ಹೈದರಾಬಾದ್: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ಸೇರಿ ಐದು ರಾಜ್ಯಗಳಲ್ಲಿ 40 ಸ್ಥಳಗಳಲ್ಲಿ ಇಂದು ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿ ಶೋಧ ನಡೆಸುತ್ತಿದೆ. ಇದರ ಭಾಗವಾಗಿಯೇ ಆಂಧ್ರದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಅವರ ವಿವಿಧ ನಿವಾಸಗಳ ಮೇಲೂ ಇಡಿ ದಾಳಿ ಮಾಡಿದೆ.
ಬೆಂಗಳೂರು, ಚೆನ್ನೈ ಮತ್ತು ಆಂಧ್ರದ ನೆಲ್ಲೂರು ಹಾಗೂ ದೆಹಲಿಯಲ್ಲಿ ಸಂಸದ ಮಾಗುಂಟ ಶ್ರೀನಿವಾಸುಲುರೆಡ್ಡಿ ಅವರಿಗೆ ಸೇರಿದ ನಿವಾಸಗಳಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ನೆಲ್ಲೂರಿನ ರಾಯಜಿ ಸ್ಟ್ರೀಟ್ ನಿವಾಸ ಹಾಗೂ ದೆಹಲಿಯ ಲೋಧಿ ರಸ್ತೆಯಲ್ಲಿರುವ ಬಂಗಲೆ ಸಂಖ್ಯೆ 95ರಲ್ಲಿ ಬೆಳಗ್ಗೆಯಿಂದಲೇ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ: ಬೆಂಗಳೂರು, ಮಂಗಳೂರು ಸೇರಿ ದೇಶದ 40 ಕಡೆ ಇಡಿ ದಾಳಿ
ಏಕಕಾಲಕ್ಕೆ ಈ ದಾಳಿ ಮಾಡಲಾಗಿದ್ದು, ಸಿಬ್ಬಂದಿಯನ್ನೂ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ನಿವಾಸದೊಳಗೆ ಯಾರೂ ಬರದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಇತ್ತ, ಹೈದರಾಬಾದ್ನ ರಾಯದುರ್ಗಂ, ದೋಮಲಗುಡ ಪ್ರದೇಶಗಳಲ್ಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದೋಮಲಗುಡ ಶ್ರೀಸಾಯಿಕೃಷ್ಣ ರೆಸಿಡೆನ್ಸಿಯಲ್ಲಿರುವ ಗೋರಂಟ್ಲಾ ಅಸೋಸಿಯೇಟ್ಸ್ ಕಚೇರಿ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಲಾಗುತ್ತಿದೆ. ದೆಹಲಿಯಿಂದ ಬಂದಿರುವ ಇಡಿ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ 25 ತಂಡಗಳನ್ನು ರಚಿಸಲಾಗಿದ್ದು, ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ.
ಈ ಹಿಂದೆ ದೆಹಲಿ ಮದ್ಯ ನೀತಿ ಹಗರಣ ಸಂಬಂಧವೇ ಇಡಿ ಹೈದರಾಬಾದ್ನಲ್ಲೂ ಶೋಧ ಕಾರ್ಯ ನಡೆಸಿತ್ತು. ರಾಬಿನ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ರಾಬಿನ್ ಡಿಸ್ಟ್ರಿಬ್ಯೂಷನ್ ಎಲ್ಎಲ್ಪಿ ಕಚೇರಿಗಳೆ ಮೇಲೆ ದಾಳಿ ಮಾಡಲಾಗಿತ್ತು.
ಇದನ್ನೂ ಓದಿ: ಆಮ್ ಆದ್ಮಿ ಪಕ್ಷದ ಮಾನ್ಯತೆ ರದ್ದತಿಗೆ ನಿವೃತ್ತ ಅಧಿಕಾರಿಗಳಿಂದ ಚು.ಆಯೋಗಕ್ಕೆ ಪತ್ರ