ETV Bharat / bharat

ಚಿತ್ರನಟಿ ಜಯಪ್ರದಾ ವಿರುದ್ಧ ನಾಲ್ಕನೇ ಬಾರಿಗೆ ಜಾಮೀನು ರಹಿತ ವಾರಂಟ್

author img

By ETV Bharat Karnataka Team

Published : Nov 17, 2023, 9:27 PM IST

ಮಾಜಿ ಸಂಸದೆ ಹಾಗೂ ಖ್ಯಾತ ಚಿತ್ರನಟಿ ಜಯಪ್ರದಾ ಅವರ ವಿರುದ್ಧ ಸಂಸದ - ಶಾಸಕರ ವಿಶೇಷ ನ್ಯಾಯಾಲಯ ನಾಲ್ಕನೇ ಬಾರಿಗೆ ಜಾಮೀನು ರಹಿತ ವಾರಂಟ್​ ಜಾರಿಗೊಳಿಸಿದೆ.

ಚಿತ್ರನಟಿ ಜಯಪ್ರದಾ
ಚಿತ್ರನಟಿ ಜಯಪ್ರದಾ

ರಾಂಪುರ (ಉತ್ತರ ಪ್ರದೇಶ) : ಮಾಜಿ ಸಂಸದೆ ಹಾಗೂ ಖ್ಯಾತ ಚಿತ್ರನಟಿ ಜಯಪ್ರದಾ ಅವರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಂಪುರದ ಸಂಸದ - ಶಾಸಕ ವಿಶೇಷ ನ್ಯಾಯಾಲಯ ಅವರಿಗೆ ನಾಲ್ಕನೇ ಬಾರಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಈ ವಾರಂಟ್ ಜಾರಿಯಾದ ನಂತರ ಈಗ ಪೊಲೀಸರು ಅವರನ್ನು ಎಲ್ಲಿಂದಲ್ಲಾದರೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬಹುದು. 2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

ಜಯಪ್ರದಾ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ರಾಂಪುರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಚುನಾವಣಾ ಪ್ರಚಾರದ ವೇಳೆ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ರಾಂಪುರದ ಸಂಸದ - ಶಾಸಕ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಪದೇ ಪದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಅವರು ವಿಚಾರಣೆಗೆ ಬರಲಿಲ್ಲ. ಇದೀಗ ನ್ಯಾಯಾಲಯದಿಂದ ಅವರ ಹೆಸರಿಗೆ ವಾರಂಟ್​ ಜಾರಿಯಾಗಿದೆ. ಈ ಹಿಂದೆ ವಾರಂಟ್ ಜಾರಿಯಲ್ಲಿದ್ದರೂ ಅವರು ವಿಚಾರಣೆಗೆ ಬಾರದಿದ್ದರಿಂದ ನ್ಯಾಯಾಲಯ ಜಾಮೀನು ರಹಿತ ವಾರಂಟ್​ ಹೊರಡಿಸಿದೆ.

ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 24 ಕ್ಕೆ ನಿಗದಿಪಡಿಸಿದೆ. ಜಯಪ್ರದಾ ಅವರೇ ನ್ಯಾಯಾಲಯಕ್ಕೆ ಹಾಜರಾಗಬೇಕು ಅಥವಾ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ಈ ವಿಷಯವಾಗಿ ಪ್ರಾಸಿಕ್ಯೂಷನ್ ಅಧಿಕಾರಿ ನೀರಜ್ ಕುಮಾರ್ ಅವರು ಮಾತನಾಡಿ, 2019 ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪ್ರದಾ ಅವರ ಪ್ರಕರಣವು ವಿಶೇಷ ನ್ಯಾಯಾಲಯದಲ್ಲಿದೆ ಎಂದು ಹೇಳಿದ್ದಾರೆ.

ಜಯಪ್ರದಾ ವಿರುದ್ಧ ಸ್ವರ್ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಚಾರ್ಜ್ ಶೀಟ್ ದಾಖಲಿಸಲಾಗಿತ್ತು. ಕಳೆದ ಹಲವು ದಿನಗಳಿಂದ ಜಯಪ್ರದಾ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ನ್ಯಾಯಾಲಯ ಶುಕ್ರವಾರ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಅಲ್ಲದೇ ಶ್ಯೂರಿಟಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ. ಇದೀಗ ಈ ಪ್ರಕರಣದ ಮುಂದಿನ ದಿನಾಂಕವನ್ನು ನವೆಂಬರ್ 24ಕ್ಕೆ ನಿಗದಿಗೊಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪ್ರದಾ ಕಳೆದ ಮೂರು ಬಾರಿಯೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಈ ಹಿಂದೆಯೂ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಗಿತ್ತು. ಶುಕ್ರವಾರ ನಾಲ್ಕನೇ ಬಾರಿಗೆ ಮತ್ತೆ ವಾರಂಟ್ ಜಾರಿಯಾಗಿದೆ. ಜಾಮೀನು ರಹಿತ ವಾರಂಟ್‌ನಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಹಕ್ಕನ್ನು ನ್ಯಾಯಾಲಯ ಪೊಲೀಸರಿಗೆ ನೀಡುತ್ತದೆ ಎಂದು ಪ್ರಾಸಿಕ್ಯೂಷನ್ ಅಧಿಕಾರಿ ನೀರಜ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ : ಜಯಪ್ರದಾಗೆ 6 ತಿಂಗಳ ಜೈಲು ಶಿಕ್ಷೆ ಖಚಿತಪಡಿಸಿದ ಮದ್ರಾಸ್​ ಹೈಕೋರ್ಟ್: ​15 ದಿನದಲ್ಲಿ ಶರಣಾಗಲು ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.