ETV Bharat / bharat

ಸಭಾಪತಿ ಜಗದೀಪ್​ ಧನಕರ್​ಗೆ ಬೇಷರತ್​ ಕ್ಷಮೆಯಾಚಿಸಿ: ರಾಘವ್​ ಚಡ್ಡಾಗೆ ಸುಪ್ರೀಂ ಸೂಚನೆ

author img

By ETV Bharat Karnataka Team

Published : Nov 3, 2023, 3:58 PM IST

SC instrunction To MP Raghav Chaddha: ಆಗಸ್ಟ್​ 11 ರಂದು ವಿಶೇಷ ಹಕ್ಕು ಉಲ್ಲಂಘನೆ ಆರೋಪದ ಮೇಲೆ ಸಂಸದ ರಾಘವ್​ ಚಡ್ಡಾ ಅವರನ್ನು ಸದನದಿಂದ ಅನಿರ್ಧಿಷ್ಟಾವಧಿಗೆ ಅಮಾನತುಗೊಳಿಸಲಾಗಿತ್ತು.

Supreme Court and Raghav Chaddha
ಸುಪ್ರೀಂ ಕೋರ್ಟ್​ ಹಾಗೂ ರಾಘವ್​ ಚಡ್ಡಾ

ನವದೆಹಲಿ: ರಾಜ್ಯಸಭಾ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ಜಗದೀಪ್​ ಧನಕರ್​ ಅವರನ್ನು ಭೇಟಿಯಾಗಿ ಆಯ್ಕೆ ಸಮಿತಿ ವಿವಾದಕ್ಕೆ ಸಂಬಂಧಿಸಿದಂತೆ ಬೇಷರತ್​ ಕ್ಷಮೆಯಾಚಿಸುವಂತೆ ಆಪ್​ ಸಂಸದ ರಾಘವ್​ ಚಡ್ಡಾ ಅವರಿಗೆ ಸುಪ್ರೀಂಕೋರ್ಟ್​ ಶುಕ್ರವಾರ ಸೂಚಿಸಿದೆ.

ಸಂಸದ ರಾಘವ್​ ಚಡ್ಡಾ ಅವರನ್ನು ಸದನದಿಂದ ಅನಿರ್ಧಿಷ್ಟಾವಧಿಗೆ ಅಮಾನತುಗೊಳಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​, ರಾಜ್ಯಸಭೆ ಸದನದ ವೇಳೆ ಗೊಂದಲ ಸೃಷ್ಟಿಸಿರುವ ಬಗ್ಗೆ ನೀವು ಸಭಾಪತಿಯವರಲ್ಲಿ ಕ್ಷಮೆಯಾಚಿಸಬೇಕು. ಇದು ಸದನ ಹಾಗೂ ಉಪ ರಾಷ್ಟ್ರಪತಿ ಅವರ ಘನತೆಯನ್ನು ಒಳಗೊಂಡಿರುವ ಕಾರಣ ತುಂಬಾ ಗಂಭೀರ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಜೊತೆಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಅವರು, ರಾಜ್ಯಸಭಾ ಸಭಾಪತಿ ಜಗದೀಪ್​ ಧನಕರ್​ ಅವರು ಕೂಡ ರಾಘವ್​ ಚಡ್ಡಾ ಅವರ ಕ್ಷಮೆಯನ್ನು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ತಿಳಿಸಿದರು. ರಾಘವ್​ ಚಡ್ಡಾ ಪರ ವಕೀಲ ಶದನ್​ ಫರಾಸತ್​ ಅವರು, ತಮ್ಮ ಕಕ್ಷಿದಾರ ರಾಘವ್​ ಚಡ್ಡಾ ರಾಜ್ಯಸಭೆಯಲ್ಲಿ ಅತ್ಯಂತ ಕಿರಿಯರು. ಕ್ಷಮೆ ಯಾಚಿಸಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಈ ಹಿಂದೆಯೇ ಅವರು ಕ್ಷಮೆ ಯಾಚಿಸಲು ಸಿದ್ಧರಾಗಿದ್ದರು ಎಂದು ಹೇಳಿದರು.

ಆಗಸ್ಟ್​ 11 ರಂದು ಮುಂಗಾರು ಅಧಿವೇಶನದ ಸಂದರ್ಭದಲ್ಲಿ ವಿಶೇಷ ಹಕ್ಕು ಉಲ್ಲಂಘನೆಯ ಆರೋಪದ ಮೇಲೆ ಚಡ್ಡಾ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ತಮ್ಮ ಅನುಮತಿ ಇಲ್ಲದೇ ಸದನದ ಸಮಿತಿಯೊಂದರಲ್ಲಿ ತಮ್ಮನ್ನು ಸೇರ್ಪಡೆಗೊಳಿಸಲು ರಾಘವ್​ ಚಡ್ಡಾ ಅವರು ಉದ್ದೇಶಿಸಿದ್ದರು ಎಂದು ಐವರು ಸಂಸದರು ಆರೋಪಿಸಿದ್ದರು. ಇದರ ಆಧಾರದ ಮೇಲೆ ಸದನದ ನಾಯಕ ಪೀಯೂಶ್​ ಗೋಯಲ್​ ಅವರು ರಾಘವ್​ ಚಡ್ಡಾ ಅವರನ್ನು ಅನಿರ್ಧಿಷ್ಟಾವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಿದ್ದರು. ಆ ನಿರ್ಣಯವನ್ನು ಮೇಲ್ಮನೆ ಧ್ವನಿಮತದಿಂದ ಅಂಗೀಕರಿಸಿತ್ತು.

ರಾಜ್ಯಸಭೆಯಿಂದ ತಮ್ಮನ್ನು ಅಮಾನತುಗೊಳಿಸಿರುವುದನ್ನು ರಾಘವ್​ ಚಡ್ಡಾ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಅಕ್ಟೋಬರ್​ 30 ರಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​ ಹಾಗೂ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್​ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ರಾಘವ್​ ಚಡ್ಡಾ ಅಮಾನತು ಕುರಿತ ಅರ್ಜಿ ವಿಚಾರಣೆ ನಡೆಸಿತ್ತು. ಈ ವೇಳೆ, ಸಂಸದ ರಾಘವ್​ ಚಡ್ಡ ಆವರನ್ನು ರಾಜ್ಯಸಭೆಯಿಂದ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿರುವುದು ಗಂಭೀರ ಕಳವಳದ ಸಂಗತಿಯಾಗಿದೆ. ಈಗಾಗಲೇ 75 ದಿನಗಳು ಕಳೆದಿದ್ದು, ರಾಘವ ಅವರು ಆಡಳಿತ ಪಕ್ಷ ಪ್ರತಿನಿಧಿಸುವ ಧ್ವನಿಗಿಂತ ಭಿನ್ನ ಧ್ವನಿಯನ್ನು ಪ್ರತಿನಿಧಿಸುವವರಾಗಿದ್ದಾರೆ ಎಂದು ಹೇಳಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.

ಇದನ್ನೂ ಓದಿ : 'ಅಮಾನತುಗೊಳಿಸಿದ ಸಂಸದ' ಎಂದು ಟ್ವಿಟರ್​ ಬಯೋ ಬದಲಾಯಿಸಿದ ರಾಘವ್​ ಚಡ್ಡಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.