ETV Bharat / bharat

ವಿದ್ಯಾರ್ಥಿ ನವೀನ್ ಮೃತದೇಹ ಭಾರತಕ್ಕೆ ತರಲು ಕೇಂದ್ರದ ಪ್ರಯತ್ನ: ವಿದೇಶಾಂಗ ಸಚಿವ ಜೈಶಂಕರ್​

author img

By

Published : Mar 15, 2022, 5:24 PM IST

ಉಕ್ರೇನ್​​ನಲ್ಲಿ ಸಾವನ್ನಪ್ಪಿರುವ ಕರ್ನಾಟಕದ ವಿದ್ಯಾರ್ಥಿ ನವೀನ್ ಶೇಖರಪ್ಪ ಅವರ ಮೃತದೇಹ ಭಾರತಕ್ಕೆ ತರಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.

EAM Dr S Jaishankar
EAM Dr S Jaishankar

ನವದೆಹಲಿ: ಉಕ್ರೇನ್​​ನ ಖಾರ್ಕಿವ್​​ನಲ್ಲಿರುವ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ನವೀನ್​ ಶೇಖರಪ್ಪ ಪ್ರಾಣ ಕಳೆದುಕೊಂಡಿದ್ದು, ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.​​ ಜೈಶಂಕರ್​​ ತಿಳಿಸಿದರು.

ಉಕ್ರೇನ್​​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತಂದಿರುವ ವಿಷಯವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನವೀನ್ ಮೃತದೇಹವನ್ನು ಸುರಕ್ಷಿತವಾಗಿ ಭಾರತಕ್ಕೆ ತರುವ ಎಲ್ಲ ಪ್ರಯತ್ನಗಳು ಮುಂದುವರೆದಿದ್ದು, ಅದಕ್ಕಾಗಿ ಉಕ್ರೇನ್​​​ನಲ್ಲಿರುವ ನಮ್ಮ ರಾಯಭಾರ ಕಚೇರಿ ಕೆಲಸ ಮಾಡ್ತಿದೆ ಎಂದರು.

ನವೀನ್ ಮೃತದೇಹ ಭಾರತಕ್ಕೆ ವಾಪಸ್ ಕರೆತರುವ ಬಗ್ಗೆ ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವರ ಮಾತು

'ಆಪರೇಷನ್​ ಗಂಗಾ' ಮೂಲಕ ಇಲ್ಲಿಯವರೆಗೆ 90 ವಿಮಾನಗಳು ಕಾರ್ಯನಿರ್ವಹಿಸಿದ್ದು, ಇದರಲ್ಲಿ 76 ನಾಗರಿಕ ವಿಮಾನ, 14 ಭಾರತೀಯ ವಾಯುಪಡೆಯ ವಿಮಾನಗಳು ಸೇರಿಕೊಂಡಿವೆ. ರೋಮೆನಿಯಾ, ಪೋಲೆಂಡ್​, ಹಂಗೇರಿ ಮತ್ತು ಸ್ಲೋವೇಕಿಯಾದಿಂದ ಭಾರತೀಯ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತರಲಾಗಿದೆ ಎಂಬ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವರು, ಕೇಂದ್ರಕ್ಕೆ ಇದೊಂದು ಸವಾಲಿನ ಕೆಲಸವಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್​ ತೀರ್ಪಿಗೆ ಮೆಹಬೂಬಾ, ಒಮರ್​ ಅಸಮಾಧಾನ.. ನ್ಯಾಯಾಲಯದ ಸರ್ವಾನುಮತದ ತೀರ್ಪು ಎಂದ ಹೆಚ್​​ಡಿಡಿ

ಉಕ್ರೇನ್​ನ ವಿವಿಧ ನಗರಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತರಲು ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅನೇಕ ಸಲ ರಷ್ಯಾ ಹಾಗೂ ಉಕ್ರೇನ್​​ ಅಧ್ಯಕ್ಷರೊಂದಿಗೆ ಮಾತನಾಡಿದ್ದಾಗಿ ತಿಳಿಸಿರುವ ಜೈಶಂಕರ್​, ರೋಮೆನಿಯಾ, ಸ್ಲೋವಾಕ್ ರಿಪಬ್ಲಿಕ್​, ಹಂಗೇರಿ ಸೇರಿದಂತೆ ವಿವಿಧ ದೇಶಗಳ ಅಧ್ಯಕ್ಷರೊಂದಿಗೂ ನಮೋ ಮಾತನಾಡಿ ಸಹಾಯ ಕೇಳಿದ್ದಾಗಿ ತಿಳಿಸಿದರು.

ಉಕ್ರೇನ್​-ರಷ್ಯಾ ನಡುವಿನ ಸಂಘರ್ಷ ಆರಂಭವಾಗುವುದಕ್ಕೂ ಮುಂಚಿತವಾಗಿ ನಾವು ಅಲ್ಲಿನ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದೆವು. ಆದರೆ, ಅನೇಕ ವಿದ್ಯಾರ್ಥಿಗಳು ಅಲ್ಲೇ ಉಳಿದುಕೊಳ್ಳಲು ನಿರ್ಧಾರ ಕೈಗೊಂಡಿದ್ದರು. ಹೀಗಾಗಿ, 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಳ್ಳುವಂತಾಯಿತು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.