ETV Bharat / bharat

ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ನೇತೃತ್ವ, ಮೈತ್ರಿ ಸರ್ಕಾರ ರಚನೆ: ಎನ್​ಡಿಎ ನಿರ್ಣಯ

author img

By

Published : Jul 19, 2023, 8:10 AM IST

ಎನ್​ಡಿಎ ನಿರ್ಣಯ ಅಂಗೀಕಾರ
ಎನ್​ಡಿಎ ನಿರ್ಣಯ ಅಂಗೀಕಾರ

ದೆಹಲಿಯಲ್ಲಿ ಮಂಗಳವಾರ ನಡೆದ ಎನ್​ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಎಲ್ಲ ಅಂಗಪಕ್ಷಗಳು ನಿರ್ಣಯ ಅಂಗೀಕರಿಸಿದವು.

ನವದೆಹಲಿ: ಬೆಂಗಳೂರಿನಲ್ಲಿ 26 ಪ್ರತಿಪಕ್ಷಗಳು ಸೇರಿ ನಡೆಸಿದ ಸಭೆಗೆ ಸೆಡ್ಡು ಹೊಡೆದು ದೆಹಲಿಯಲ್ಲಿ 39 ಪಕ್ಷಗಳನ್ನು ಒಟ್ಟುಗೂಡಿಸಿ ಶಕ್ತಿ ಪ್ರದರ್ಶನ ಮಾಡಿದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮತ ಮೈತ್ರಿಕೂಟ (ಎನ್​ಡಿಎ), ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲೇ ಮುಂಬರುವ ಲೋಕಸಭೆ ಚುನಾವಣೆ ಎದುರಿಸುವ ನಿರ್ಣಯ ಪಾಸು ಮಾಡಿದೆ. 2024ರ ಚುನಾವಣೆಯಲ್ಲಿ ಈ ಹಿಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರ ರಚಿಸುವ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ದೆಹಲಿಯ ಅಶೋಕ​ ಹೋಟೆಲ್​ನಲ್ಲಿ ಮಂಗಳವಾರ 4 ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಎನ್​ಡಿಎ ಸಭೆ ನಡೆಸಲಾಯಿತು. ಬಿಜೆಪಿ ತನ್ನ ಹಳೆಯ ಮಿತ್ರರನ್ನು ಮತ್ತೆ ಒಂದೇ ವೇದಿಕೆಗೆ ತಂದು ಬಲಪ್ರದರ್ಶನ ನಡೆಸಿತು.

'ದಿಕ್ಕುದೆಸೆಯಿಲ್ಲದ ಪ್ರತಿಪಕ್ಷಗಳು': ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವೃಥಾ ಸುಳ್ಳು ಆರೋಪ ಮಾಡುತ್ತಿವೆ. ಇವೆಲ್ಲವೂ ಆಧಾರರಹಿತವಾಗಿವೆ. ದಿಕ್ಕು ದೆಸೆಯಿಲ್ಲದೇ ಪ್ರತಿಪಕ್ಷಗಳು ನಡೆದುಕೊಳ್ಳುತ್ತಿವೆ. ಈ ಎಲ್ಲ ನಡೆಗಳನ್ನು ದೇಶದ ಜನರು ತಿರಸ್ಕರಿಸಲಿದ್ದಾರೆ. ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡುವ ಮೂಲಕ ನವಭಾರತ ನಿರ್ಮಾಣದ ಬಗ್ಗೆ ಎನ್​ಡಿಎ ಒಕ್ಕೂಟ ಅಂಗೀಕರಿಸಿದ ಗೊತ್ತುವಳಿಯಲ್ಲಿದೆ.

ಪ್ರಧಾನಿ ಮೋದಿ, ಜೆ.ಪಿ. ನಡ್ಡಾ ಸೇರಿದಂತೆ ಎನ್​ಡಿಎ ಅಂಗಪಕ್ಷಗಳ ಅಧ್ಯಕ್ಷರಿಗೆ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಲಾಯಿತು. ಎಲ್ಲರೂ ಸಭೆಯಲ್ಲಿ ಮಂಡಿಸಲಾದ ಗೊತ್ತುವಳಿಯನ್ನು ಸಂಪೂರ್ಣ ಒಪ್ಪಿಕೊಳ್ಳುವುದಾಗಿ ಹೇಳಿದರು. ಇದರ ಜತೆಗೆ ಹಿಂದಿನ ಲೋಕಸಭೆ ಚುನಾವಣೆಗಿಂತ ಹೆಚ್ಚು ಸ್ಥಾನ ಪಡೆದು ಎನ್​ಡಿಎ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾದೇಶಿಕ ಪಕ್ಷಗಳ ಒಗ್ಗಟ್ಟು: ನಿಶಾದ್ ಪಕ್ಷದ ಸಂಜಯ್ ನಿಶಾದ್ ಮಾತನಾಡಿ, "ದೇಶಾದ್ಯಂತ ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರು ಸಭೆಗೆ ಬಂದಿದ್ದಾರೆ. ಇದು ದೇಶವನ್ನು ಮತ್ತೊಂದು ಮಜಲಿಗೆ ಕರೆದೊಯ್ಯಲಿದೆ. ಹಿಂದಿನ ಸರ್ಕಾರಗಳು ಎಲ್ಲ ಜಾತಿ ಮತ್ತು ಧರ್ಮದವರಿಗೆ ಅನ್ಯಾಯ ಮಾಡಿವೆ. ತುಳಿತಕ್ಕೊಳಗಾದ ಸಮುದಾಯಗಳನ್ನು ನಿರ್ಲಕ್ಷಿಸಿವೆ. ಇದೆಲ್ಲವನ್ನೂ ಮೆಟ್ಟಿ ನಿಲ್ಲಲು ಎನ್​ಡಿಎ ಸರ್ಕಾರ ರಚನೆ ಅಗತ್ಯ" ಎಂದು ಹೇಳಿದರು.

"ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಭಿವೃದ್ಧಿ ಪರ ಕೆಲಸ ಮಾಡುತ್ತಿದೆ. ಎನ್‌ಡಿಎಯ ಅಂಗಪಕ್ಷಗಳು ಒಗ್ಗಟ್ಟಿನಿಂದ, ವಿಶ್ವಾಸದಿಂದ ಕಳೆದ ಬಾರಿ ಗೆದ್ದಿದ್ದಕ್ಕಿಂತ ಹೆಚ್ಚು ಸ್ಥಾನಗಳನ್ನು 2024 ರ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಉತ್ತರ ಪ್ರದೇಶದ 80 ರಲ್ಲಿ 80 ಸ್ಥಾನಗಳಲ್ಲಿ ಗೆಲುವು ಸಾಧಿಸಲಾಗುವುದು" ಎಂದರು.

ದೀನದಲಿತರ ಅಭ್ಯುದಯ: ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂಪ್ರಕಾಶ್ ರಾಜ್‌ಭರ್ ಮಾತನಾಡಿ, "ದೀನದಲಿತರ ಅಭ್ಯುದಯಕ್ಕಾಗಿ ಮಾಡುತ್ತಿರುವ ಕೆಲಸಕ್ಕಾಗಿ ಎನ್‌ಡಿಎ ಮೈತ್ರಿಕೂಟವನ್ನು ತಮ್ಮ ಪಕ್ಷ ಸೇರಿದೆ. ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಬೆಂಬಲವಾಗಿ ಪಕ್ಷ ನಿಲ್ಲಲಿದೆ" ಎಂದು ಹೇಳಿದರು.

ಅಪ್ನಾ ದಳ ಪಕ್ಷದ ಅನುಪ್ರಿಯಾ ಪಟೇಲ್ ಮಾತನಾಡಿ, "ಎನ್‌ಡಿಎ ರಚನೆಯಾಗಿ 25 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಅದರ ಅಂಗ ಪಕ್ಷಗಳು ಮತ್ತೆ ಒಂದೇ ವೇದರಿಕೆಯಲ್ಲಿ ಸೇರಿವೆ. ಏಕತೆ ಮತ್ತು ಒಗ್ಗಟ್ಟಿನ ಸಂದೇಶವನ್ನು ನೀಡಿದ್ದೇವೆ. 2014, 2019ರ ಚುನಾವಣೆಯಲ್ಲಿ ಜನರು ಎನ್‌ಡಿಎ ಮೈತ್ರಿಕೂಟಕ್ಕೆ ಆಶೀರ್ವಾದ ನೀಡಿದ್ದು, ಮುಂದಿನ ಚುನಾವಣೆಯಲ್ಲೂ ಇದೇ ಪ್ರೀತಿ ಸಿಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ INDIA ಎಂದು ನಾಮಕರಣ: ಸುದ್ದಿಗೋಷ್ಠಿಯಲ್ಲಿ ಖರ್ಗೆ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.