು ಯಾವುದೇ ಗ್ರಾಮಕ್ಕೂ ಕಪಿಲ್​ ಸಿಬಲ್ ಹೋಗಿಲ್ಲ. ಅವರು ಉದ್ದೇಶಪೂರ್ವಕವಾಗಿಯೇ ಪಕ್ಷವನ್ನು ಬಲಹೀನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಯಾರೊಬ್ಬರಿಂದಲೂ ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್​ ಪಕ್ಷವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ನಾಯಕರಾದ ಅಧೀರ್​ ರಂಜನ್​ ಚೌಧರಿ ಸಹ ಕಾಂಗ್ರೆಸ್​​ ಪಕ್ಷದ ಬೆಂಬಲವಿಲ್ಲದೇ ಕಪಿಲ್​ ಸಿಬಲ್​ ಏನಾದರೂ ಒಂದು ಸಾಧಿಸಿದ ಉದಾಹರಣೆಯನ್ನು ತೋರಿಸಲಿ. ತಮ್ಮ ಸಿದ್ಧಾಂತದ ಬಗ್ಗೆ ಸ್ವಂತ ಬಲದಿಂದ ಹೋರಾಡಲಿ. ಅದು ಬಿಟ್ಟು ಎಸಿ ರೂಮ್​ನಲ್ಲಿ ಕುಳಿತು ಸಂದರ್ಶನಗಳನ್ನು ನೀಡಿದರೆ ಬರುವುದಾದರೂ ಏನು ಎಂದು ಟೀಕಿಸಿದ್ದಾರೆ.

ಛತ್ತೀಸ್​ಗಢ್​ ಮುಖ್ಯಮಂತ್ರಿ ಭೂಪೇಶ್​ ಬಾಘೇಲ್ ಕೂಡ ಸಿಬಲ್​ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಚುನಾವಣೆಯನ್ನೇ ಎದುರಿಸದವರು ಕೇವಲ ಹೇಳಿಕೆ ಮಾತ್ರ ನೀಡುತ್ತಾರೆ. ಪಕ್ಷದ ಕಾರ್ಯಕರ್ತರು ಗಾಂಧಿ ಕುಟುಂಬದ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇತ್ತ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​, ಕಪಿಲ್​ ಸಿಬಲ್​ ಕಾಂಗ್ರೆಸ್​ ಸಂಸ್ಕೃತಿಯ ವ್ಯಕ್ತಿಯೇ ಅಲ್ಲ. ಅವರಿಗೆ ಕಾಂಗ್ರೆಸ್​​ನ ಎಬಿಸಿಡಿ ಸಹ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಚುನಾವಣಾ ರಾಜಕೀಯದ ಮೇಲೆ ಫೇಸ್​ಬುಕ್​, ಟ್ವಿಟರ್​ ಪ್ರಭಾವ ಕೊನೆಗಾಣಿಸಿ: ಸೋನಿಯಾ ಗಾಂಧಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.