ಕೃಷ್ಣಾ (ಆಂಧ್ರ ಪ್ರದೇಶ): ಹಳೆ ಬಾವಿಯೊಂದನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಅದರೊಳಗೆ ಇಳಿದು ಹೂಳು ಎತ್ತುವಾಗ ನಾಲ್ವರು ಮೃತಪಟ್ಟ ದಾರುಣ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಕೊಂಡ ರಂಗ, ವಂಜುಳಾ ರಾಮರಾವ್, ಲಕ್ಷ್ಮಣರಾವ್ ಮತ್ತು ಪುಪ್ಪಾಳ ಶ್ರೀನಿವಾಸ ರಾವ್ ಎಂದು ಗುರುತಿಸಲಾಗಿದ್ದು, ಹಲವು ದಿನಗಳಿಂದ ಬಾವಿ ಬಳಕೆಯಾಗದ ಕಾರಣ ವಿಷಾನಿಲ ಹರಡಿ ಉಸಿರುಗಟ್ಟಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಕೊಂಡ ರಂಗ ಎಂಬಾತನ ಮನೆ ಸಮೀಪದ ಬಾವಿ ಹಲವು ದಿನಗಳಿಂದ ಹೂತು ಹೋಗಿತ್ತು. ಇದರಲ್ಲಿ ಚರಂಡಿ ನೀರು ಹರಿದು ಹಾಳಾಗಿತ್ತು. ಆದರೆ, ಈಚೆಗೆ ಸುರಿದ ಮಳೆಯಿಂದ ಬಾವಿಯಲ್ಲಿ ನೀರು ನಿಂತಿತ್ತು. ಹೀಗಾಗಿ ಅಂತರ್ಜಲ ಸಂರಕ್ಷಿಸುವ ಉದ್ದೇಶದಿಂದ ಆತ ಹೂಳು ತೆಗೆದು ಬಾವಿಯನ್ನು ಸ್ವಚ್ಛಗೊಳಿಸಲು ಚಿಂತನೆ ನಡೆಸಿದ್ದರು.
ಅಂತೆಯೇ, ಕೊಂಡ ರಂಗ ಹಾಗೂ ವಂಜುಳಾ ರಾಮರಾವ್ ಮತ್ತು ಇತನ ಮಗ ಲಕ್ಷ್ಮಣರಾವ್ ಹಾಗೂ ಕೆಲಸಗಾರ ಶ್ರೀನಿವಾಸ ರಾವ್ ಸೇರಿಕೊಂಡು ಹೂಳು ಮೇಲೆತ್ತುತ್ತಿದ್ದರು. ಆದರೆ, ಸಂಜೆ ನಾಲ್ಕು ಗಂಟೆ ಸುಮಾರಿಗೆ ಏಕಾಏಕಿ ನಾಲ್ವರೂ ಕೂಡ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಷಯ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಷಾನಿಲದಿಂದ ಈ ದುರಂತ ನಡೆದಿರುಬಹುದು ಎಂದು ಪೊಲೀಸರು ಸಹ ಶಂಕೆ ವ್ಯಕ್ತಪಡಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ: ಬೆಂಗಳೂರು, ಚೆನ್ನೈನಲ್ಲಿ ಆಂಧ್ರ ಸಂಸದನ ನಿವಾಸಗಳ ಮೇಲೆ ಇಡಿ ದಾಳಿ