ETV Bharat / bharat

ಹೊಸದಾಗಿ ನೇಮಕವಾದ ಸರ್ಕಾರಿ ಶಿಕ್ಷಕನ ಕಿಡ್ನಾಪ್ ಮಾಡಿ, ಬಲವಂತದಿಂದ ಮದುವೆ ಮಾಡಿಸಿದ್ರು!

author img

By ETV Bharat Karnataka Team

Published : Dec 1, 2023, 8:57 PM IST

Newly appointed govt teacher abducted in Bihar: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಸರ್ಕಾರಿ ಶಿಕ್ಷಕನನ್ನು ಅಪಹರಿಸಿ, ಬಲವಂತದಿಂದ ಮದುವೆ ಮಾಡಿಸಿದ ಘಟನೆ ವರದಿಯಾಗಿದೆ.

Etv Bharat
Etv Bharat

ವೈಶಾಲಿ (ಬಿಹಾರ): ಹೊಸದಾಗಿ ನೇಮಕವಾಗಿದ್ದ ಸರ್ಕಾರಿ ಶಿಕ್ಷಕನನ್ನು ಅಪಹರಿಸಿ, ಮದುವೆ ಮಾಡಿಸಿದ ಸಿನಿಮೀಯ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಗುರುವಾರ ಸಂಜೆ ಹೊತ್ತಿಗೆ ಅಪಹರಣಕ್ಕೊಳಗಾದ ಶಿಕ್ಷಕ ಹಾಗೂ ವಧುವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಇದೊಂದು ಬಲವಂತದ ಮದುವೆಯ ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ.

ಇಲ್ಲಿನ ಪತೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಯ್ಯ ಮಾಲ್ಪುರ್ ಗ್ರಾಮದ ನಿವಾಸಿ ಗೌತಮ್ ಕುಮಾರ್ ಎಂಬುವವರೇ ಅಪಹರಣಕ್ಕೊಳಗಾದ ಶಿಕ್ಷಕ ಎಂದು ಗುರುತಿಸಲಾಗಿದೆ. ಇದೇ ವರ್ಷ ಗೌತಮ್ ಕುಮಾರ್ ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿಕ್ಷಕರಾಗಿ ಆಯ್ಕೆಯಾಗಿದ್ದರು. ಬುಧವಾರ ಶಾಲೆಯಿಂದಲೇ ಶಿಕ್ಷಕನನ್ನು ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ಅಪಹರಿಸಿದ್ದರು.

ನಡೆದಿದ್ದೇನು?: ಹೊಸದಾಗಿ ಶಿಕ್ಷಕ ಹುದ್ದೆಗೆ ನೇಮಕವಾರುವ ಗೌತಮ್ ಕುಮಾರ್ ಪತೇಪುರ ಬ್ಲಾಕ್‌ನ ರಾಯ್‌ಪುರದ ಉನ್ನತೀಕರಿಸಿದ ಮಧ್ಯಮ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಎಂದಿನಂತೆ ಬುಧವಾರ ಶಾಲಾ ಕರ್ತವ್ಯಕ್ಕೆ ಹಾಜರಾಗಿದ್ದರು. ಇದೇ ವೇಳೆ, ಬೊಲೆರೋದಲ್ಲಿ ಬಂದ ನಾಲ್ವರು ಶಿಕ್ಷಕ ಗೌತಮ್ ಕುಮಾರ್​ನನ್ನು ಅಪಹರಿಸಿದ್ದಾರೆ.

ಶಿಕ್ಷಕನ ಕಿಡ್ನಾಪ್​ ಕಣ್ಣಾರೆ ಕಂಡ ಶಿಕ್ಷಕಿ: ಶಾಲೆಯಿಂದ ಶಿಕ್ಷಕನನ್ನು ಅಪಹರಿಸಿದ ಸಂದರ್ಭದಲ್ಲಿ ಶಿಕ್ಷಕಿ ಚಂದಾ ಕುಮಾರಿ ಕೂಡ ಜೊತೆಗಿದ್ದರು. ಶಿಕ್ಷಕನ ಕಿಡ್ನಾಪ್​ ಮಾಡ ಕಣ್ಣಾರೆ ಕಂಡ ಈ ಶಿಕ್ಷಕಿ, ದುಷ್ಕರ್ಮಿಗಳು ಬಂದು ಯಾವುದೋ ಸಬೂಬು ಹೇಳಿ ಶಿಕ್ಷಕನನ್ನು ಕರೆದು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾದರು ಎಂದು ತಿಳಿಸಿದ್ದಾರೆ. ಅಲ್ಲದೇ, ಈ ವಿಷಯವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ, ಅಷ್ಟರಲ್ಲಿ ಕಾರು ಚಲಾಯಿಸಿಕೊಂಡು ತೆರಳಿದ್ದಾರೆ.

ನಾವಿಬ್ಬರೂ ಶಾಲೆಯಲ್ಲಿ ಕುಳಿತಿದ್ದೆವು. ಈ ವೇಳೆ, ನಮಗೆ ಗುರುತು ಸಿಗದ ವ್ಯಕ್ತಿಯೊಬ್ಬ ಬಂದು, ಶಿಕ್ಷಕ ಗೌತಮ್ ಕುಮಾರ್ ಅವರನ್ನು ಉದ್ದೇಶಿಸಿ ಸರ್ ಇಲ್ಲಿಗೆ ಬರುವಂತೆ ಹೇಳಿ ಕರೆದ. ಇದರಿಂದ ಶಿಕ್ಷಕ ಆ ವ್ಯಕ್ತಿ ಬಳಿಗೆ ಹೋದಾಗ, ಇತರರು ಸೇರಿಕೊಂಡು ಬೊಲೆರೋ ಕಾರಿನಲ್ಲಿ ಬಲವಂತದಿಂದ ಹತ್ತಿಸಿಕೊಂಡರು. ಇದರಿಂದ ಗೌತಮ್ ಕುಮಾರ್ ಕೂಗಿಕೊಂಡರು. ಆದರೂ, ಅಷ್ಟರಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ಕೂರಿಸಿಕೊಂಡು ಹೋದರು ಎಂದು ಶಿಕ್ಷಕಿ ಚಂದಾ ಕುಮಾರಿ ಮಾಹಿತಿ ನೀಡಿದ್ದಾರೆ.

ಮದುವೆಯಾದ ಬಳಿಕ ಶಿಕ್ಷಕ ಪತ್ತೆ: ಮತ್ತೊಂದೆಡೆ, ಶಿಕ್ಷಕನ ಅಪಹರಣ ವಿಷಯ ತಿಳಿದ ತಕ್ಷಣವೇ ಕುಟುಂಬಸ್ಥರು ಗಲಾಟೆ ಆರಂಭಿಸಿದ್ದರು. ಅಲ್ಲದೇ, ಈ ಘಟನೆಯಿಂದ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಲ್ಲರೂ ಸೇರಿ ರಸ್ತೆ ತಡೆ ನಡೆಸಿದ್ದರು. ಇದೇ ವೇಳೆ, ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಆಕ್ರೋಶಿತ ಜನರನ್ನು ಸಮಾಧಾನ ಪಡಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಮರು ದಿನವೂ ಶಿಕ್ಷಕಕ ಪತ್ತೆಯಾದ ಕಾರಣ ಜನತೆ ಮತ್ತೆ ಆಕ್ರೋಶಗೊಂಡಿದ್ದರು. ಕೊನೆಗೆ ಗುರುವಾರ ಸಂಜೆ ಪೊಲೀಸರು ಅಪಹರಣಕ್ಕೊಳಗಾದ ಶಿಕ್ಷಕನನ್ನು ಪತ್ತೆ ಹಚ್ಚಿದ್ದಾರೆ.

ಮಹ್ನಾರ್ ಎಂಬಲ್ಲಿ ದಾಳಿ ನಡೆಸಿ ಶಿಕ್ಷಕನನ್ನು ಪತ್ತೆ ಮಾಡಲಾಗಿದ್ದು, ಈತನಿಗೆ ಮದುವೆ ಮಾಡಲಾಗಿದೆ. ಇದು ಬಲವಂತದ ಮದುವೆಯ ಪ್ರಕರಣವಾಗಿದೆ. ಮತ್ತೊಂದೆಡೆ, ಅಪಹರಣದ ಆರೋಪದ ಮೇಲೆ ಕುಟುಂಬಸ್ಥರು ದೂರು ನೀಡಿದ್ದಾರೆ. ಹೀಗಾಗಿ ಎಲ್ಲ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವೇ ಈ ಪ್ರಕರಣದ ಹಿಂದಿನ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸ್​ ಅಧಿಕಾರಿ ಶಿವೇಂದ್ರ ನಾರಾಯಣ್ ಹೇಳಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಶಾಲಾ ಶಿಕ್ಷಕಿ ಅಪಹರಣ ಕೇಸ್​ ಸುಖಾಂತ್ಯ: ಮದುವೆ ನಿರಾಕರಿಸಿದ್ದಕ್ಕೆ ಕಿಡ್ನ್ಯಾಪ್​ ಮಾಡಿದ ಸಂಬಂಧಿಕನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.