ETV Bharat / bharat

ತೆಲಂಗಾಣದಲ್ಲಿ ಪುಟಿದೆದ್ದ ಬೆನ್ನಲ್ಲೇ ನೆರೆಯ ಒಡಿಶಾದತ್ತ ಕಾಂಗ್ರೆಸ್​ ದೃಷ್ಟಿ: ಪುನಶ್ಚೇತನ ಕಾರ್ಯತಂತ್ರ ಏನು?

author img

By ETV Bharat Karnataka Team

Published : Dec 2, 2023, 8:30 PM IST

congress-plans-odisha-revival-with kharge, rahul-priyanka rallies-in-december
ತೆಲಂಗಾಣದಲ್ಲಿ ಪುಟಿದೆದ್ದ ಬೆನ್ನಲ್ಲೇ ನೆರೆಯ ಒಡಿಶಾದತ್ತ ಕಾಂಗ್ರೆಸ್​ ದೃಷ್ಟಿ: ಪುನಶ್ಚೇತನದ ಕಾರ್ಯತಂತ್ರ ಏನು?

Congress plans Odisha Revival: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿರುವ ಕಾಂಗ್ರೆಸ್​ ಈಗ ಒಡಿಶಾದ ಮೇಲೆ ಗಮನ ಹರಿಸಲು ಸಜ್ಜಾಗಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ರ‍್ಯಾಲಿಗಳ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹಾಗೂ ಪಕ್ಷದ ಪುನಶ್ಚೇತನದ ಕಾರ್ಯತಂತ್ರವನ್ನು ರೂಪಿಸಿದೆ.

ನವದೆಹಲಿ: ತೆಲಂಗಾಣದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ ಎಂಬ ಎಕ್ಸಿಟ್ ಪೋಲ್‌ಗಳ ಫಲಿತಾಂಶಗಳು ಪಕ್ಷದಲ್ಲಿ ಹುಮ್ಮಸ್ಸು ಹೆಚ್ಚಿಸಿವೆ. ಇದೀಗ ನೆರೆಯ ಒಡಿಶಾದಲ್ಲಿ ಪಕ್ಷದ ಪುನಶ್ಚೇತನಕ್ಕೆ ಕಾರ್ಯತಂತ್ರ ರೂಪಿಸಲು ಪಕ್ಷದ ಉನ್ನತ ನಾಯಕರು ಸಜ್ಜಾಗಿದ್ದಾರೆ. ಬಿಜೆಡಿ ಆಡಳಿತ ಹಾಗೂ ಬಿಜೆಪಿ ಪ್ರತಿಪಕ್ಷದಲ್ಲಿರುವ ರಾಜ್ಯದಲ್ಲಿ ಕಾಂಗ್ರೆಸ್​ ಮೂರನೇ ಸ್ಥಾನ ಹೊಂದಿದೆ.

ತೆಲಂಗಾಣದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರದ ನೇತೃತ್ವವನ್ನು ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಹಿಸಿದ್ದರು. ಒಡಿಶಾದಲ್ಲಿ ಇದೇ ತಿಂಗಳಿಂದ ಕಾಂಗ್ರೆಸ್​ ತನ್ನ ಚಟುವಟಿಕೆಗಳಿಗೆ ಚಾಲನೆ ನೀಡಲು ತೀರ್ಮಾನಿಸಿದೆ. ಅದರಂತೆ, ಪಶ್ಚಿಮ ಒಡಿಶಾದಲ್ಲಿ ರಾಹುಲ್ ಗಾಂಧಿ ಅವರ ಪ್ರಮುಖ ಸಾರ್ವಜನಿಕ ಸಭೆಗಳನ್ನು ಪಕ್ಷ ಯೋಜಿಸುತ್ತಿದೆ. ಜೊತೆಗೆ ಪಕ್ಷದ ಅಧ್ಯಕ್ಷ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ.

ಶೀಘ್ರವೇ ಖರ್ಗೆ, ರಾಹುಲ್, ಪ್ರಿಯಾಂಕಾ ರ‍್ಯಾಲಿ: ''ಎಕ್ಸಿಟ್ ಪೋಲ್‌ಗಳ ಪ್ರಕಾರ, ತೆಲಂಗಾಣದಲ್ಲಿ ಕಾಂಗ್ರೆಸ್ ಗಮನಾರ್ಹ ಪುನರಾಗಮನವನ್ನು ಮಾಡುವ ಸಾಧ್ಯತೆಯಿದೆ. ತೆಲಂಗಾಣದಲ್ಲಿ ಪಕ್ಷವು ಗೆದ್ದರೆ, ಇದರ ಖಂಡಿತವಾಗಿಯೂ ಒಡಿಶಾ ಮತ್ತು ಅದರಾಚೆಗಿನ ಗಡಿ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಒಡಿಶಾ ಪಕ್ಷಕ್ಕೆ ಫಲವತ್ತಾದ ನೆಲ ಎಂದು ನಾವು ನಂಬಿದ್ದೇವೆ. ನಾವು ಆಕ್ರಮಣಕಾರಿ ಪ್ರಚಾರವನ್ನು ಪ್ರಾರಂಭಿಸಿದರೆ, ಪುನರುಜ್ಜೀವನ ಸಾಧ್ಯ'' ಎಂದು ಒಡಿಶಾದ ಎಐಸಿಸಿ ಉಸ್ತುವಾರಿ ಚೆಲ್ಲಕುಮಾರ್ 'ಈಟಿವಿ ಭಾರತ್‌'ಗೆ ತಿಳಿಸಿದರು.

''ನಾವು ಡಿಸೆಂಬರ್‌ನಲ್ಲಿ ಒಡಿಶಾದ ಪಶ್ಚಿಮ ಭಾಗಗಳಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಲು ಬೃಹತ್ ರ‍್ಯಾಲಿಯನ್ನು ಯೋಜಿಸುತ್ತಿದ್ದೇವೆ. ಈ ಭಾಗದಲ್ಲಿ ಕಾಂಗ್ರೆಸ್ ಇನ್ನೂ ಸಾಕಷ್ಟು ನೆಲಮಟ್ಟದ ಅಸ್ತಿತ್ವವನ್ನು ಹೊಂದಿದೆ. ಈ ರ‍್ಯಾಲಿಯು ಕೊರಾಪುಟ್ ಅಥವಾ ಸಮೀಪದ ಸ್ಥಳದಲ್ಲಿ ನಡೆಯಬಹುದು. ಅಲ್ಲದೇ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಪ್ರತ್ಯೇಕ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವಂತೆ ಮನವಿ ಮಾಡಿದ್ದೇವೆ. ಈ ತಿಂಗಳು ಸರಣಿಯಾಗಿ ಮೂರು ಪ್ರಮುಖ ನಾಯಕರ ರ‍್ಯಾಲಿಗಳನ್ನು ನಡೆಸಲು ನಾವು ಯೋಜಿಸಿದ್ದೇವೆ. ಅದು ನಮಗೆ ದೊಡ್ಡ ಆರಂಭ ಒದಗಲಿದೆ'' ಎಂದು ಅವರು ಹೇಳಿದರು.

ಎಐಸಿಸಿ ಉಸ್ತುವಾರಿ ಪ್ರಕಾರ, ರಾಹುಲ್ ಅವರ ರ‍್ಯಾಲಿಯು 2024ರ ಲೋಕಸಭಾ ಚುನಾವಣೆಗೆ ರಾಜ್ಯ ಘಟಕವನ್ನು ಸಜ್ಜುಗೊಳಿಸುವುದರೊಂದಿಗೆ ಬಿಜೆಡಿ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು, ಆಂದೋಲನ ರೀತಿಯ ಕಾರ್ಯಕ್ರಮಗಳ ಪ್ರಾರಂಭಕ್ಕೆ ವೇದಿಕೆಯಾಗಲಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಸರ್ಕಾರವನ್ನು ನಡೆಸಲು ಅಧಿಕಾರಶಾಹಿಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ಜಿಲ್ಲಾ ಮತ್ತು ತಹಸೀಲ್ ಮಟ್ಟದ ಅಧಿಕಾರಿಗಳು ಬಿಜೆಡಿಯ ಪದಾಧಿಕಾರಿಗಳಂತೆ ವರ್ತಿಸುತ್ತಾರೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ.

ಬಿಜೆಡಿ ಸರ್ಕಾರ, ಪಟ್ನಾಯಕ್ ಟಾರ್ಗೆಟ್​: ಇತ್ತೀಚೆಗಷ್ಟೇ ಸರ್ಕಾರಿ ಅಧಿಕಾರಿ ಹಾಗೂ ಮುಖ್ಯಮಂತ್ರಿ ಕಾರ್ಯದರ್ಶಿ ವಿ.ಕೆ.ಪಾಂಡಿಯನ್ ವಿಆರ್​ಎಸ್ (ಸ್ವಯಂ ನಿವೃತ್ತಿ) ತೆಗೆದುಕೊಂಡು ಬಿಜೆಡಿ ಸೇರಿದ್ದಾರೆ. ಇದನ್ನು ಉಲ್ಲೇಖಿಸಿ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್, ಮಾಜಿ ಐಎಎಸ್ ಅಧಿಕಾರಿ ಸಿಇಒ ಆಗಿ ರಾಜ್ಯವನ್ನು ನಡೆಸುತ್ತಿದ್ದರೆ, ನವೀನ್ ಪಟ್ನಾಯಕ್ ಜಮೀನ್ದಾರರು ಆಗಿದ್ದಾರೆ ಎಂದು ಟೀಕಿಸಿದ್ದರು. ಒಡಿಶಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ನರಸಿಂಗ ಮಿಶ್ರಾ ಇದೇ ರೀತಿಯ ಟೀಕೆ ಮಾಡಿದ್ದಾರೆ.

''ಕಳೆದ ವರ್ಷದವರೆಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಆದರೆ, ಇಂದು ನಾವು ಅಲ್ಲಿ ಸರ್ಕಾರ ರಚಿಸಲಿದ್ದೇವೆ. ರಾಜಕೀಯದಲ್ಲಿ ಅಲ್ಪಾವಧಿಯಲ್ಲಿ ವಿಷಯಗಳು ಬದಲಾಗಬಹುದು ಮತ್ತು ನಾವು ಅದನ್ನು ಇಲ್ಲಿಯೂ ಪುನರಾವರ್ತಿಸಬಹುದು. ಪುರಿ ದೇವಸ್ಥಾನದ ಎಲ್ಲ ನಾಲ್ಕು ದ್ವಾರಗಳನ್ನು ತೆರೆಯುವ ವಿಷಯದ ಬಗ್ಗೆ ನಾವು ಈಗಾಗಲೇ ಧ್ವನಿ ಎತ್ತಿದ್ದೇವೆ. ಏಕೆಂದರೆ, ಭಕ್ತರು ಒಂದೇ ದ್ವಾರದಿಂದ ಗರ್ಭಗುಡಿಗೆ ಭಗವಂತನ ದರ್ಶನಕ್ಕೆ ಹೋಗುವಾಗ ಅನಾನುಕೂಲತೆಯನ್ನು ಎದುರಿಸುತ್ತಿದ್ದಾರೆ'' ಎಂದು ನರಸಿಂಗ ಮಿಶ್ರಾ 'ಈಟಿವಿ ಭಾರತ್‌'ಗೆ ಮಾಹಿತಿ ನೀಡಿದರು.

ಮುಂದುವರೆದು, ''ರಾಜ್ಯದಲ್ಲಿ 2019ರಿಂದ ಕಾಂಗ್ರೆಸ್ ಪ್ರಭಾವ ತಗ್ಗಿದ್ದು, ಮೂರನೇ ಸ್ಥಾನವನ್ನು ತಲುಪಿದೆ. ಆದರೆ, ನಾವು ಕೆಲವು ದಶಕಗಳ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದೇವೆ, ಹೀಗಾಗಿ ಪಕ್ಷವನ್ನು ಪುನಶ್ಚೇತನಗೊಳಿಸುವುದು ಕಷ್ಟಕರವಲ್ಲ'' ಎಂದು ಅಭಿಪ್ರಾಯಪಟ್ಟರು. ಪಕ್ಷದ ಒಳಗಿನವರ ಪ್ರಕಾರ, ಕಳೆದ ವರ್ಷಗಳಲ್ಲಿ ರಾಜ್ಯ ನಾಯಕತ್ವವನ್ನು ಎಐಸಿಸಿ ಬಾರಿ ಬದಲಾಯಿಸಿದೆ. ಆದರೆ ಸ್ಥಳೀಯ ನಾಯಕರ ಆಕ್ರಮಣಶೀಲತೆಯ ಕೊರತೆಯಿಂದ ಹೆಚ್ಚಿನ ಯಶಸ್ಸು ಕಾಣದೆ ಮತ್ತು ಬಲವಾದ ಸಂಘಟನೆಯ ಕೊರತೆಯಿಂದ ಪಕ್ಷದ ಕಾರ್ಯಕರ್ತರು ನಿದ್ರಾವಸ್ಥೆಗೆ ಜಾರಿದ್ದಾರೆ.

ಈ ಬಗ್ಗೆ ಮಾತನಾಡಿದ ಚೆಲ್ಲ ಕುಮಾರ್, "ಸಂಘಟನೆ ಒಂದು ಕಾಳಜಿಯ ವಿಷಯವಾಗಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ ನಾವು ಕಾರ್ಯಕರ್ತರನ್ನು ಚಾರ್ಜ್​ ಮಾಡುವ ಮೂಲಕ ಅವರನ್ನು ಸಕ್ರಿಯಗೊಳಿಸಬೇಕು. ರಾಜ್ಯ ನಾಯಕತ್ವ ಬದಲಾವಣೆ ಪರಿಹಾರವಲ್ಲ. ನಾವು ಇತ್ತೀಚೆಗೆ ಆಕ್ರಮಿತ ಭೂಮಿಯನ್ನು ಉಳುಮೆಗಾರರಿಗೆ ಹಿಂದಿರುಗಿಸಲು ಒತ್ತಾಯಿಸಲು ಮತ್ತು ರೈತರನ್ನು ಸಶಕ್ತಗೊಳಿಸಲು ಆಂದೋಲನ ಪ್ರಾರಂಭಿಸಿದ್ದೇವೆ. ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಕುರಿತು ಇತ್ತೀಚೆಗೆ ಖರ್ಗೆ ಅವರೊಂದಿಗೂ ಚರ್ಚಿಸಿದ್ದೇನೆ'' ಎಂದು ವಿವರಿಸಿದರು.

ಇದನ್ನೂ ಓದಿ: ಎಕ್ಸಿಟ್ ಪೋಲ್​ನಿಂದ ಗಾಬರಿ ಬೇಡ, ನಾವೇ ಅಧಿಕಾರಕ್ಕೆ ಬರ್ತೇವೆ: ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ ಸಿಎಂ ಕೆಸಿಆರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.