ETV Bharat / bharat

ದೀಪಾವಳಿ ರಜೆಗೆ ಹೋದ ಮಹಾರಾಷ್ಟ್ರ ಕುಟುಂಬ ರಾಜಸ್ಥಾನದಲ್ಲಿ ದುರ್ಮರಣ: ಮೂವರು ಮಕ್ಕಳು, ದಂಪತಿ ಸಾವು

author img

By ETV Bharat Karnataka Team

Published : Nov 13, 2023, 8:01 PM IST

Updated : Nov 13, 2023, 9:02 PM IST

ದೀಪಾವಳಿ ರಜೆ ಹಿನ್ನೆಲೆ ಭೇಟಿ ನೀಡಿದ್ದ ಮಹಾರಾಷ್ಟ್ರದ ಒಂದೇ ಕುಟುಂಬದ ಐದು ಸೇರಿ ಆರು ಮಂದಿ ರಾಜಸ್ಥಾನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ರಾಜಸ್ಥಾನದಲ್ಲಿ ರಸ್ತೆ ಅಪಘಾತ
ರಾಜಸ್ಥಾನದಲ್ಲಿ ರಸ್ತೆ ಅಪಘಾತ

ಬಾರ್ಮರ್​ (ರಾಜಸ್ಥಾನ) : ಇಲ್ಲಿನ ಬಾರ್ಮರ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಟ್ರಕ್ ಮತ್ತು ಅವರ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮಹಾರಾಷ್ಟ್ರ ಮೂಲದ ಧನರಾಜ್ (45), ಸ್ವರಾಂಜಲಿ (5), ಪ್ರಶಾಂತ್ (5), ಭಾಗ್ಯಲಕ್ಷ್ಮಿ (1), ಗಾಯತ್ರಿ (26) ದುರಂತದಲ್ಲಿ ಮೃತಪಟ್ಟವರು. ದೀಪಾವಳಿ ರಜೆಯ ಹಿನ್ನೆಲೆ ಕುಟುಂಬಸ್ಥರು ಸೇರಿಕೊಂಡು ಜೈಸಲ್ಮೇರ್‌ಗೆ ಭೇಟಿ ನೀಡಲು ತೆರಳುತ್ತಿದ್ದರು. ಈ ವೇಳೆ ಬಾರ್ಮರ್ ಜಿಲ್ಲೆಯಲ್ಲಿ ಎದುರಿಗೆ ಬಂದ ಟ್ರಕ್​ಗೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ. ಘರ್ಷಣೆಯಲ್ಲಿ ಕಾರಿನಲ್ಲಿದ್ದ ಮೂವರು ಮಕ್ಕಳು, ದಂಪತಿ ಸ್ಥಳದಲ್ಲೇ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಬ್ಬರು ತೀವ್ರ ಗಾಯಗೊಂಡಿದ್ದು, ಅವರು ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಪಘಾತ ಎಷ್ಟು ತೀವ್ರವಾಗಿದೆ ಎಂದರೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

ಪೊಲೀಸ್ ಅಧಿಕಾರಿ ಸುಖರಾಮ್ ಬಿಷ್ಣೋಯ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಸೋಮವಾರ ಸಂಜೆ 4 ಗಂಟೆಯ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 68 ರಲ್ಲಿ ಟ್ರಕ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಮಕ್ಕಳಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಬದಿಕುಳಿಯಲಿಲ್ಲ. ಡಿಕ್ಕಿಯಾದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

ಈಜಲು ಹೋದ ಐವರು ಮಕ್ಕಳು ಕೆರೆಪಾಲು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಬಿಹಾರದಲ್ಲಿ ಭಾರೀ ದುರಂತವೊಂದು ನಡೆದಿದೆ. ಸ್ನಾನಕ್ಕೆಂದು ಕೆರೆಗೆ ಹೋಗಿದ್ದ ನಾಲ್ವರು ಹೆಣ್ಣು ಮಕ್ಕಳು ಸೇರಿ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳ ಶವಗಳನ್ನು ಹೊರತೆಗೆಯಲಾಗಿದ್ದು, ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.

ಕೈಮೂರ್ ಜಿಲ್ಲೆಯ ರಾಂಪುರ ಬ್ಲಾಕ್‌ನ ಧಾವ್‌ಪೋಖರ್ ಗ್ರಾಮದಲ್ಲಿ ಈ ಶೋಕ ಸಂಗತಿ ಸೋಮವಾರ ನಡೆದಿದೆ. ಮಕ್ಕಳು ನೀರಿನಲ್ಲಿ ಮುಳುಗಿದ್ದನ್ನು ಕಂಡವರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ಐವರು ಮಕ್ಕಳ ಶವಗಳನ್ನು ಕೆರೆಯ ನೀರಿನಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಮಕ್ಕಳು ಕೆರೆಗೆ ಆಟವಾಡಲು ಹೋಗಿದ್ದರಾ ಅಥವಾ ಸ್ನಾನಕ್ಕೆ ತೆರಳಿದ್ದರಾ ಎಂಬುದರ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೀಪಾವಳಿ ಸಂಭ್ರಮದಲ್ಲಿ ಶೋಕ: ಬಿಹಾರದಲ್ಲಿ ಈಜಲು ಹೋದ ಐವರು ಮಕ್ಕಳು ಕೆರೆಯಲ್ಲಿ ಮುಳುಗಿ ಸಾವು

Last Updated : Nov 13, 2023, 9:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.