ETV Bharat / bharat

ಶೀಘ್ರವೇ ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಪ್ರಚಾರ ನಡೆಸಲಿದ್ದಾರೆ : ವದಂತಿಗೆ ತೆರೆ ಎಳೆದ ಕಾಂಗ್ರೆಸ್​

author img

By ETV Bharat Karnataka Team

Published : Nov 14, 2023, 6:42 PM IST

Updated : Nov 14, 2023, 6:48 PM IST

ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಪಕ್ಷ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ನಮ್ಮ ಉನ್ನತ ನಾಯಕರು ಇತರ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರಚಾರದಲ್ಲಿ ಬ್ಯೂಸಿ ಆಗಿದ್ದಾರೆ. ಅವರು ಶೀಘ್ರದಲ್ಲೇ ರಾಜಸ್ಥಾನಕ್ಕೆ ಬರುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜಸ್ಥಾನದ ಉಸ್ತುವಾರಿ ಎಸ್‌ಎಸ್ ರಾಂಧವಾ ತಿಳಿಸಿದ್ದಾರೆ.

ನವದೆಹಲಿ : ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ರಾಹುಲ್‌ ಗಾಂಧಿ ಅವರು ರಾಜಸ್ಥಾನದಲ್ಲಿ ಪ್ರಚಾರ ನಡೆಸಿಲ್ಲ ಎಂಬ ಊಹಾಪೋಹಕ್ಕೆ ಕಾಂಗ್ರೆಸ್‌ ತೆರೆ ಎಳೆದಿದೆ. ಕಳೆದ ವಾರಗಳಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಸ್ಥಾನಕ್ಕೆ ಭೇಟಿ ನೀಡಿದ್ದರೂ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ರಾಹುಲ್​ ಗಾಂಧಿ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಆದರೆ ರಾಜಸ್ಥಾನ ವೇಳಾಪಟ್ಟಿ ಪ್ರಕಟವಾದಾಗಿನಿಂದ ನಾಪತ್ತೆಯಾಗಿದ್ದರು ಎಂಬ ವದಂತಿಗಳು ಹರಡಿದ್ದವು. ಅವರು ಗೆಹ್ಲೋಟ್ ಜೊತೆ ಮನಸ್ತಾಪ ಹೊಂದಿದ್ದಾರೆ ಎಂಬ ವದಂತಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿತ್ತು.

ಆದರೆ ಕಾಂಗ್ರೆಸ್​ ಈ ಎಲ್ಲ ವದಂತಿಗಳನ್ನು ತಳ್ಳಿಹಾಕಿದೆ. ’’ಬಿಜೆಪಿಯವರು ನಮ್ಮ ವಿರುದ್ಧ ಮಾಡುತ್ತಿರುವ ಅಪಪ್ರಚಾರ. ಪಕ್ಷ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ನಮ್ಮ ಉನ್ನತ ನಾಯಕತ್ವವು ಇತರ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರಚಾರದಲ್ಲಿ ನಿರತವಾಗಿತ್ತು. ಅವರು ಶೀಘ್ರದಲ್ಲೇ ರಾಜಸ್ಥಾನಕ್ಕೆ ಬರಲಿದ್ದಾರೆ‘‘ ಎಂದು ರಾಜಸ್ಥಾನದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌ ಎಸ್ ರಾಂಧವಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ನವೆಂಬರ್ 16 ರಂದು ಮೂರು ಸಾರ್ವಜನಿಕ ರ‍್ಯಾಲಿಗಳನ್ನು ಉದ್ದೇಶಿಸಿ ರಾಹುಲ್ ರಾಜಸ್ಥಾನದ ಸೂರತ್‌ಗಢ, ತಾರಾನಗರ ಮತ್ತು ನೋಹರ್‌ನಲ್ಲಿ ಪ್ರಚಾರ ಮಾಡುವ ಸಾಧ್ಯತೆಯಿದೆ. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂಶಗಳು ಹೊರ ಬೀಳುತ್ತವೆ. ನವೆಂಬರ್ 16 ರಿಂದ ಖರ್ಗೆ ಮೂರು ದಿನ, ರಾಹುಲ್ ನಾಲ್ಕು ದಿನ ಮತ್ತು ಪ್ರಿಯಾಂಕಾ ಮೂರು ದಿನ ರಾಜಸ್ಥಾನದಲ್ಲಿ ಕಳೆಯಲಿದ್ದಾರೆ ಎಂದು ಎಐಸಿಸಿ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಐಸಿಸಿ ರಾಜಸ್ಥಾನದ ಉಸ್ತುವಾರಿ ಕಾರ್ಯದರ್ಶಿ ಖಾಜಿ ನಿಜಾಮುದ್ದೀನ್ ಅವರ ಪ್ರಕಾರ, "ರಾಹುಲ್ ರಾಜಸ್ಥಾನಕ್ಕೆ ಬದ್ಧರಾಗಿದ್ದಾರೆ. ಅವರು ತಮ್ಮ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ರಾಜಸ್ಥಾನದಲ್ಲಿ 18 ದಿನಗಳ ದೀರ್ಘಾವಧಿಯಲ್ಲಿ ನಡೆದರು. ರಾಜಸ್ಥಾನದಲ್ಲಿ ಜಾರಿಗೆ ತರುತ್ತಿರುವ ನೀತಿಗಳು ಅಥವಾ ಪಕ್ಷವು ನೀಡುತ್ತಿರುವ ಚುನಾವಣಾ ಭರವಸೆಗಳು ಯಾತ್ರೆಯ ಸಮಯದಲ್ಲಿ ಅವರು ರಾಜ್ಯದ ಬಡ ಮತ್ತು ಅಂಚಿನಲ್ಲಿರುವ ವರ್ಗಗಳೊಂದಿಗೆ ನಡೆಸಿದ ಸಂಭಾಷಣೆಗಳನ್ನು ಆಧರಿಸಿವೆ. ಖರ್ಗೆಯಿಂದ ಹಿಡಿದು ಬೂತ್ ಮಟ್ಟದ ಕಾರ್ಯಕರ್ತರವರೆಗೆ ಪಕ್ಷ ಒಗ್ಗಟ್ಟಾಗಿದೆ ಮತ್ತು ನಾವು ಎರಡನೇ ಅವಧಿಗೆ ಗೆಲ್ಲಲಿದ್ದೇವೆ ಎಂದು ನಿಜಾಮುದ್ದೀನ್ ಹೇಳಿದ್ದಾರೆ.

ರಾಹುಲ್ ಅವರ ರ‍್ಯಾಲಿಗಳ ಸ್ಥಳದಲ್ಲಿ ಏಕತೆಯ ಚಿತ್ರವನ್ನು ಪ್ರದರ್ಶಿಸಲು ವಿವಿಧ ಪೋಸ್ಟರ್‌ಗಳಲ್ಲಿ ತಮ್ಮ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅವರ ಫೋಟೋಗಳನ್ನು ಸೇರಿಸಲು ಗೆಹ್ಲೋಟ್ ಅವರಿಗೆ ಸೂಚಿಸಲಾಗಿದೆ. ಅದಕ್ಕೂ ಮೊದಲು ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧದ ವದಂತಿ ಪ್ರಚಾರದ ಬಗ್ಗೆ ಗೆಹ್ಲೋಟ್ ಖರ್ಗೆ ಅವರಿಗೆ ತಿಳಿಸಿದ್ದರು. ಇತ್ತೀಚಿಗೆ, ಗೆಹ್ಲೋಟ್ ಮತ್ತು ಪೈಲಟ್ ಇಬ್ಬರ ಚಿತ್ರ ಇರುವ ಹೋರ್ಡಿಂಗ್ಸ್​ ಹಿಡಿದು ಮಹಿಳೆಯರು ರಾಜ್ಯದ ವಿವಿಧ ಬಾಗಗಳಲ್ಲಿ ಪ್ರಚಾರ ನಡೆಸಿದ್ದರು. ನವೆಂಬರ್ 14 ಮತ್ತು 15 ರಂದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪೈಲಟ್ ಅವರನ್ನು ರಾಹುಲ್ ನಿದರ್ಶನದ ಮೇರೆಗೆ ಕೇಳಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅದಾನಿಯವರಂತಹ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಸಿಎಂ ಬಘೇಲ್.. ಮಾತಿನ ಭರದಲ್ಲಿ ರಾಹುಲ್​ ಗಾಂಧಿ ಎಡವಟ್ಟು, ವಿಡಿಯೋ ವೈರಲ್

Last Updated :Nov 14, 2023, 6:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.