ETV Bharat / bharat

"ನ್ಯಾಯಾಲಯ ತಾರೀಖ್ ಪೆ ತಾರೀಖ್​ ಆಗಲು ಸಾಧ್ಯವಿಲ್ಲ..ಅನಗತ್ಯವಾಗಿ ಪ್ರಕರಣಗಳನ್ನು ಮುಂದೂಡಬೇಡಿ" ಸಿಜೆಐ ಚಂದ್ರಚೂಡ್​

author img

By ETV Bharat Karnataka Team

Published : Nov 3, 2023, 8:58 PM IST

ಸುಪ್ರೀಂ ಕೋರ್ಟ್​ನಲ್ಲಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಅವರು ವಕೀಲರಿಗೆ ಅನಿವಾರ್ಯತೆ ಇಲ್ಲದೇ ಪ್ರಕರಣಗಳನ್ನು ಮುಂದೂಡಬೇಡಿ ಎಂದು ಸಲಹೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ನಿಜವಾಗಿಯೂ ಅಗತ್ಯವಿಲ್ಲದ ಪ್ರಕರಣಗಳನ್ನು ಮುಂದೂಡಬೇಡಿ. ಕೋರ್ಟ್​ ತಾರೀಖ್ ಪೆ ತಾರೀಖ್(date-pay-date) ನ್ಯಾಯಾಲಯವಾಗಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ವಕೀಲರಿಗೆ ಹೇಳಿದರು.

ಪ್ರಕರಣಗಳ ವಿಚಾರಣೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಾಲಯದಲ್ಲಿ ತೋರಿಸುತ್ತಾ, ಸೆಪ್ಟೆಂಬರ್ ಮತ್ತು ಅಕ್ಟೋಬರ್ 2 ತಿಂಗಳುಗಳಲ್ಲಿ ವಕೀಲರು ಸುಮಾರು 3,688 ಪ್ರಕರಣಗಳಲ್ಲಿ ಅರ್ಜಿ ವಿಚಾರಣೆಗಳನ್ನು ಮುಂದೂಡಿಕೆ ಮಾಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಈ ಅಂಕಿ- ಅಂಶಗಳನ್ನು ಮುಂದಿಟ್ಟು ಮುಖ್ಯನ್ಯಾಯಮೂರ್ತಿಗಳು ಈ ಮಾತು ಹೇಳಿದ್ದಾರೆ.

ಇದೇ ವಿಚಾರವಾಗಿ ಮುಂದುವರೆದು ಮಾತನಾಡಿದ ಅವರು, ಪ್ರಕರಣಗಳ ಅವಧಿಯನ್ನು ಕನಿಷ್ಠಕ್ಕೆ ಇಳಿಸುವುದನ್ನು ಖಚಿತಪಡಿಸಿಕೊಳ್ಳಲು ಆ ವಿಷಯಗಳನ್ನು ಆದ್ಯತೆ ಮೇಲೆ ಯಾವುದನ್ನು ವಿಚಾರಣೆಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಹಾಗೇ ಇಲ್ಲಿ ಮುಂದೂಡಲ್ಪಟ್ಟಿರುವ ಒಟ್ಟು ಪ್ರಕರಣಗಳೇ ನಿಮಗೆ ವಾಸ್ತವತೆ ಏನು ಎಂಬುದನ್ನು ವಿವರಿಸುತ್ತದೆ. ಆದ್ದರಿಂದ ಈ ನ್ಯಾಯಾಲಯವು ತಾರೀಖ್ ಪೆ ತಾರೀಖ್ ನ್ಯಾಯಾಲಯವಾಗುವುದು ನನಗೆ ಇಷ್ಟವಿಲ್ಲ. ಈ ರೀತಿಯಾಗಿ ಪ್ರಕರಣಗಳನ್ನು ಮುಂದು ಹಾಕಲ್ಪಟ್ಟರೆ ನಾವು ನಾಗರಿಕರಿಗೆ ಹೇಗೆ ಉತ್ತರ ಕೊಡಲು ಸಾಧ್ಯವಾಗುತ್ತದೆ ಹಾಗೂ ಹೇಗೆ ಸಮರ್ಥನೆ ಮಾಡಿಕೊಳ್ಳಲು ಸಾಧ್ಯ ಹೇಳಿ ಎಂದು ವಕೀಲರನ್ನು ಪ್ರಶ್ನಿಸಿದರು. ಇದೇ ರೀತಿಯ ಪ್ರವೃತ್ತಿ ಮುಂದುವರೆದರೆ, ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ ಸಾರ್ವಜನಿಕರಲ್ಲಿ ಉತ್ತಮ ಭಾವನೆ ಮೂಡುವುದಿಲ್ಲ. ಹೀಗಾಗಿ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಸರಿಪಡಿಸಿಕೊಳ್ಳಲು ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು, ಇಂದು ಬಾರ್​ ಕೌನ್ಸಿಲ್​ನ ಸದಸ್ಯರಿಗೆ ಒಂದು ವಿನಂತಿಯನ್ನು ಮಾಡುತ್ತಿದ್ದೇನೆ. ಅಂದ ಹಾಗೇ ಇವತ್ತೇ 177 ಪ್ರಕರಣಗಳ ಮುಂದೂಡಿಕೆಯ ಅರ್ಜಿಗಳಿವೆ. ಇವುಗಳ ಮೇಲೆ ನಾನು ನಿಗಾ ಇಡುತ್ತಿದ್ದೇನೆ. ಇವುಗಳಿಗೆ ಸಂಬಂಧಿಸಿದ ಕೆಲವು ಡೇಟಾಗಳನ್ನು ಪಡೆದುಕೊಂಡಿದ್ದೇನೆ. ಈ ಸೆಪ್ಟೆಂಬರ್​ 1 ರಿಂದ ನವೆಂಬರ್ 3 ರವರೆಗೆ ಪ್ರತಿ ದಿನ ಸರಾಸರಿ 154 ಮುಂದೂಡಿಕೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸೆಪ್ಟೆಂಬರ್ 1 ರಿಂದ 2,361 ವಿಷಯಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಸುಮಾರು 15 - 20 ಪ್ರತಿಶತದಷ್ಟು ಹೊಸದಾಗಿ ಮುಂದೂಡಲ್ಪಟ್ಟ ಪ್ರಕರಣಗಳಾಗಿವೆ. ಸೆಪ್ಟೆಂಬರ್ 1 ರಿಂದ ನವೆಂಬರ್ 3 ರವರೆಗೆ ಪ್ರತಿದಿನ, ಸರಾಸರಿ 59 ಇಂತಹ ಉಲ್ಲೇಖಗಳನ್ನೊಳಗೊಂಡ ಅರ್ಜಿಗಳೇ ಇರುತ್ತವೆ ಎಂದು ಅಂಕಿ- ಅಂಶ ಇಟ್ಟು ಮುಖ್ಯನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು.

ಹೀಗಾಗೀ ನಿಜವಾಗಿಯೂ ಅನಿವಾರ್ಯತೆ ಇಲ್ಲದ ಪ್ರಕರಣಗಳಿಗೆ ಮುಂದೂಡಿಕೆಯನ್ನು ಕೇಳಬೇಡಿ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ವಕೀಲರನ್ನು ಕೇಳಿಕೊಂಡರು.

ಇದನ್ನೂ ಓದಿ: ಸಭಾಪತಿ ಜಗದೀಪ್​ ಧನಕರ್​ಗೆ ಬೇಷರತ್​ ಕ್ಷಮೆಯಾಚಿಸಿ: ರಾಘವ್​ ಚಡ್ಡಾಗೆ ಸುಪ್ರೀಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.